ಬಿಬಿಎಂಪಿ ಮೇಯರ್ ಚುನಾವಣೆ: ಗುಪ್ತಚರ ವರದಿಗೆ ಕಾಂಗ್ರೆಸ್ ಬೇಸ್ತು!
ಬೆಂಗಳೂರು, ಸೆ 4: ಮೇಲ್ನೋಟಕ್ಕೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಕೂಟಕ್ಕೆ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಪಟ್ಟ ಖಚಿತ ಎನ್ನುವ ಲೆಕ್ಕಾಚಾರವಿದ್ದರೂ, ಎಚ್ಚರದಿಂದ ಇರುವಂತೆ ರಾಜ್ಯ ಗುಪ್ತಚರ ಇಲಾಖೆ ಸಿಎಂ ಕಚೇರಿಗೆ ಮಾಹಿತಿ ನೀಡಿದೆ ಎನ್ನಲಾಗುತ್ತಿದೆ.
ಸಂಖ್ಯಾಬಲದ ಆಧಾರದ ಮೇಲೆ ಮತ್ತು ಎರಡು ಪಕ್ಷದ ಮುಖಂಡರ ನಡುವಣ ಮಾತುಕತೆಯ ನಂತರ ಮೈತ್ರಿ ಸರಕಾರ ಬಹುತೇಕ ನಿಶ್ಚಿತ ಎನ್ನುವ ವಿಶ್ವಾಸದಲ್ಲಿ ಎರಡೂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿದ್ದಾರೆ.
ಆದರೆ. ಮೇಯರ್ ಚುನಾವಣೆಯ ವೇಳೆ ಏನು ಬೇಕಾದರೂ ನಡೆಯಬಹುದಾದ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆಯ ವರದಿ ಸಿಎಂ ಕಚೇರಿಗೆ ತಲುಪಿದ ನಂತರ, ಕಾಂಗ್ರೆಸ್ ತನ್ನ ರಣತಂತ್ರವನ್ನು ಬದಲಿಸಲು ನಿರ್ಧರಿಸಿದೆ ಎನ್ನುವ ಮಾಹಿತಿಯಿದೆ. (ಕಾಂಗ್ರೆಸ್ಸಿಗೆ ಜೆಡಿಎಸ್ ಕೊಟ್ಟ ಬಿಸಿತುಪ್ಪ)
ತಮ್ಮ ಪಕ್ಷದ ಕಾರ್ಪೋರೇಟರುಗಳನ್ನು ಬೇರೆ ಪಾರ್ಟಿಯವರು ತಮ್ಮತ್ತ ಸೆಳೆಯಲು ಪ್ರಯತ್ನಿಸ ಬಹುದು ಎನ್ನುವ ಭಯದಿಂದ, ತಮ್ಮ ಪಕ್ಷದ ಕಾರ್ಪೋರೇಟರುಗಳನ್ನು ಕಾಂಗ್ರೆಸ್ ರೆಸಾರ್ಟಿಗೆ ಕಳುಹಿಸಲು ನಿರ್ಧರಿಸಿದೆ.
ಪಕ್ಷದ ಎಲ್ಲಾ ಕಾರ್ಪೋರೇಟರುಗಳನ್ನು ಮೂರು ವಿಭಾಗಗಳನ್ನಾಗಿ ಮಾಡಿ ರೆಸಾರ್ಟಿಗೆ ಕರೆದುಕೊಂಡು ಹೋಗಿ, ವಾಪಸ್ ಕರೆತರುವ ಜವಾಬ್ದಾರಿಯನ್ನು ನಗರದ ಕೆಲವು ಶಾಸಕರಿಗೆ ನೀಡಲಾಗಿದೆ ಎನ್ನುವ ಸುದ್ದಿಯಿದೆ.
