ದೇವನಹಳ್ಳಿ: ಸರ್ಕಾರಿ ಗೋಮಾಳ ಜಮೀನು ರಕ್ಷಿಸಿ, ನಿವೇಶನ ಹಂಚುವಂತೆ ಗ್ರಾಮಸ್ಥರ ಪ್ರತಿಭಟನೆ
ಬೆಂಗಳೂರು, ಮಾರ್ಚ್ 16: ಆ ಗ್ರಾಮದಲ್ಲಿ ವಾಸವಿರುವ ಕೆಲವರಿಗೆ ನಿವೇಶನವಿಲ್ಲದೆ ಗೋಮಾಳ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವಂತೆ ಹತ್ತು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇದ್ದ ಗೋಮಾಳ ಜಮೀನನ್ನು ಅಕ್ಕಪಕ್ಕದ ಬಲಾಢ್ಯರು ಒತ್ತುವರಿ ಮಾಡಿಕೊಂಡು ನುಂಗಲು ಹೊರಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಾತ್ರೋರಾತ್ರಿ ಗುಡಿಸಲುಗಳನ್ನು ನಿರ್ಮಿಸಿ ಹೋರಾಟದ ಹಾದಿ ಹಿಡಿದಿದ್ದಾರೆ.
ಸರ್ಕಾರಿ ಗೋಮಾಳ ಜಮೀನಿನಲ್ಲಿ ಗುಡಿಸಲುಗಳು ನಿರ್ಮಾಣಗೊಂಡಿದ್ದು, ನಿವೇಶನ ಹಂಚಿಕೆ ಮಾಡುವಂತೆ ಗ್ರಾಮಸ್ಥರಿಂದ ಗುಡಿಸಲು ಹಾಕಿ ಅಲ್ಲಿಯೇ ವಾಸ ಮಾಡುತ್ತಿದ್ದಾರೆ. ಗೋಮಾಳ ಉಳಿಸಿ ನಿವೇಶನ ನೀಡಿ ಎಂದು ಗ್ರಾಮಸ್ಥರು ಪ್ರತಿಭಟಿಸುತ್ತಿದ್ದಾರೆ. ಈ ಎಲ್ಲಾ ಸನ್ನಿವೇಶ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಇರಿಗೇನಹಳ್ಳಿ ಗ್ರಾಮದ ಬಳಿ.
ಅಂದಹಾಗೆ ಗ್ರಾಮದ ಸರ್ವೆ ನಂ. 33ರಲ್ಲಿ 6 ಎಕರೆ 26 ಗುಂಟೆ ಗೋಮಾಳ ಜಮೀನಿದೆ. ಇದೇ ಸರ್ಕಾರಿ ಗೋಮಾಳ ಬಿಟ್ಟರೆ ಇರಿಗೇನಹಳ್ಳಿ ಹಾಗೂ ಬಿಡಿಗಾನಹಳ್ಳಿ ಗ್ರಾಮಸ್ಥರಿಗೆ ಯಾವುದೇ ಸರ್ಕಾರಿ ಜಾಗವೇ ಇಲ್ಲ. ಹೀಗಾಗಿ ಗೋಮಾಳ ಜಮೀನಿನಲ್ಲಿ ನಿವೇಶನ ಇಲ್ಲದವರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡುವಂತೆ ಕಳೆದ ಹತ್ತು ವರ್ಷಗಳಿಂದ ಅರ್ಜಿ ಹಾಕುತ್ತಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಇದ್ದ ಗೋಮಾಳವನ್ನು ಅಕ್ಕಪಕ್ಕದ ಬಲಾಢ್ಯರು ಎಕರೆಗಟ್ಟಲೇ ಒತ್ತುವರಿ ಮಾಡಿದ್ದಾರೆ. ಹೀಗಾಗಿ ಗೋಮಾಳ ಜಾಗದಲ್ಲಿ ಗುಡಿಸಲು ನಿರ್ಮಿಸಿರುವ ನೂರಾರು ಗ್ರಾಮದ ಕುಟುಂಬಗಳು ನಿವೇಶನ ನೀಡುವಂತೆ ಒತ್ತಾಯಿಸಿದ್ದಾರೆ.
6 ಎಕರೆ 26 ಗುಂಟೆ ಗೋಮಾಳದಲ್ಲಿ ನಿವೇಶನ ಹಂಚಿಕೆ ಮಾಡಿ ಎಂದು ಚನ್ನರಾಯಪಟ್ಟಣ ಪಿಡಿಒ, ತಾಲೂಕು ಪಂಚಾಯತಿ ಇಒ ಹಾಗೆಯೇ ಜಿಲ್ಲಾಧಿಕಾರಿಗಳಿಗೂ ಗ್ರಾಮಸ್ಥರು ಹಲವು ವರ್ಷಗಳಿಂದ ಅರ್ಜಿ ಹಾಕಿದ್ದಾರೆ. ಆದರೆ ಗೋಮಾಳ ಜಮೀನನ್ನು ಅಕ್ಕಪಕ್ಕದವರು ಸಾಕಷ್ಟು ಒತ್ತುವರಿ ಮಾಡಿ ಕಬಳಿಕೆ ಮಾಡಿದ್ದಾರೆ ಎನ್ನಲಾಗಿದೆ.

