ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತರಾಟೆ: ಬದಲಾಗುತ್ತಾ ನಗರದ ಚಿತ್ರಣ?
ಬೆಂಗಳೂರು: ಸಂಚಾರ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ರಸ್ತೆ ಮೂಲಸೌಕರ್ಯವೇ ಸರಿ ಇಲ್ಲ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ರಾರಾಜಿಸುತ್ತವೆ. ಹಾಳಾದ ರಸ್ತೆಗಳಿಂದ ವಾಹನ ಸವಾರರು ನಿತ್ಯವು ಪರದಾಡುತ್ತಿದ್ದಾರೆ. ಗುಂಡಿಗಳಿಲ್ಲದಂತೆ ರಸ್ತೆ ನಿರ್ಮಿಸುವುದು ಸಾಧ್ಯವೇ? ಅದೇನು ರಾಕೇಟ್ ಸೈನ್ಸಾ? ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮೊದಲ ಸಭೆಯಲ್ಲೇ ಜಿಬಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇದೆಲ್ಲ ನೋಡಿದರೆ ಇನ್ನು ಮುಂದಾದರೂ ನಗರ ರಸ್ತೆ ಸಮಸ್ಯೆಗಳಿಗೆ ಶಾಸ್ವತ ಮುಕ್ತಿ ಸಿಗುತ್ತಾ? ಎಂದು ಕಾದು ನೋಡಬೇಕಿದೆ.
ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಕೃಷ್ಣ ಬೈರೇಗೌಡ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) 5 ನಗರ ಪಾಲಿಕೆಗಳು, ಬಿ-ಸ್ಮೈಲ್, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಮಂಗಳವಾರ ಸಭೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ವಾಸಿಸುವ 1.5 ಕೋಟಿ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಗೂ ಮುನ್ನ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ
ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುವುದು ಅಥವಾ ಗುಂಡಿ ಇಲ್ಲದೇ ರಸ್ತೆಗಳ ನಿರ್ಮಾಣ ಅಸಾಧ್ಯವೇ? ಅದೇನು ರಾಕೇಟ್ ಸೈನ್ಸಾ? ಎಂದು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು. ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಅನುದಾನ ಲಭ್ಯವಿದೆ. ವ್ಯವಸ್ಥಿತವಾಗಿ ಹಾಗೂ ಗುಣಮಟ್ಟದೊಂದಿಗೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಮೂಲಕ ಸರ್ಕಾರ ಜಿಬಿಎ ಚುನಾವಣೆ ಹೊತ್ತಿನಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಿದೆ ಎನ್ನಬಹುದು.
ಸಚಿವರು ಮುಂದುವರಿದು, ಬೆಂಗಳೂರು ಬಹಳಷ್ಟು ಸವಾಲುಗಳಿಗೆ ಎಂದು ಒಪ್ಪಿಕೊಂಡಿರುವ ಸಚಿವರು, ಇಲ್ಲಿ ಸುಮಾರು 1.5 ಕೋಟಿ ಜನ ಆಶ್ರಯಿಸಿದ್ದಾರೆ. ನಗರವು ಉದ್ಯೋಗ, ಶಿಕ್ಷಣ ಹಾಗೂ ಉತ್ತಮ ಜೀವನಕ್ಕೆ ಅವಕಾಶ ಕಲ್ಪಿಸುತ್ತಿದೆ. ಬೆಂಗಳೂರು ನಮ್ಮ ರಾಜ್ಯ ಹಾಗೂ ದೇಶದ ಅಮೂಲ್ಯ ಆಸ್ತಿಯಾಗಿದ್ದು, ವಿಶ್ವದ ವಿವಿಧ ಭಾಗಗಳ ಜನರು ಹಾಗೂ ಅನೇಕ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಬಿಎ ಆಡಳಿತವನ್ನು ಸುಧಾರಣೆಗಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.
