ಸಿದ್ದರಾಮಯ್ಯ ಯೋಗ್ಯರೋ ಅಯೋಗ್ಯರೋ?: ಕೆಎಸ್ ಈಶ್ವರಪ್ಪ
ಬೆಂಗಳೂರು, ನವೆಂಬರ್ 30: ಬಿಜೆಪಿ ಬಗ್ಗೆ ಸಿದ್ದರಾಮಯ್ಯ ಬಳಸುವ ಭಾಷೆ ನೋಡಿದರೆ ಅವರು ಯೋಗ್ಯರೋ ಅಯೋಗ್ಯರೋ ಅಂತಾ ಜನ ತೀರ್ಮಾನಿಸಬೇಕು ಎಂದು ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗುಂಪುಗಾರಿಕೆಯನ್ನು ಮುಚ್ಚಲು ಈ ರೀತಿಯ ಪದ ಬಳಸುತ್ತಿದ್ದಾರೆ. ಉಪಚುನಾವಣೆ ನಂತರ ನಾನೇ ಸಿಎಂ ಅಂತ ಸಿದ್ದರಾಮಯ್ಯ ಶಿಷ್ಯಂದಿರ ಮುಖಾಂತರ ಹೇಳುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ನೂರು ಕಾಲ ಬದುಕಲಿ ಆದರೆ ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಆ ಪಕ್ಷವನ್ನು ಛಿದ್ರ ಛಿದ್ರ ಮಾಡುತ್ತಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಜಾತಿ ಜಾತಿಯನ್ನು ಒಡೆಯುತ್ತಾರೆ,ವೈಯಕ್ತಿಕವಾಗಿ ಅವರ ಬಗ್ಗೆ ಒಳ್ಳೆಯ ಭಾವನೆ ಇದೆ.ಸಿಎಂ ಆಗಿದ್ದಾಗ ನನ್ನ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದಾರೆ.ನಾನೂ ಸಚಿವನಾಗಿ ಅವರ ಕ್ಷೇತ್ರಕ್ಕೆ ಕೊಟ್ಟಿದ್ದೇನೆ ಎಂದರು.

ಸಿದ್ದರಾಮಯ್ಯಗೆ ಸಿಎಂ ಹುಚ್ಚು ಹಿಡಿದುಬಿಟ್ಟಿದೆ
ಸಿದ್ದರಾಮಯ್ಯಗೆ ಸಿಎಂ ಹುಚ್ಚು ಹಿಡಿದುಬಿಟ್ಟಿದೆ, ಕೊರಟಗೆರೆಯಲ್ಲಿ ಪರಮೇಶ್ವರರನ್ನು ಸೋಲಿಸಿಲ್ಲ ಅಂತಾ ಸಿದ್ದರಾಮಯ್ಯ ಹೇಳಲಿ ನೋಡೋಣ, ಒಳ್ಳೆಯ ಮಾತಾಡಿ, ನೂರ್ಕಾಲ ಬಾಳಲಿ ಎಂದು ಹಾರೈಸಿದ್ದಾರೆ. ನಾನು ಕುರುಬ ಸಮಾಜದ ನಾಯಕ ಅಂತಾ ಸಿದ್ದರಾಮಯ್ಯ ಹೇಳ್ತಾರೆ.ಒಬ್ಬ ಕುರುಬನನ್ನು ಉದ್ದಾರ ಮಾಡಿದ್ದು ಹೇಳಲಿ ನೋಡೋಣ.ಅಲ್ಪಸಂಖ್ಯಾತರ ನಾಯಕರು ಯಾರು ಇಂದು ಸಿದ್ದರಾಮಯ್ಯ ಜೊತೆ ಇದ್ದಾರೆ? .ಸಿದ್ದರಾಮಯ್ಯನವರ ಪಕ್ಷ ಸಾಯ್ತಿದೆ, ಅವರು ಸಾಯಿಸುತ್ತಿದ್ದಾರೆ, ಆದರೆ ಅವರು ಸಾಯಬಾರದು ಎಂದು ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕಿತ್ತಾಟ, ಅಭದ್ರತೆ ಇದು ಕಾಂಗ್ರೆಸ್ ಜೆಡಿಎಸ್ ಗುಣ
ಕಿತ್ತಾಟ, ಅಭದ್ರತೆ, ಅಭಿವೃದ್ಧಿ ಶೂನ್ಯತೆ ಕಾಂಗ್ರೆಸ್, ಜೆಡಿಎಸ್ ನ ಗುಣಗಳು,ರಾಜ್ಯದ ಸಿಎಂಗಳಾಗಿದ್ದವರು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ,ಸರ್ಕಾರ ಬೀಳಲು ಸಿದ್ದರಾಮಯ್ಯ ನೇರ ಕಾರಣ ಅಂತ ಕುಮಾರಸ್ವಾಮಿ ಹೇಳಿದ್ದರು ಎಂದರು.