ವಿನಾ ಕಾರಣ ಅಪಾಯಕ್ಕೆ ಆಸ್ಪದ ಬೇಡ
ಗುಪ್ತಚರ ವರದಿಯ ನಂತರ ವಿನಾಕಾರಣ ತೊಂದರೆ ತೆಗೆದುಕೊಳ್ಳುವುದು ಬೇಡ, ಜೊತೆಗೆ ಮುಜುಗರ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ಮುಖಂಡರು ಎಚ್ಚೆತ್ತುಕೊಂಡಿದ್ದಾರೆ. ಹಾಗಾಗಿ ಪಕ್ಷದ ಎಲ್ಲಾ 76 ಚುನಾಯಿತ ಸದಸ್ಯರನ್ನು ರೆಸಾರ್ಟಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಜೆಡಿಎಸ್ ಅವರೂ ರೆಸಾರ್ಟಿನಲ್ಲಿ
ಜೆಡಿಎಸ್ ಮತ್ತು ಪಕ್ಷೇತರ ಕಾರ್ಪೋರೇಟರುಗಳೂ ರೆಸಾರ್ಟಿನಲ್ಲಿದ್ದಾರೆ. ಪಕ್ಷೇತರರು ಈಗಾಗಲೇ ಎರಡು/ಮೂರು ಬಾರಿ ರೆಸಾರ್ಟ್ ಬದಲಾಯಿಸಿಯಾಗಿದೆ. ಬಿಜೆಪಿ ಮುಖಂಡರ ಜೊತೆ ಸಂಪರ್ಕ ತಪ್ಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಈ ರೀತಿ ಮಾಡುತ್ತಿದ್ದಾರೆ.
ಜೆಡಿಎಸ್ ನವರು ಇಂದು ನಗರಕ್ಕೆ ವಾಪಸ್
ಕೇರಳದಲ್ಲಿರುವ ಜೆಡಿಎಸ್ ಚುನಾಯಿತ ಸದಸ್ಯರು ಮತ್ತು ಪಕ್ಷದ ಶಾಸಕರು ಶುಕ್ರವಾರ (ಸೆ 4) ರಾತ್ರಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಶನಿವಾರ ದೇವೇಗೌಡರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮೈತ್ರಿ ಕುರಿತು ಅಂತಿಮ ನಿರ್ಧಾರ ತೆಗೆದು ಕೊಳ್ಳಲಾಗುತ್ತದೆ. ಇದಾದ ನಂತರ ಭಾನುವಾರ ಜೆಡಿಎಸ್ ಕಾರ್ಪೋರೇಟರುಗಳು ಮತ್ತೆ ಟೂರಿಗೆ ತೆರಳಲಿದ್ದಾರೆ ಎನ್ನುವ ಮಾಹಿತಿಯಿದೆ.
ಕುಮಾರಸ್ವಾಮಿ ಮತ್ತು ಪರಮೇಶ್ವರ್ ಮಾತುಕತೆ
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾತುಕತೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನಡುವೆ ನಡೆಯ ಬೇಕಾಗಿರುವ ಮಾತುಕತೆಯ ನಂತರ ಮೈತ್ರಿ ಬಗ್ಗೆ ಅಂತಿಮ ಸುದ್ದಿ ಹೊರಬೀಳಲಿದೆ. ಬಿಬಿಎಂಪಿ ವಿಭಜನೆಯನ್ನು ಕಾಂಗ್ರೆಸ್ ಕೈಬಿಡಬೇಕು ಎನ್ನುವುದು ಜೆಡಿಎಸ್ ಪಕ್ಷದ ಸ್ಪಷ್ಟ ನಿಲುವು.
ಇನ್ನೂ ವಿಶ್ವಾಸದಲ್ಲಿ ಇದ್ದಾರೆ, ಅಶೋಕ್
ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ನಮ್ಮ ಪಕ್ಷದ ಅಭ್ಯರ್ಥಿಗಳೇ ಆಯ್ಕೆಯಾಗುತ್ತಾರೆ. ಜೆಡಿಎಸ್ ಪಕ್ಷದ ಮೇಲೆ ಆರ್ ಅಶೋಕ್ ಅದಮ್ಯ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಚುನಾವಣೆಯ ದಿನ ನೋಡುತ್ತಿರಿ ಎಂದು ಅಶೋಕ್ ಹೇಳಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮಂಡೆಬಿಸಿ ಮಾಡಿದ್ದಾರೆ.