All Party Meeting: ಕಾವೇರಿ ಜಲ ವಿಚಾರ ಚರ್ಚೆಗೆ ಸರ್ವಪಕ್ಷ ಸಭೆಗೆ ಆಹ್ವಾನ: ಡಿಕೆಶಿ
ಬೆಂಗಳೂರು, ಆಗಸ್ಟ್ 20: ನದಿ ನೀರು ಸೇರಿದಂತೆ ಜಲ ವಿವಾದ ಸಂಬಂಧ ರಾಜ್ಯ ಸರ್ಕಾರ ಸರ್ವ ಪಕ್ಷ ಕರೆದಿದೆ. ಕಾವೇರಿ, ಮಹದಾಯಿ, ಕೃಷ್ಣಾ ಮತ್ತಿತರ ಜಲವಿವಾದ, ರಾಜ್ಯದ ಅಣೆಕಟ್ಟುಗಳಲ್ಲಿ ನೀರು ಪರಿಸ್ಥಿತಿ, ಕುರಿತು ಚರ್ಚಿಸಲಿದ್ದು, ಈ ಸಭೆ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಲ ವಿವಾದ, ನೀರು ಹಂಚಿಕೆ ಕುರಿತು ಕಾನೂನು ಹೋರಾಟ ಹೇಗೆ ಮಾಡಬೇಕು ಎಂಬುದರ ಕುರಿತು ಅಡ್ವೋಕೇಟ್ ಜನರಲ್ ಅವರಿಗೆ ಬಿಟ್ಟಿದ್ದೇವೆ. ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆ ಆಗಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಹಾಗೂ ರೈತರ ಹಿತ ಕಾಯುವುದು ನಮ್ಮ ಕರ್ತವ್ಯವಾಗಿದ್ದು, ರಾಜ್ಯದಲ್ಲಿನ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಈ ವಿಚಾರವಾಗಿ ನಾವು ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಅವರು ವಿವರಿಸಿದರು.

ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಅರ್ಜಿ ಸಲ್ಲಿಸುತ್ತಿದ್ದೇವೆ. ಈಗಾಗಲೇ ನೀರು ಹರಿಸುವ ನಿರ್ಧಾರ ಮರು ಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದೇವೆ. ನಾವು ರೈತರ ಹಿತವನ್ನು ಕಾಯಬೇಕು. ಕೋರ್ಟ್ ನಿರ್ಧಾರಕ್ಕೂ ಆದ್ಯತೆ ನೀಡಬೇಕಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರಿಗೆ ತಮ್ಮ ಕಾಲದಲ್ಲಿ ಏನಾಗಿತ್ತು ಎಂಬ ಅರಿವಿಲ್ಲವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದೇ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಟಾಂಗ್ ನೀಡಿದರು.
ಬಿಜೆಪಿಯವರು ಹೋರಾಟ ಮಾಡಲಿ ಬಿಡಿ
ನಾಳೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ತಡೆದು ಬಿಜೆಪಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರದೇ ರಸ್ತೆ ಅಲ್ಲವೇ. ಅಲ್ಲಿ ಅನೇಕ ಜೀವಗಳು ಬಲಿಯಾಗಿವೆ. ಅವರು ಹೋರಾಟ ಮಾಡಲಿ ಬಿಡಿ ಎಂದು ಹೇಳಿದರು.

ಆಯನೂರು ಮಂಜುನಾಥ ಅವರ ಭೇಟಿ ವಿಚಾರಕ್ಕೆ ಉತ್ತರಿಸಿದ ಅವರು, ಅನೇಕ ಜನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಯಾರು ಯಾವ ಕಾರಣಕ್ಕೆ ಭೇಟಿ ಆಗುತ್ತಿದ್ದಾರೆ ಎಂದು ಹೇಳಲು ಸಾಧ್ಯವೇ?. ಅವರವರ ಬದುಕು, ಭವಿಷ್ಯ ಅವರು ನೋಡಿಕೊಳ್ಳುತ್ತಾರೆ. ಸಿಟಿ ರವಿ ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಕೈ ಕತ್ತರಿಸಲು ನಮಗೂ ಗೊತ್ತಿದೆ ಎಂದಿದ್ದಾರೆ.
ಸಿಟಿ ರವಿ ಅವರು ಆಪರೇಶನ್ ಮಾಡಿದಾಗ ಏನಾಗಿತ್ತು? ಕಾಂಗ್ರೆಸ್, ದಳದ ಶಾಸಕರನ್ನು ಕರೆದುಕೊಂಡು ಮಜಾ ಮಾಡಲಿಲ್ಲವೇ? ಅವರು ರಾಜಕಾರಣ ಮಾಡಲಿ. ನೀವು ಏನು ಬೆದರಿಕೆ ಹಾಕುತ್ತೀರಿ ಅದನ್ನು ಬೇರೆಯವರು ಮಾಡಲು ಆಗುವುದಿಲ್ಲವೇ? ನೀವು ಮೈತ್ರಿ ಸರ್ಕಾರ ಬೀಳಿಸಿ ಅಧಿಕಾರದಿಂದ ಕೆಳಗೆ ಇಳಿಸಲಿಲ್ಲವೇ ಎಂದು ವಿವರಿಸಿದರು.
ನಮಗೆ ಸಂಖ್ಯಾಬಲದ ಅಗತ್ಯತೆ ಇಲ್ಲ
ನಮಗಿರುವ ಸಂಖ್ಯಾಬಲಕ್ಕೆ ಯಾರ ಅಗತ್ಯವೂ ಇಲ್ಲ. ದೇಶ, ರಾಜ್ಯದ ಉದ್ದಗಲ ರಾಷ್ಟ್ರ ಉಳಿಸಲು ಜನ ತೀರ್ಮಾನಿಸಿದ್ದಾರೆ. ಹೀಗಾಗಿ ಪಕ್ಷಕ್ಕೆ ಬರುವವರನ್ನು ಬೇಡ ಎನ್ನಲು ಸಾಧ್ಯವೇ? ಗೂಳಿ ಕೇಳಿ ಹಸು ಕಟ್ಟಬೇಕೆ?ಎಂದು ಪ್ರಶ್ನಿಸಿದರು. ಸೋಮವಾರ
ಗ್ರಾಮ ಪಂಚಾಯಿತಿ ಮತ್ತು ಪಾಲಿಕೆ ಸದಸ್ಯರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಇನ್ನೂ ಅರ್ಜಿಗಳು ಬಂದಿಲ್ಲ. ಬಂದ ಮೇಲೆ ತಿಳಿಸುವೆ ಎಂದರು.
ಎರಡು ವರ್ಷಗಳ ನಂತರ ಮಂತ್ರಿಮಂಡಲ ಬದಲಾವಣೆ ವಿಚಾರ, ಪಕ್ಷ ಏನು ಹೇಳುತ್ತದೆ ಅದಕ್ಕೆ ಬದ್ಧರಾಗಬೇಕು. ಇನ್ನೂ ಈ ವಿಚಾರ ಪಕ್ಷಕ್ಕೆ ಸಂಬಂಧಿಸಿದ್ದಾಗಿದೆ. ಯಾರು ಬಹಿರಂಗ ಚರ್ಚೆ ಮಾಡಕೂಡದು ಎಂದು ತಮ್ಮ ನಾಯಕರಿಗೆ ತಿಳಿಸಿದರು.












Click it and Unblock the Notifications