ಅಭಿವೃದ್ಧಿ ಕೆಲಸಕ್ಕೆ ಸಹಕರಿಸಲಿಲ್ಲ
ಶಾಸಕರಿಗೆ ಅಭಿವೃದ್ಧಿ ಕೆಲಸಕ್ಕೆ ಸಹಕರಿಸದ ಕಾರಣ ಸರ್ಕಾರ ಬಿತ್ತು ಅಂತಾ ಸಿದ್ದರಾಮಯ್ಯ ಹೇಳಿದ್ದರು. ಈಗ ಅನರ್ಹ ಶಾಸಕರಿಂದ ಸರ್ಕಾರ ಬಿತ್ತು ಅಂತಾ ಹೊಸ ಪ್ಲೇಟ್ ಹಾಕಿಕೊಂಡು ಇಬ್ಬರೂ ಹೊರಟಿದ್ದಾರೆ.ಮೂರುವರೆ ವರ್ಷ ಎರಡೂ ಪಕ್ಷಗಳಿಗೆ ಕೆಲಸ ಇರಲ್ಲ ,ಕಾಂಗ್ರೆಸ್, ಜೆಡಿಎಸ್ ಗೆಲ್ಲಿಸಿ ಅಂತಾ ಅವರು ಕೇಳ್ತಿಲ್ಲ. ಅನರ್ಹ ಶಾಸಕರನ್ನು ಸೋಲಿಸಿ ಅಂತಾ ಹೇಳ್ತಿದ್ದಾರೆ.ಕಾಂಗ್ರೆಸ್ ನಲ್ಲಿ ದ್ವಂದ್ವ ಹೇಳಿಕೆಗಳ ಮೂಲಕ ಗುಂಪುಗಾರಿಕೆ ಬಯಲಾಗುತ್ತಿದೆ ಎಂದರು.

ಬಿಜೆಪಿ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ
ಉಪಚುನಾವಣೆಯನ್ನು ಬಿಜೆಪಿ ಬಹಳ ಗಂಭೀರವಾಗಿ ತೆಗೆದುಕೊಂಡಿದೆ.ಏಕಶಿಲೆಯಂತೆ ಬಿಜೆಪಿಯ ಎಲ್ಲಾ ನಾಯಕರು ಶ್ರಮ ಹಾಕುತ್ತಿದ್ದೇವೆ. ಕಾಂಗ್ರೆಸ್, ಜೆಡಿಎಸ್ ನಿಂದ ಬಂದಿರುವ ಶಾಸಕರ ಪ್ರಭಾವ ಸೇರಿ ನಾವು ೧೫ ಕ್ಷೇತ್ರ ಗೆದ್ದರೂ ಆಶ್ಚರ್ಯ ಇಲ್ಲ. ಬಿಜೆಪಿ ಬಗ್ಗೆ ಸಿದ್ದರಾಮಯ್ಯ ಬಳಸುವ ಭಾಷೆ ನೋಡಿದರೆ ಅವರು ಯೋಗ್ಯರೋ ಅಯೋಗ್ಯರೋ ಅಂತಾ ಜನ ತೀರ್ಮಾನಿಸಬೇಕು.ಕಾಂಗ್ರೆಸ್ ಗುಂಪುಗಾರಿಕೆಯನ್ನು ಮುಚ್ಚಲು ಈ ರೀತಿಯ ಪದ ಬಳಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅಂತೂ ಸೇಬಿನ ಹಾರದ ಸರದಾರ ಆಗಿಬಿಟ್ಟಿದ್ದಾರೆ ಎಂದು ಗೇಲಿ ಮಾಡಿದರು.












Click it and Unblock the Notifications