ಬೆಂಗಳೂರು ಸಮಸ್ಯೆಗಳಿಗೆ ತ್ವರಿತ ಪರಿಹಾರ ಭರವಸೆ
ಬೆಂಗಳೂರು ರಸ್ತೆಗಳ ಸಮಸ್ಯೆ ಪರಿಹಾರ, ಬೀದಿ ದೀಪಗಳ ನಿರ್ವಹಣೆ, ಸಂಚಾರ ದಟ್ಟಣೆ, ಸ್ವಚ್ಛತೆ, ಸೌಂದರ್ಯೀಕರಣ, ಜಲಾವೃತ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಬಿಬಿಎಂಪಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪುನರ್ ರಚಿಸಲಾಗಿದೆ. ಇಲ್ಲಿ ಸಂಪೂರ್ಣ ಸಮಸ್ಯೆಗಳಿಗೆ ಎಲ್ಲ ಪಾಲಿಕೆ ಅಧಿಕಾರಿಗಳು ಪರಿಹಾರದ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕೆಂದು ಹೇಳಿದರು.

ಬೆಂಗಳೂರಿಗಾಗಿ ದೀರ್ಘಾವಧಿ ಯೋಜನೆಗಳು
ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್ ಹಾಗೂ ಸಂಚಾರಯುಕ್ತ ರಸ್ತೆ ನಿರ್ಮಾಣದಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ನಗರದಲ್ಲಿದ್ದ ಅಸ್ಪಷ್ಟ ಖಾತೆ ಸಮಸ್ಯೆಗೆ ಪರಿಹಾರವಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಅತ್ಯುತ್ತಮ ಮಾದರಿಯ ಇ-ಖಾತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಒಟ್ಟಾರೆ ಬೆಂಗಳೂರಿನ ದೀರ್ಘಾವಧಿಗೆ ಬೇಕಾದ ಎಲ್ಲ ಸಮಗ್ರ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಅವರು ವಿವರಿಸಿದರು.
ನಗರದ ಸಮಸ್ಯೆಗಳನ್ನು ಬಗೆಹರಿಸಲು ಇರುವ ಆಡಳಿತ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಡಳಿತದಲ್ಲಿ ಚುರುಕು ಮೂಡಿಸಿ, ಸೇವಾ ವಿತರಣೆಯಲ್ಲಿ ಸುಧಾರಣೆ ತರುವ ಮೂಲಕ ಜನರ ಜೀವನ ಗುಣಮಟ್ಟವನ್ನು ಹೆಚ್ಚಿಸಲಾಗುವುದು. 360 ಡಿಗ್ರಿ ದೃಷ್ಟಿಕೋನದೊಂದಿಗೆ ಬೆಂಗಳೂರಿನ ಜನರ ಜೀವನ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳಿಗೆ ಸಚಿವರ ತಾಕೀತು
ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಗಾಗಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿದ್ದಾರೆ. ಎಲ್ಲಾ ಅಧಿಕಾರಿಗಳು ಆ ಯೋಜನೆಗಳ ಸಾಕಾರಕ್ಕಾಗಿ ಆಡಳಿತ ವ್ಯವಸ್ಥೆ ಹಾಗೂ ಆಡಳಿತ ಮತ್ತು ವಿರೋಧ ಪಕ್ಷಗಳ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಮನ್ವಯದಲ್ಲಿ ಕಾರ್ಯ ನಿರ್ವಹಿಸುವಂತೆ ತಾಕೀತು ಮಾಡಿದರು.
ನಗರದಲ್ಲಿ ಮನೆ-ಮನೆಗೆ ಕಸ ಸಂಗ್ರಹಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯಬೇಕು. ಕೆಲವರು ಮನೆ ಬಾಗಿಲಿಗೆ ಕಸ ಸಂಗ್ರಹ ವಾಹನ ಬಂದರೂ ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದಾರೆ. ಕಸ ಸಂಗ್ರಹಣಾ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ನಾಗರಿಕರ ಸಹಕಾರವೂ ಅಗತ್ಯ. ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎಂದು ಅವರು ಜನರ ಸಹಕಾರ ಕೋರಿದರು.














Click it and Unblock the Notifications