ಸದಸ್ಯರ ಅಭಿಪ್ರಾಯ ಪಡೆದೇ ಪತ್ರ ಬರೆದಿದ್ದೇನೆ: ಶರ್ಮಾ
ಬೆಂಗಳೂರು, ಮಾರ್ಚ್ 14: ಪೊಲೀಸ್ ಇಲಾಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಸೇರಿದಂತೆ ಹಲವು ವಿಚಾರವಾಗಿ ಖಾರವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದ ಕರ್ನಾಟಕ ಐಪಿಎಸ್ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಆರ್.ಪಿ.ಶರ್ಮಾ ಅವರು ವಿವಾದ ಉಂಟಾದ ನಂತರ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಐಪಿಎಸ್ ಅಧಿಕಾರಿಗಳ ಒಕ್ಕೂಟದ ಸದಸ್ಯರ ಅಭಿಪ್ರಾಯ ಪಡೆದೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಅಭಿಪ್ರಾಯ ಪಡೆದ ಕಾರಣದಿಂದಲೇ ಸಂಘದ ಲೆಟರ್ಹೆಡ್ನಲ್ಲಿ ಪತ್ರ ಬರೆದಿದ್ದು ಎಂದು ಅನೌಪಚಾರಿಕವಾಗಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಅವರು ಲಿಖಿತ ಉತ್ತರ ನೀಡುವಂತೆ ನೊಟೀಸ್ ನೀಡಿದ್ದು, ಇಂದು ಮಾರ್ಚ್ 14 ರ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಐಪಿಎಸ್ ಅಧಿಕಾರಗಳ ಒಕ್ಕೂಟದ ಸಂಘದ ಸಭೆಯಲ್ಲಿ ಪತ್ರ ಬರೆಯುವ ನಿರ್ಣಯ ಕೈಗೊಂಡಿದ್ದರೆ, ಸಭೆಯ ನಡಾವಳಿಯನ್ನು ಕಳುಹಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.

ಆರ್.ಪಿ.ಶರ್ಮಾ ಅವರು ಇಂದು ನೊಟೀಸ್ಗೆ ಉತ್ತರ ನೀಡದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುಪಿಎಸ್ಸಿಗೆ ಪತ್ರ ಬರೆಯಲಿದ್ದಾರೆ. ಈಗಾಗಲೇ ಕೆ.ರತ್ನಪ್ರಭಾ ಅವರು ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಅವರೊಂದಿಗೆ ಮಾತನಾಡಿದ್ದು ಯುಪಿಎಸ್ಸಿ ಕೈಗೊಳ್ಳಬಹುದಾದ ಶಿಸ್ತು ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ರಾಜಕಾರಣಿಗಳು ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕಾರಣ ಪೊಲೀಸ್ ಇಲಾಖೆಯ ಘನತೆ ಕುಂದಿದೆ ಹಾಗೂ ರಾಜ್ಯದಲ್ಲಿ ಉನ್ನತ ಅಧಿಕಾರಿಗಳಿಗೆ ಭದ್ರತೆ ಇಲ್ಲದ ಹಾಗಾಗಿದೆ, ಈ ವಿಷಯಗಳನ್ನು ಚರ್ಚಿಸಲು ಸರ್ಕಾರವು ಈ ಕೂಡಲೇ ಐಪಿಎಸ್ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಆರ್.ಪಿ.ಶರ್ಮಾ ಅವರು ಪತ್ರದಲ್ಲಿ ಬರೆದಿದ್ದರು.












Click it and Unblock the Notifications