ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಹಕ್ಕು: ರಮಾಬಾಯಿ ಅಂಬೇಡ್ಕರ್
ಬೆಂಗಳೂರು, ಡಿ.07 : "ದೇಶದ ಜ್ವಲಂತ ಸಮಸ್ಯೆಗಳಿಗೆ ದಲಿತರು ಮೂಕಪ್ರೇಕ್ಷಕರಾಗಿ ಉಳಿಯಬಾರದು. ಈ ದೇಶದಲ್ಲಿ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಬಳಸಿಕೊಂಡು ಅನ್ಯಾಯದ ವಿರುದ್ಧ ಸಂಘರ್ಷ ಮಾಡುವುದು ನಮ್ಮ ಹಕ್ಕಾಗಿದೆ" ಎಂದು ರಮಾಬಾಯಿ ಅಂಬೇಡ್ಕರ್ ಹೇಳಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ ಪ್ರಯುಕ್ತ ಆಯೋಜಿಸಿದ್ದ 'ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ'ದಲ್ಲಿ ಮಾತಾನಾಡಿದ್ದಾರೆ.
ಮಹಾಪರಿನಿರ್ವಾಣ ದಿವಸ್: ಡಾ. ಭೀಮ್ ರಾವ್ ಅಂಬೇಡ್ಕರ್ ಪುಣ್ಯತಿಥಿ ಬಗ್ಗೆ ತಿಳಿಯಿರಿ
ದಲಿತ ಸಂಘರ್ಷ ಸಮಿತಿಯ (ಡಿಎಸ್ಎಸ್) ವಿವಿಧ ಬಣಗಳು ಒಗ್ಗೂಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಟ್ಟು 15 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಭಾಷಣಕಾರರು ಸರ್ಕಾರದ ದಮನಕಾರಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮತ್ತು ಇಡೀ ದೇಶದಲ್ಲಿ ಹೆಚ್ಚುತ್ತಿರುವ ಜಾತಿ ಆಧಾರಿತ ದೌರ್ಜನ್ಯಗಳನ್ನು ಖಂಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ ತೇಲ್ತುಂಬ್ಡೆ, ದೇಶದ ಜ್ವಲಂತ ಸಮಸ್ಯೆಗಳಿಗೆ ದಲಿತರು ಮೂಕಪ್ರೇಕ್ಷಕರಾಗಿ ಉಳಿಯಬಾರದು ಎಂದು ಒತ್ತಾಯಿಸಿದರು. ಅಪಾಯದಲ್ಲಿರುವ ಭಾರತದ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದ್ದಾರೆ.
ದಲಿತರು ಹೇಗೆ ಪ್ರತಿಭಟಿಸಬೇಕು ಎಂಬುದನ್ನು ಮರೆತಿದ್ದಾರೆ
"ಅನ್ಯಾಯದ ವಿರುದ್ಧ ಆಂದೋಲನ ನಡೆಸುವಂತೆ ಅಂಬೇಡ್ಕರ್ ಸಂದೇಶ ನೀಡಿದ್ದರು. ನೀವು ಬಾಬಾ ಸಾಹೇಬರು ಹೇಳಿದಂತೆ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡು ಸಂಘಟನೆ ಕಟ್ಟಿ, ಸಂಘರ್ಷ ಮಾಡಬೇಕು. ಆದರೆ ದಲಿತರು ಈ ದಿನಗಳಲ್ಲಿ ಹೇಗೆ ಪ್ರತಿಭಟಿಸಬೇಕು ಎಂಬುದನ್ನು ಮರೆತಿದ್ದಾರೆ" ಎಂದಿದ್ದಾರೆ.
"ಕಳೆದ 7 ರಿಂದ 8 ವರ್ಷಗಳಿಂದ ನಮ್ಮ ಉದ್ಯೋಗ ಮತ್ತು ಶಿಕ್ಷಣದ ಹಕ್ಕನ್ನು ಹಿಂಪಡೆಯಲಾಗಿದೆ. ಕೇಂದ್ರ ಸರ್ಕಾರ ಮೆಟ್ರಿಕ್ ಪೂರ್ವ ಹಂತದಲ್ಲಿ ಓದುತ್ತಿರುವ ದಲಿತ ದಮನಿತರ ವಿದ್ಯಾರ್ಥಿ ವೇತನ ಕಿತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಕಿತ್ತುಕೊಳ್ಳುತ್ತಿದ್ದಾರೆ. ನಾವು ಈ ವಿಷಯಗಳನ್ನು ಪತ್ರಿಕೆಗಳಲ್ಲಿ ಓದುತ್ತೇವೆ ಮತ್ತು ಮೌನವಾಗಿರುತ್ತೇವೆ" ಎಂದು ಹೇಳಿದ್ದಾರೆ.
