ಬೆಂಗಳೂರು ಪೊಲೀಸರ ನೆರವಿಗೆ ಧನ್ಯವಾದ ಹೇಳಿದ ಅಂತಾರಾಷ್ಟ್ರೀಯ ಡಿಜೆ
ಬೆಂಗಳೂರು, ಮಾರ್ಚ್ 12: ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಡಿಸ್ಕ್ ಜಾಕಿ (ಡಿಜೆ) ನೆರವಿಗೆ ಬಂದ ಬೆಂಗಳೂರು ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಕಾರ್ಯಕ್ರಮವೊಂದರ ಆಯೋಜಕರು ಆಕೆಗೆ ವಂಚನೆ ಮಾಡಲು ಯತ್ನಿಸಿದಾಗ ಪೊಲೀಸರು ಸಹಾಯ ಮಾಡಿದ್ದಾರೆ. ಆಕೆಯ ಪ್ರಕಾರ, ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ. ಕೊಟ್ಟ ಮಾತಿನಂತೆ ಕಾರ್ಯಕ್ರಮದ ಸಂಭಾವನೆಯನ್ನೂ ನೀಡಿಲ್ಲ.
ಇಂಗ್ಲೆಂಡ್ ನ ಕೇಶ ಅಯ್ರೆಸ್ ಇಂಡೋನೇಷ್ಯಾದ ಬಾಲಿಯಲ್ಲಿ ಇದ್ದಾರೆ. ಎರಡು ವಾರಗಳ ಹಿಂದೆ ಬೆಂಗಳೂರಿನ ಕಂಪನಿಯೊಂದು ಭಾರತದ ವಿವಿಧೆಡೆ ಆಕೆಯ ಕಾರ್ಯಕ್ರಮ ಆಯೋಜಿಸಿದ್ದರಿಂದ ಇಲ್ಲಿಗೆ ಬಂದಿದ್ದರು. ಆದರೆ ಕೇಶ ಬೆಂಗಳೂರಿಗೆ ಬಂದಿಳಿದ ಮೇಲೆ ಆಯೋಜಕರು ಆಕೆಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಲ್ಲ. ಜತೆಗೆ ಸಂಭಾವನೆಯನ್ನೂ ನೀಡಿಲ್ಲ.
ಆಕೆ ತನ್ನ ಸ್ನೇಹಿತರ ನೆರವು ಪಡೆದು ಬೆಂಗಳೂರು ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಬಳಿ ತೆರಳಿ, ತಮ್ಮ ಸ್ಥಿತಿಯನ್ನು ತಿಳಿಸಿದ್ದಾರೆ. ಆ ನಂತರ ಪೊಲೀಸ್ ಕಮಿಷನರ್ ಸ್ಥಳೀಯ ಪೊಲೀಸರಿಗೆ ಸಮಸ್ಯೆ ನಿವಾರಿಸುವಂತೆ ಸೂಚಿಸಿದ್ದಾರೆ. ಬಾಣಸವಾಡಿ ಪೊಲೀಸರು ಆಕೆಗೆ ಬರಬೇಕಿದ್ದ ಆರು ನೂರು ಅಮೆರಿಕನ್ ಡಾಲರ್ ಅನ್ನು ಆಯೋಜಕರಿಂದ ಕೊಡಿಸಿದ್ದಾರೆ.

ಆ ನಂತರ ಕೇಶ ಬಾಲಿ ತಲುಪಿಕೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸರು ತಮಗೆ ಮಾಡಿದ ಸಹಾಯವನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಬೆಂಗಳೂರು ಕಮಿಷನರ್ ಸುನೀಲ್ ಕುಮಾರ್, ಡಿಸಿಪಿ ರಾಹುಲ್ ಕುಮಾರ್, ಬಾಣಸವಾಡಿ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮುರಳಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಮಾರ್ಚ್ ಮೂರನೇ ತಾರೀಕು ಕೇಶ ದೂರು ನೀಡಿದರು. ಅದೇ ದಿನ ಪ್ರಕರಣ ಬಗೆಹರಿಸಿದೆವು. ಆದರೆ ಆಯೋಜಕರ ವಿರುದ್ಧ ದೂರು ನೀಡಲು ಆಕೆ ನಿರಾಕರಿಸಿದರು. ಏಕೆಂದರೆ ಅವರು ವಾಪಸ್ ತಮ್ಮ ದೇಶಕ್ಕೆ ತೆರಳಬೇಕಿತ್ತು. ಪ್ರಕರಣ ದಾಖಲಾದರೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೂರು ದಾಖಲಿಸಲಿಲ್ಲ. ಕಾರ್ಯಕ್ರಮ ಆಯೋಜಕರ ವಿರುದ್ಧ ಅರ್ಜಿ ನೀಡಿದ್ದಾರೆ.












Click it and Unblock the Notifications