ಮೋದಿ ಜತೆ ಸಂಸ್ಕೃತದಲ್ಲಿ ಮಾತಾಡಿದ ಬೆಂಗ್ಳೂರಿನ ಹುಡ್ಗಿ ತಂದೆ ಸಂದರ್ಶನ

ಬೆಂಗಳೂರು, ಆಗಸ್ಟ್ 27: "ನನ್ನ ಮಗಳು ಚಿನ್ಮಯಿ ಸಂಸ್ಕೃತದಲ್ಲಿ ಮಾತನಾಡಿದಳು ಅನ್ನೋದು ದೊಡ್ಡ ವಿಚಾರವಲ್ಲ. ಏಕೆಂದರೆ ಅದು ಅವಳ ಮಾತೃ ಭಾಷೆ. ಇನ್ನು ಪ್ರಧಾನಿಗಳ ಜತೆಗೆ ಮಾತನಾಡಿಬಿಟ್ಟಳು ಎಂಬ ಸಂಗತಿ ಕೂಡ ದೊಡ್ಡದೇನಲ್ಲ. ಏಕೆಂದರೆ, ಪ್ರಧಾನಿಗಳು ಹಾಗೆ ಮಾತನಾಡುವಂಥ ವ್ಯಕ್ತಿತ್ವದವರೇ. ಆದರೆ ಸ್ವತಃ ಪ್ರಧಾನಿಗಳು ಸಂಸ್ಕೃತದಲ್ಲಿ ಮಾತನಾಡಿದರು ಎಂಬುದು ಹೆಮ್ಮೆಯ ಸಂಗತಿ".

-ಹೀಗೆ ಹೇಳಿದವರು ಲಕ್ಷ್ಮೀನಾರಾಯಣ. ಭಾನುವಾರದಂದು ಮನ್ ಕೀ ಬಾತ್ ನಲ್ಲಿ ಪ್ರಧಾನಿಯೊಂದಿಗೆ ಸಂಸ್ಕೃತದಲ್ಲಿ ಮಾತನಾಡಿದ ಚಿನ್ಮಯಿ ಎಂಬ ಬೆಂಗಳೂರಿನ ಹುಡುಗಿಯ ತಂದೆ ಲಕ್ಷ್ಮೀನಾರಾಯಣ. ಸದ್ಯಕ್ಕೆ ಅವರು ಸಂಸ್ಕೃತ ಭಾರತಿಯ ಸಹ ಸಂಘಟನಾ ಮಂತ್ರಿ, ಕರ್ನಾಟಕ ದಕ್ಷಿಣದ ಜವಾಬ್ದಾರಿ ಹೊತ್ತಿದ್ದಾರೆ. ಅವರನ್ನು ಒನ್ಇಂಡಿಯಾ ಕನ್ನಡದಿಂದ ಮಾತನಾಡಿಸಲಾಗಿದೆ.

ಶ್ರಾವಣ ಪೌರ್ಣಮಿಯಂದು ಸಂಸ್ಕೃತ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಹೀಗೆ ಆಚರಿಸುತ್ತಾ ನಲವತ್ತೊಂಬತ್ತು ವರ್ಷ ನಿನ್ನೆಗೆ ಪೂರ್ಣಗೊಂಡಿದೆ. ಮುಂದಿನ ವರ್ಷದ ಶ್ರಾವಣಕ್ಕೆ ಸುವರ್ಣ ಸಂಭ್ರಮ. ಅಂದಹಾಗೆ, ಸಂಸ್ಕೃತ ಭಾರತಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದವರು ಜನಾರ್ದನ ಹೆಗಡೆ ಹಾಗೂ ಚ.ಮೂ.ಶಾಸ್ತ್ರಿಗಳು.

39 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಸಂಸ್ಕೃತ ಭಾರತಿ

39 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಸಂಸ್ಕೃತ ಭಾರತಿ

ಮೂವತ್ತೇಳು ವರ್ಷಗಳಲ್ಲಿ ಅದೆಷ್ಟೋ ಲಕ್ಷ ಲಕ್ಷ ಮಂದಿ ಈ ಸಂಸ್ಥೆಯಲ್ಲಿ ಸಂಸ್ಕೃತ ಕಲಿತಿದ್ದಾರೆ. 4800 ಶಾಖೆಗಳನ್ನು ಈ ಸಂಸ್ಥೆಯು ಹೊಂದಿದೆ. 39 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 19 ರಾಷ್ಟ್ರಗಳಲ್ಲಿ ಒಂದಲ್ಲಾ ಒಂದು ಸಂಸ್ಕೃತ ಕೋರ್ಸ್ ಇತ್ಯಾದಿಗಳ ಕಾರಣಕ್ಕೆ ಸಂವಹನ ಇದ್ದೇ ಇರುತ್ತದೆ. ಅಮೆರಿಕವೊಂದರಲ್ಲೇ 46 ನಗರಗಳಲ್ಲಿ ಸಂಸ್ಕೃತ ಭಾರತಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಮಾಹಿತಿ ತೆರೆದಿಟ್ಟರು ಲಕ್ಷ್ಮೀನಾರಾಯಣ.