ಇದೀಗ ಒತ್ತುವರಿಯಾಗಿ ಕೇವಲ ಒಂದುವರೆ ಎಕರೆಗೆ ಬಂದು ನಿಂತಿದೆ. ಇದರಿಂದಾಗಿ ಗೋಮಾಳ ಸರ್ವೆ ಮಾಡಿ ಸರ್ಕಾರಿ ಭೂಮಿ ಉಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು, ಯಾರೊಬ್ಬರು ತಲೆಕೆಡಿಸಿಕೊಂಡಿಲ್ಲ. ಗೋಮಾಳ ಒತ್ತುವರಿ ಮಾಡಿ ಕಬಳಿಕೆ ಮಾಡುತ್ತಿದ್ದರು, ಅಧಿಕಾರಿಗಳು ಸುಮ್ಮನಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹೀಗಾಗಿ ಎರಡು ಗ್ರಾಮದ ನೂರಾರು ಜನ ಇದ್ದ ಗೋಮಾಳ ಜಮೀನಿನಲ್ಲಿಯೇ ಗುಡಿಸಲು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್, ಗೋಮಾಳ ಜಮೀನು ಇರುವುದು ಮಾಹಿತಿ ಬಂದಿದೆ. ಜತೆಗೆ ಒತ್ತುವರಿಯಾಗಿರುವುದು ನಮ್ಮ ಗಮನಕ್ಕೆ ಬಂದಿದ್ದು, ಸರ್ವೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತಾ ತಿಳಿಸಿದ್ದಾರೆ.

ಒಟ್ಟಾರೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಗೋಮಾಳ ಜಮೀನು ಒತ್ತುವರಿಯಾಗಿ ಉಳ್ಳವರ ಪಾಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಸರ್ವೆ ಮಾಡಿಸುತ್ತೇವೆ ಎನ್ನುತ್ತಿರುವ ಜಿಲ್ಲಾಡಳಿತ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ವಿವಾದಿತ ಗೋಮಾಳ ಜಾಗವನ್ನು ಸರ್ವೆ ಮಾಡಿಸಿ ಉಳಿಸುವ ಕೆಲಸ ಮಾಡಬೇಕಿದೆ . ಜತೆಗೆ ನಿವೇಶನಕ್ಕಾಗಿ ಗುಡಿಸಲು ನಿರ್ಮಿಸಿ ಹೋರಾಟ ನಡೆಸುತ್ತಿರುವ ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕಿದೆ.












Click it and Unblock the Notifications