ದಲಿತ ಸಂಘಟನೆಗಳು ಒಂದಾಗುತ್ತಿರುವುದು ಭರವಸೆ ಮೂಡಿಸಿದೆ
ಬಾಬಾ ಸಾಹೇಬರು ಹೇಳಿದಂತೆ ಹೋರಾಟವೇ ಮುಖ್ಯವಾಗಿದೆ ಎಂದರು. ಸಂವಿಧಾನವನ್ನು ಇಂಚಿಂಚೆ ಕಸಿಯಲಾಗುತ್ತಿದೆ. ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ತಿಳಿಯಬೇಕು. ದಲಿತರು ಮೊದಲು ಅಂಬೇಡ್ಕರ್ ಅವರ ಕೃತಿಗಳನ್ನು ಓದಬೇಕು. ಅದರ ವಿರುದ್ಧ ಐಕ್ಯ ಹೋರಾಟ ನಡೆಸಬೇಕು. ದಲಿತ ಸಂಘಟನೆಗಳು ಒಂದಾಗುತ್ತಿರುವುದು ಭರವಸೆ ಮೂಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
"ಡಾ. ಆನಂದ್ ತೇಲ್ತುಂಬ್ದೆಯವ ಜೈಲಿನಲ್ಲಿದ್ದಾಗ ನಿಮ್ಮೆಲ್ಲರ ನೈತಿಕ ಬೆಂಬಲಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞನಾಗಿದ್ದೇಳೆ ಎಂದು ಧನ್ಯವಾದ ಸಲ್ಲಿಸಿದ್ದಾರೆ.
ಹೋರಾಟ ಮಾಡುವವರೆಗೆ ನಮ್ಮ ಪಾಲು ನಮಗೆ ದೊರೆಯದು
ಮಹಿಳಾ ಶಿಕ್ಷಣದ ಬಗ್ಗೆ ಬಾಬಾ ಸಾಹೇಬರು ಹೇಳಿದ್ದಾರೆ. ಮಹಿಳೆ ಶಿಕ್ಷಣದಿಂದ ಇಡೀ ಸಮಾಜದ ಧೀಶಕ್ತಿಯಾಗುತ್ತಾಳೆ ಎಂದಿದ್ದಾರೆ. ಒಂದು ಸಮಾಜದ ಅಭಿವೃದ್ಧಿ ಅಲ್ಲಿನ ಮಹಿಳೆಯರ ಶಿಕ್ಷಣದಿಂದ ಅಳೆಯಬೇಕು ಎಂದು ರಮಾಬಾಯಿ ಹೇಳಿದ್ದಾರೆ.
ಮಹಿಳೆಯರು ತಮ್ಮ ಆರಾಮ ವಲಯಗಳಿಂದ ಹೊರಬಂದು ಸರ್ಕಾರದ ವಿರುದ್ಧ ಹೋರಾಡಬೇಕೆಂದು ನಿರೀಕ್ಷಿಸುತ್ತೇನೆ. ನಾವು ಹೋರಾಟ ಮಾಡುವವರೆಗೂ ಅಧಿಕಾರದಲ್ಲಿ ನಮ್ಮ ಪಾಲು ಸಿಗುವುದಿಲ್ಲ. ನಾವು ಬಾಬಾ ಸಾಹೇಬರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ಶಿಕ್ಷಣಕ್ಕಾಗಿ ಹೋರಾಡುವುದಾಗಿದೆ ಎಂದು ಕರೆ ನೀಡಿದ್ದಾರೆ.
ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಬೃಹತ್ ಸಮಾವೇಶ
"ಇಂದು ಅಂಬೇಡ್ಕರರ ಪರಿನಿರ್ವಾಣದ ದಿನ. ಅವರು ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಬಡವರಿಗೆ, ಬಲ್ಲಿದರಿಗೆಲ್ಲರಿಗೂ ಒಂದು ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸಮರ್ಪಕವಾಗಿ ಬಳಸುವುದು ನಮ್ಮ ಜವಾಬ್ದಾರಿ" ಎಂದು ರಮಾಬಾಯಿ ಅಂಬೇಡ್ಕರ್ ತಿಳಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ (ಡಿಎಸ್ಎಸ್) ವಿವಿಧ ಬಣಗಳು ಒಗ್ಗೂಡಿ ಈ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶವನ್ನು ಆಯೋಜಿಸಿದ್ದವು. ಕಾರ್ಯಕ್ರಮದಲ್ಲಿ 15 ನಿರ್ಣಯಗಳನ್ನು ಅಂಗೀಕರಿಸಲಾಯಿತು.