ವಿಭೂತಿಪುರ ಮಠಕ್ಕೆ ಭೇಟಿ ನೀಡಲಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್
ಬೆಂಗಳೂರು, ನವೆಂಬರ್ 18: ನಗರದ ವಿಭೂತಿಪುರ ಮಠಕ್ಕೆ ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಭೇಟಿ ನೀಡಲಿದ್ದಾರೆ.
ಇವರ ಜೊತೆಗೆ ಮಾಜಿ ಇಸ್ರೋ ಅಧ್ಯಕ್ಷ ಮತ್ತು ಕನ್ನಡಿಗ ಡಾ. ಎ.ಎಸ್. ಕಿರಣ್ ಕುಮಾರ್ ಅವರೂ ಬರಲಿದ್ದಾರೆ.ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇಬ್ಬರು ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ.
ಇದೇ ತಿಂಗಳು 24 ರಿಂದ ಎರಡು ದಿನಗಳ ಕಾಲ ವಿಭೂತಿಪುರ ಮಠದಲ್ಲಿ ನಡೆಯಲಿರುವ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಆದಿ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಈ ಇಬ್ಬರು ಖ್ಯಾತ ವಿಜ್ಞಾನಿಗಳಿಗೆ 'ಸುವರ್ಣ ಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಡಾ.ಕೆ.ಶಿವನ್ ಮತ್ತು ಡಾ. ಎ.ಎಸ್.ಕಿರಣ್ ಕುಮಾರ್ ಅವರು ವಿಭೂತಿಪುರ ಮಠದ ವತಿಯಿಂದ ಕೊಡಲಾಗುವ ಪ್ರಸಕ್ತ ಸಾಲಿನ 'ಸುವರ್ಣ ಶ್ರೀ ಪ್ರಶಸ್ತಿ' ಗೆ ಭಾಜನಾಗಿದ್ದಾರೆ. ಹೀಗಾಗಿ ಈ ಇಬ್ಬರು ಮಹಾನ್ ಸಾಧಕರನ್ನು ಕರೆಯಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಠದ ಪೀಠಾಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಜಿ ತಿಳಿಸಿದ್ದಾರೆ.
ದೇಶೀಯವಾಗಿ ನಿರ್ಮಿಸಿ ಚಂದ್ರಯಾನ ಪ್ರಾಜೆಕ್ಟ್ ಯಶಸ್ಸಿನಲ್ಲಿ ಈ ವಿಜ್ಞಾನಿಗಳ ಪಾತ್ರ ದೊಡ್ಡದು. ಹೀಗಾಗಿ ಅವರ ಸಾಧನೆಗೆ ಪ್ರಶಂಸೆ ಎಂಬಂತೆ ಸುವರ್ಣ ಶ್ರೀ ಪ್ರಶಸ್ತಿ ನೀಡಲಾಗುವುದು.
ಇದಕ್ಕೆ ಇಬ್ಬರೂ ಸವಿನಯವಾಗಿ ಒಪ್ಪಿಕೊಂಡಿರುವುದು ನಮ್ಮ ಸೌಭಾಗ್ಯ ಎಂದು ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಅಂದು ನಡೆಯುವ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸಲಿದ್ದಾರೆ.












Click it and Unblock the Notifications