ಗುರು ರೆಹಮಾನ್ ಗೆ ಜೈ ಹೋ ಎಂದ ಅರ್ಜುನ್ ಜನ್ಯಾ
ಮದ್ರಾಸಿನ ಮೊಜಾರ್ಟ್ ಎಂದು ಖ್ಯಾತರಾಗಿರುವ ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಅವರ ಜನ್ಮದಿನದ ಅಂಗವಾಗಿ ಅರ್ಜುನ್ ಜನ್ಯಾರವರು ಗುರುವಂದನೆ ಅಂತ "ಜೈ ಹೋ ಎ.ಆರ್.ರೆಹಮಾನ್" ಎಂಬ ಅಭೂತಪೂರ್ವ ಸಂಗೀತ ಹಬ್ಬವನ್ನ ನಡೆಯಿಸಿಕೊಟ್ಟರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ(ಜನವರಿ 06)ದಂದು ನಡೆದ ಈ ಕಾರ್ಯಕ್ರಮದ ವರದಿ ಇಲ್ಲಿದೆ...
ಚಿತ್ರಗಳು: "ಜೈ ಹೋ ಎ.ಆರ್.ರೆಹಮಾನ್" ಸಂಗೀತ ಹಬ್ಬ
ಮಹಾಭಾರತದಲ್ಲಿ ಏಕಲವ್ಯಗೆ ದ್ರೋಣಾಚಾರ್ಯರು ಮಾನಸ ಗುರುಗಳಾಗಿದ್ರು ಅಂತ ಮಹಾಭಾರತದಲ್ಲಿಯ ಉಲ್ಲೇಖದಿಂದ ತಿಳಿದಿದ್ದೇವೆ. ಅದೇ ರೀತಿ, ಸಾಮಾನ್ಯವಾಗಿ ಯಾರಾದ್ರೂ ಯಾರನ್ನಾದರೂ ಮಾನಸ ಗುರು ಅಂತ ಮಾಡ್ಕೊಂಡು ಅವರಿಂದ ಕಲಿತೆ ಅಂದ್ರೆ ನಂಬೋದು ಅಷ್ಟು ಸುಲಭವಲ್ಲ, ಹೇಗಪ್ಪಾ ಸಾಧ್ಯ ಅನ್ಸುತ್ತೆ, ಸುಮ್ನೆ ಅಂತಾರೆ ಬಿಡು ಅಂತ ಉಡಾಫೆ ಮಾಡ್ತೀವಿ.
ಅಂಥ ಒಂದು ಗುರು-ಶಿಷ್ಯರ ಸಂಬಂಧದ ನಿದರ್ಶನಕ್ಕೆ ಸಾಕ್ಷಿಯಾದ ಮೇಲೆ, ಹೀಗೂ ಇರಬಹುದು ಎಂಬ ಮಾತಿನ ಬದಲಾಗಿ, ಹೀಗೂ ಉಂಟು ಅನ್ನಬಹುದು ಖಂಡಿತವಾಗಿ. ಹೌದು, ಶನಿವಾರ ಆರನೇ ತಾರೀಖು ಜನವರಿ-2018ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂತಹದೊಂದು ನಿದರ್ಶನಕ್ಕೆ ಕಾರಣರಾಗಿದ್ದು ಮ್ಯಾಜಿಕಲ್ ಕಾಂಪೋಸರ್ ಎಂದು ಖ್ಯಾತರಾಗಿರುವ ಅರ್ಜುನ್ ಜನ್ಯಾರವರು.

ಮಾನಸ ಗುರುವಿನ ಮೇಲಿನ ಪ್ರೀತಿ
ಅರ್ಜುನ್ ಜನ್ಯಾ ಅವರು ಅತ್ಯಂತ ವಿನಮ್ರತೆಯಿಂದ, ಸ್ವ-ಪ್ರೇರಣೆಯಿಂದ, ಯಾವುದೇ ಲಾಭದ ಯೋಚನೆಯ ಲವಲೇಶವಿಲ್ಲದ, ಮಾನಸ ಗುರುವಿನ ಮೇಲಿನ ಪ್ರೀತಿಯಿಂದ, ಅಭಿಮಾನದಿಂದ ಮಾಡಿದಂತಹ ಕಾರ್ಯಕ್ರಮ ಅದಾಗಿತ್ತು.

ಮಕ್ಕಳಿಗೆ ರೆಹಮಾನ್ ಜೀವನ ಪಾಠ
ಅಷ್ಟೇ ಅಲ್ಲ, ಅದಕ್ಕಿಂತ ಮಿಗಿಲಾಗಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅನಾಥಾಶ್ರಮದ ಮಕ್ಕಳನ್ನು ಕರೆಯಿಸಿ, ಎ.ಆರ್.ರೆಹಮಾನ್ ಜೀವನದಿಂದ ಕಲಿಯಬಹುದಾದ ಅದ್ಭುತ ಪಾಠಗಳನ್ನು ಮಕ್ಕಳಿಗೆ ಉಣಬಡಿಸಿ ಕಾಲ ಕಾಲಕ್ಕೆ ಮಳೆಯಾಗಲು ತಮ್ಮಂತಹ ಉತ್ತಮೋತ್ತರು ಕಾರಣ ಅಂತ ಸಂಗೀತದ ಮುಖಾಂತರ, ನಯ-ನಾಜೂಕಾದ ಮಾತುಗಳಿಂದ ಕೂಗಿ ಕೂಗಿ ಹೇಳುವಂತಿತ್ತು.

