ಇನ್ಸ್ಪೆಕ್ಟರ್ ಮೇಲೆ ಕಳ್ಳನನ್ನೇ ದೋಚಿದ ದೂರು!

ಕಳವು ಮಾಡುತ್ತಿದ್ದ ಆರೋಪಿ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಇನ್ಸ್ ಪೆಕ್ಟರ್ ತನ್ವೀರ್, ಅಲ್ಲಿ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಆರೋಪ. ಸದ್ಯ ಈ ಪ್ರಕರಣದ ಕುರಿತು ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಆದೇಶ ನೀಡಿದ್ದಾರೆ.
ತನ್ವೀರ್ ಅವರು ಜೆ.ಸಿ.ನಗರ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದಾಗ, ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಕಳ್ಳನ ಮನೆ ಮೇಲೆ ದಾಳಿ ನಡೆಸಿ ಸುಮಾರು 600 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಆದರೆ, ಈ ಕುರಿತು ಯಾವುದೇ ಕೇಸು ದಾಖಲಿಸದೆ ವಶಪಡಿಸಿಕೊಂಡ ಚಿನ್ನಾಭರಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದು ಆರೋಪ.
ಶಬ್ಬೀರ್ ಪಾಷಾ ಎಂಬ ಮನೆಕಳವು ಮಾಡುವ ವ್ಯಕ್ತಿ ಈ ಮಾಹಿತಿ ಬಹಿರಂಗ ಪಡಿಸಿದ್ದು, ಮಡಿವಾಳ ಎಸಿಪಿ ಅವರ ನೇತೃತ್ವದಲ್ಲಿ ತನ್ವೀರ್ ಮೇಲಿನ ಆರೋಪಗಳ ಕುರಿತು ತನಿಖೆ ಪ್ರಾರಂಭವಾಗಿದೆ. ಈ ವರದಿ ಬಂದ ನಂತರ ತನ್ವೀರ್ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ : ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಶಬ್ಬೀರ್ ಪಾಷಾ ಎಂಬಾತ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮನೆ ಕಳುವು ಮಾಡಿದ್ದ. ಈ ಬಗ್ಗೆ ಜೆ.ಸಿ.ನಗರ ಠಾಣೆಗೆ ಮಾಹಿತಿ ಬಂದಿತ್ತು, ಆಗ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ತನ್ವೀರ್ ಏಕಾಂಗಿಯಾಗಿ ಶಬ್ಬೀರ್ ಪಾಷಾ ಮನೆ ಮೇಲೆ ದಾಳಿ ನಡೆಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದರು.
ಪ್ರಕರಣವೊಂದರ ವಿಚಾರಣೆಗಾಗಿ ನಾಲ್ಕು ದಿನಗಳ ಹಿಂದೆ ಶಬ್ಬೀರ್ ಪಾಷಾ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆತ ತನ್ನ ಮನೆ ಮೇಲೆ ತನ್ವೀರ್ ದಾಳಿ ನಡೆಸಿ ಚಿನ್ನಾಭರಣ ವಶಪಡಿಸಿಕೊಂಡ ಸಂಗತಿಯನ್ನು ಬಹಿರಂಗ ಪಡಿಸಿದ್ದಾನೆ. ಈ ಮಾಹಿತಿ ಹೊರ ಬರುತ್ತಿದ್ದಂತೆ ತನ್ವೀರ್ ರಜೆಯ ಮೇಲೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ಮನೆಗೆಲಸದವಳಿಂದ ಮನೆಯಲ್ಲಿನ ಚಿನ್ನಾಭರಣ ವಶಪಡಿಸಿಕೊಂಡು ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಸಿದ್ದಾಪುರ ಠಾಣೆ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಮೂವರು ಜೈಲು ಸೇರಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಪೊಲೀಸರೇ ಕಳ್ಳತನ ಮಾಡಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications