ಜನಾರ್ದನ ರೆಡ್ಡಿ ಏನು ಕೊಟ್ಟರೂ ಪ್ರಸಾದ ಅಂತ ಸ್ವೀಕರಿಸುತ್ತೇನೆ: ಡಿಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 15: ಜನಾರ್ದನ ರೆಡ್ಡಿಯವರು ದೊಡ್ಡ ಮನುಷ್ಯರು. ಅವರು ದೊಡ್ಡ ಮಾತು ಆಡುತ್ತಾರೆ. ಅವರಂತಹ ಬಗ್ಗೆ ನಾವು ಮಾತನಾಡಲು ಸಾಧ್ಯವಿಲ್ಲ. ಅವರು ಏನು ಬೇಕಾದರೂ ಕೊಡಬಹುದು. ಅದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತೇವೆ ಎಂದು ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರವು ತಮ್ಮನ್ನು ಟಾರ್ಗೆಟ್ ಮಾಡುತ್ತಿದೆ. ತಾವು ಕೈಕಟ್ಟಿ ಕೂರುವುದಿಲ್ಲ ಎಂಬ ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
'ಬಿಗ್ ಪೀಪಲ್ ಬಿಗ್ ಟಾಕ್. ನನಗೆ ನನ್ನದೇ ಆದ ತುಂಬಾ ಕೆಲಸಗಳಿವೆ. ನಾನು ಯಾರ ತಂಟೆಗೂ ಹೋಗುವುದಿಲ್ಲ. ಉಪ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಎಲ್ಲರನ್ನೂ ಅಣ್ಣ ಅಕ್ಕ ಎಂದು ಮಾತನಾಡಿಸಿಕೊಂಡು ಬಂದಿದ್ದೇನೆ. ಚುನಾವಣೆ ಸಮಯದಲ್ಲಿಯೂ ನಾನು ಅವರ ಸುದ್ದಿಗೆ ಹೋಗಿರಲಿಲ್ಲ. ಅವರ ಮೇಲೆ ನನಗೇನು ಸಿಟ್ಟು ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು.

ರಾಜಕೀಯ ಒತ್ತಡಕ್ಕೆ ಮಣಿದು ತಮ್ಮನ್ನು ಬಂಧಿಸಲಾಗಿದೆ. ತಮ್ಮ ವಿರುದ್ಧ ವಿನಾಕಾರಣ ದ್ವೇಷ ರಾಜಕಾರಣ ಮಾಡಲಾಗುತ್ತಿದೆ. ಅದಕ್ಕಾಗಿ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ. ಇನ್ನು ನಾನು ಕೈಕಟ್ಟಿ ಸುಮ್ಮನೆ ಕೂರುವುದಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದರು.
ರಾಜ್ಯದ ಕೆಲವು ಕ್ರೂರ ವ್ಯಾಘ್ರಗಳು ಪುಣ್ಯಕೋಟಿಯಂತಹ ನನ್ನ ಮಾಂಸ ಖಂಡ, ರಕ್ತವನ್ನು ಹೀರಲು ಮುಂದಾಗಿವೆ. ಈ ರಾಕ್ಷಸ ರಾಜ್ಯದಲ್ಲಿ ನಾನು ಪುಣ್ಯಕೋಟಿಯಂತೆ ಹುಲಿಯ ಮುಂದೆ ಹೋಗಲು ಸಿದ್ಧನಿದ್ದೇನೆ. ಜನರ ಆಶೀರ್ವಾದ ಇದ್ದರೆ ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದರು.












Click it and Unblock the Notifications