ಯೋಗದಿನದಲ್ಲಿ ಮಿಂದೆದ್ದ ಉದ್ಯಾನ ನಗರಿ ಬೆಂಗಳೂರು
ಬೆಂಗಳೂರು, ಜೂನ್ 21: ಬೆಂಗಳೂರಿಗರ ಪಾಲಿಗೆ ಜೂನ್ 21ರ ಬೆಳಗು ಎಲ್ಲದಿನದಂತಲ್ಲ. ಬೆಂಗಳೂರಿನ ಪ್ರಸಿದ್ಧ ಸ್ಟೇಡಿಯಂಗಳು, ಮೈದಾನಗಳು, ಪಾರ್ಕ್ ಗಳು ಎಲ್ಲೆಡೆ ಬೆಳ್ಳಂಬೆಳಗ್ಗೆ ಬಿಳಿ ಬಟ್ಟೆ ತೊಟ್ಟ, ಹರುಪಿನ ಜನರೇ ಕಾಣಿಸುತ್ತಿದ್ದರು. ದಿನನಿತ್ಯದ ಎಲ್ಲ ಜಂಜಡಗಳನ್ನು ಮರೆತು ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದಕ್ಕಾಗಿ ಬಹುಪಾಲು ಜನರು ಯೋಗದ ಮೊರೆಹೋಗುತ್ತಿದ್ದರು.
ನಿಜ, ಪ್ರಪಂಚದಾದ್ಯಂತ ನಡೆಯುತ್ತಿರುವ ಅಂತಾರಾಷ್ಟ್ರೀಯ ಯೋಗದಿನದ ಸಂಭ್ರಮ ಉದ್ಯಾನ ನಗರಿ ಬೆಂಗಳೂರಿನ ಉದ್ದಗಲಕ್ಕೂ ವ್ಯಾಪಿಸಿದೆ. ಬೆಳಗ್ಗಿನ ಜಾವದಿಂದಲೇ ಯೋಗಜಾತ್ರೆ ಆರಂಭವಾಗಿ, ಲಕ್ಷಾಂತರ ಜನರು ವಿವಿಧ ಪ್ರದೇಶಗಳಲ್ಲಿ ಯೋಗಾಚರಣೆ ಮಾಡುವ ಮೂಲಕ ಮೂರನೇ ಅಂತಾರಾಷ್ಟ್ರೀಯ ಯೋಗದಿನದ ಸಂಭ್ರಮವನ್ನು ದುಪ್ಪಟ್ಟಾಗಿಸಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಪಾರ್ಕ್ ಗಳಲ್ಲಿ, ಸ್ಟೇಡಿಯಂಗಳಲ್ಲಿ, ಮೈದಾನಗಳಲ್ಲಿ, ಹಲವರು ಮನೆಯಲ್ಲಿ ಯೋಗಾಸನ ಮಾಡಿ, ಇನ್ನು ಪ್ರತಿದಿನ ಯೋಗ ಮಾಡುವ ಸಂಕಲ್ಪ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಗಾಂಧಿವಾದಿ ಅಣ್ಣಾ ಹಜಾರೆ ಸೇರಿದಂತೆ ಪ್ರಮುಖರೆಲ್ಲ ಯೋಗಾಸನ ಮಾಡುವ ಮೂಲಕ ಯೋಗ ದಿನಕ್ಕೆ ಶುಭಕೋರಿದರು.
|
ಗಾಂಧಿವಾದಿ ಜೊತೆ ಯೋಗಾಚರಣೆ
ಬೆಂಗಳೂರಿನ ಕಂಠೀರವ ಹೊರಾಂಗಣ ಸ್ಟೇಡಿಯಂ ನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆ, ಕೇಂದ್ರ ಸಚಿವ ಅನಂತ ಕುಮಾರ್, ಆರೋಗ್ಯ ಸಚಿವ ರಮೇಶ್ ಕುಮಾರ್, 98 ವರ್ಷದ ಯೋಗಮಾತೆ ಟಾವೋ ಪೋರ್ಚಾನ್ ಲಿಂಚ್ ಸೇರಿದಂತೆ ಹಲವು ಗಣ್ಯರು ಯೋಗಾಸನ ಮಾಡುವ ಮೂಲಕ ಯೋಗದಿನಾಚರಣೆ ಆಚರಿಸಿದರು.
|
ಬಿಜೆಪಿ ಕಚೇರಿಯಲ್ಲಿ ಯೋಗದಿನ
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಯೋಗದಿನಾಚರಣೆಯಲ್ಲಿ ನೂರು ಜನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಯ ಯೋಗಾಸನ ಮಾಡಿದ್ದು ವಿಶೇಷವಾಗಿತ್ತು.
|
ಜೆಪಿ ನಗರದಲ್ಲೂ ಯೋಗದಿನ
ಬೆಂಗಳೂರಿನ ಜೆಪಿ ನಗರದಲ್ಲೂ ಇಂದು ಬೆಳಗ್ಗೆ ಯೋಗದಿನ ಆಚರಣೆಗೊಂಡಿತು. ಚಳಿ ಲೆಕ್ಕಿಸದೆ ಜನರು ಜೆಪಿ ನಗರದ ಮೈದಾನವೊಂದರಲ್ಲಿ ಯೋಗ ಮಾಡುತ್ತಿದ್ದ ದೃಶ್ಯ ಕಂಡುಬಂತು.
|
ಮತ್ತಿಕೆರೆಯಲ್ಲಿ ಯೋಗ
ಬೆಂಗಳೂರಿನ ಮತ್ತಿಕೆರೆಯ ಜೆ.ಪಿ.ಪಾರ್ಕಿನಲ್ಲಿಯೂ ಬೆಳ್ಳಂಬೆಳಗ್ಗೆ ಜನರು ಯೋಗಾಸನ ಮಾಡುವುದರಲ್ಲಿ ನಿರತರಾಗಿದ್ದು ಕಂಡುಬಂತು.












Click it and Unblock the Notifications