ಇಂತಹ ಒಬ್ಬ ವ್ಯಕ್ತಿ ನಮ್ಮೊಡನೆ ಇರುವುದೇ ಪುಣ್ಯ
ಇಂತಹ ಒಬ್ಬ ವ್ಯಕ್ತಿ ನಮ್ಮೊಡನೆ ಇರುವುದೇ ಪುಣ್ಯ. ಇವರ ಒಂದೇ ಕರೆಗೆ ಓಗೊಟ್ಟು ಸಂಗೀತ ಸಂಯೋಜಕರು, ಪ್ರಸಿದ್ಧ ಗಾಯಕ-ಗಾಯಕಿಯರು ಯಾವುದೇ ಬೇಡಿಕೆಯಿಲ್ಲದೆ ಬಂದು ಭಾಗವಹಿಸಿ ಕಿಕ್ಕಿರಿದು ನೆರೆದಿದ್ದ ಎಲ್ಲಾ ಸಂಗೀತ ಪ್ರಿಯರನ್ನು ರಂಜಿಸುತ್ತಾ ಇದ್ದರೆ, ಸ್ವರ್ಗವೇ ಧರೆಗಿಳಿದಂತಿತ್ತು.

ಸಂಗೀತಕ್ಕೆ ಭಾಷೆ, ಜಾತಿ-ಮತಗಳ, ಗಡಿಗಳ ಭೇದ-ಭಾವವಿಲ್ಲ
ಸಂಗೀತಕ್ಕೆ ಭಾಷೆ, ಜಾತಿ-ಮತಗಳ, ಗಡಿಗಳ ಭೇದ-ಭಾವವಿಲ್ಲ ಎಂದು ಅರ್ಜನ್ ಜನ್ಯಾ ಅವರು ಹೇಳ್ತಾ ಇದ್ದಾಗ ಬಂದ ಚಪ್ಪಾಳೆ ಸದ್ದಿಗೆ ಎಲ್ಲಾ ಭೇಧ-ಭಾವಗಳು ಜ್ನಾನಜ್ಯೋತಿ ಸಭಾಂಗಣದ ಆಚೆಗೆ ವಿಧಿಯಿಲ್ಲದೆ ಕಾಲ್ಕಿತ್ತಿದ್ದವು ಎಂದರೆ ಅತಿಶಯೋಕ್ತಿಯಲ್ಲ. ಇಂತಹದೊಂದು ಕಾರ್ಯಕ್ರಮಕ್ಕೆ ವೀಕ್ಷಕನಾಗಿ ಸಾಕ್ಷಿಯಾಗಿದ್ದಕ್ಕೆ ಮನಸ್ಸು ಖುಷಿಯ ಮೇರು ಪರ್ವತವೇರಿದೆ.

ನಿರೂಪಕಿ ಅನುಪಮಾ ಭಟ್
ಅರ್ಜುನ್ ಜನ್ಯಾ ಅವರು ನಿಜವಾಗ್ಲೂ ಎ.ಆರ್.ರೆಹಮಾನ್ ಅವರನ್ನು ಅದೆಷ್ಟು ಆರಾಧಿಸುತ್ತಾರೆಂದು ನಿರೂಪಕಿ ಅನುಪಮಾ ಭಟ್ ಹೇಳುತ್ತಾ ಇದ್ದರೆ ಮೈಜುಮ್ ಅನ್ನುತ್ತಿತ್ತು. ಹೌದು, ಎ.ಆರ್.ರೆಹಮಾನ್ ಅವರನ್ನು ಮೊದಲ ಬಾರಿ ಭೇಟಿ ಆದಾಗ ಅವರು ಸ್ಪರ್ಶಿಸಿ ಭುಜ ತಟ್ಟಿದ ಅಂಗಿಯನ್ನು ಹಾಗೆಯೆ ಇಷ್ಟೊಂದು ವರುಷಗಳ ಕಾಲ ಅರ್ಜುನ್ ಜನ್ಯಾ ಅವರು ತಮ್ಮ ಸ್ಟುಡಿಯೋದಲ್ಲಿ ಗೋಡೆಗೆ ನೇತು ಹಾಕಿದ್ದಾರೆಂದರೆ, ಅವರಲ್ಲಿರುವ ಉತ್ಕೃಷ್ಟ ಪ್ರೀತಿ,ಅಭಿಮಾನಕ್ಕೆ, ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ

ಹೃತ್ಪೂರ್ವಕ ಧನ್ಯವಾದಗಳು
ಎಲ್ಲಾ ಸಹೃದಯ ಸಂಗೀತ ಪ್ರಿಯರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಅರ್ಜುನ್ ಜನ್ಯಾ ಅವರಿಗೆ...ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತ ವ್ಯಾಸರಾಜ್, ಶಮಿತಾ ಮಲ್ನಾಡ್, ಮಾನಸ ಹೊಳ್ಳ, ಅನುಪಮಾ ಭಟ್, ಜ್ಯೋತಿ ವ್ಯಾಸರಾಜ್ ಹಾಗೂ ಇಂದು ನಾಗರಾಜ್ ಅವರಿಗೆ ಎನ್ನುತ್ತಾ ಅಭಿಮಾನಿಗಳು ಸಂಗೀತ ಕಾರ್ಯಕ್ರಮವನ್ನು ಆಸ್ವಾದಿಸಿದರು.












Click it and Unblock the Notifications