ಮನೆಯಲ್ಲಿ ಮಾತನಾಡುವುದು ಸಂಸ್ಕೃತದಲ್ಲೇ

ಮನೆಯಲ್ಲಿ ಮಾತನಾಡುವುದು ಸಂಸ್ಕೃತದಲ್ಲೇ

ಮೂಲತಃ ಶೃಂಗೇರಿಯವರಾದ ಲಕ್ಷ್ಮೀನಾರಾಯಣ ಸಂಸ್ಕೃತದಲ್ಲಿ ಎಂ.ಎ., ಮಾಡಿದ್ದಾರೆ. ಅವರ ಪತ್ನಿ ಶ್ರೀವಿದ್ಯಾ ಕೂಡ ಎಂ.ಎ., ಸ್ನಾತಕೋತ್ತರ ಪದವೀಧರೆ. ಮಗಳು ಚಿನ್ಮಯಿ ಹಾಗೂ ಮಗ ಎಲ್ಲರೂ ಮನೆಯಲ್ಲಿ ಮಾತನಾಡುವುದು ಸಂಸ್ಕೃತದಲ್ಲೇ. "ನನ್ನ ಮಕ್ಕಳು ಕನಸು ಕಾಣುವುದು ಕೂಡ ಸಂಸ್ಕೃತದಲ್ಲೇ. ಅವರಿಬ್ಬರ ಜಗಳ- ಅಳು ಎಲ್ಲವೂ ಸಂಸ್ಕೃತದಲ್ಲೇ ಇರುತ್ತದೆ" ಎನ್ನುತ್ತಾರೆ.

ಪ್ರಧಾನಿಗಳು ಸಂಸ್ಕೃತದಲ್ಲಿ ಮಾತನಾಡಿದ ಹೆಮ್ಮೆ

ಪ್ರಧಾನಿಗಳು ಸಂಸ್ಕೃತದಲ್ಲಿ ಮಾತನಾಡಿದ ಹೆಮ್ಮೆ

ಭಾನುವಾರದಂದು ಆಕಾಶವಾಣಿಗೆ ಕರೆ ಮಾಡಿದೆ, ಮಾತನಾಡಲು ಅವಕಾಶ ಸಿಕ್ಕಿತು. ಮಗಳು ಮಾತನಾಡಲಿ ಎಂದು ಅವಳಿಗೆ ನೀಡಿದೆ. ಪ್ರಧಾನಿಗಳ ಜತೆಗೆ ಮಾತನಾಡಬೇಕಲ್ಲ ಎಂದು ಆಕೆ ಗಾಬರಿ ಆಗಿದ್ದಳು. ಅವಳ ಧ್ವನಿ ನಡುಗುತ್ತಲೇ ಇತ್ತು. ಆದರೆ ಅವಳ ಜತೆಗೆ ಪ್ರಧಾನಿಗಳು ಸಂಸ್ಕೃತದಲ್ಲೇ ಮಾತನಾಡಿದರಲ್ಲಾ ಅದು ಹೆಮ್ಮೆ ಎನ್ನುತ್ತಾರೆ.

ಸಂಸ್ಕೃತ ಭಾಷೆಗೂ ಮನ್ನಣೆ ಸಿಗಲಿದೆ

ಸಂಸ್ಕೃತ ಭಾಷೆಗೂ ಮನ್ನಣೆ ಸಿಗಲಿದೆ

ಸಂಸ್ಕೃತವು ಈ ಮಣ್ಣಿನ ಭಾಷೆ. ಪುಣ್ಯ ಅನ್ನೋದಕ್ಕೆ ಇಂಗ್ಲಿಷ್ ನಲ್ಲಿ ಪದವೇ ಇಲ್ಲ. ಅಭಿಷೇಕ, ಅರ್ಚನೆ... ಇವೆಲ್ಲ ಇಲ್ಲಿನ, ನಮ್ಮ ಸಂಸ್ಕ್ತತಿಯ ಪದಗಳು. ಅವುಗಳನ್ನು ಸಂಸ್ಕೃತದಲ್ಲಿ ಹೇಳಬಹುದು. ಸಂಸ್ಕೃತ ಭಾರತಿಯಿಂದ ಹತ್ತು ದಿನದಲ್ಲಿ ಸಂಸ್ಕೃತ ಕಲಿಸುವ ಶಿಬಿರ ನಡೆಸುತ್ತಿದ್ದೇವೆ. ಆ ಶಿಬಿರದ ನಂತರ ಸರಳವಾಗಿರುವ ರಾಮಾಯಣದ ಸಂಸ್ಕೃತ ಶ್ಲೋಕಗಳನ್ನು ಆರಾಮವಾಗಿ ಅರ್ಥ ಮಾಡಿಕೊಳ್ಳಬಹುದು. ನಮ್ಮೆಲ್ಲರ ಹೆಸರುಗಳು ಕೂಡ ಸಂಸ್ಕೃತವೇ. ನಾಲ್ಕು ವರ್ಷದ ಹಿಂದೆ ಯೋಗದ ಬಗ್ಗೆ ಇಷ್ಟು ಮಾತನಾಡಿದರೆ ಯಾರಾದರೂ ನಗುತ್ತಿದ್ದರು. ಆದರೆ ಈಗ ಅದೆಷ್ಟೋ ದೇಶಗಳಲ್ಲಿ ಯೋಗಕ್ಕೆ ಮನ್ನಣೆ ಸಿಕ್ಕಿದೆ. ಅದೇ ರೀತಿ ಸಂಸ್ಕೃತಕ್ಕೂ ಮನ್ನಣೆ ಸಿಗಲಿದೆ ಎಂದು ಲಕ್ಷ್ಮೀನಾರಾಯಣ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+