ರುದ್ರೇಶ್ ಹಂತಕರಿಗೆ ಭಯೋತ್ಪಾದಕ ನಂಟು, 'ಎನ್ಐಎ'ನಿಂದ ಸ್ಪೋಟಕ ಮಾಹಿತಿ
ಕಳೆದ ಅಕ್ಟೋಬರಿನಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ಹಾಡ ಹಗಲೇ ಹತ್ಯೆಯಾದ ರುದ್ರೇಶ್ ಹಂತಕರಿಗೆ ಇಂಡಿಯನ್ ಮುಜಾಹಿದ್ದೀನ್ ಜತೆ ನಂಟಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ಎನ್ಐಎ ಬಹಿರಂಗಪಡಿಸಿದೆ.
ಬೆಂಗಳೂರು, ಏಪ್ರಿಲ್ 11: ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಹಂತಕರಿಗೆ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಜತೆ ಸಂಪರ್ಕ ಇತ್ತು ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಖಚಿತಪಡಿಸಿದೆ.
ಕಳೆದ ಅಕ್ಟೋಬರಿನಲ್ಲಿ ರುದ್ರೇಶ್ ರನ್ನು ಬೆಂಗಳೂರಿನ ಶಿವಾಜಿನಗರದಲ್ಲಿ ಹಾಡುಹಗಲೇ ಕೊಲೆ ಮಾಡಲಾಗಿತ್ತು. ನಂತರ ಇದರ ತನಿಖೆಯ ಹೊಣೆಯನ್ನು ಎನ್ಐಎ ವಹಿಸಿಕೊಂಡಿತ್ತು.
ಐದು ಆರೋಪಿಗಳಿಗೆ ಇಂಡಿಯನ್ ಮುಜಾಹಿದ್ದೀನ್ ನಾಯಕ ಸೈಯದ್ ಇಸ್ಮಾಯಿಲ್ ಅಫಾಕ್ ಜತೆ ಸಂಪರ್ಕ ಇದ್ದುದಾಗಿ ಎನ್ಐಎ ಹೇಳಿದೆ. ಸೈಯದ್ ಇಸ್ಮಾಯಿಲ್ ಕರ್ನಾಟಕದ ಭಟ್ಕಳ ಮೂಲದವನಾಗಿದ್ದು, ಯಾಸೀನ್ ಭಟ್ಕಳ್ ನೀಡಿದ ಮಾಹಿತಿ ಮೇರೆಗೆ ಆತನನ್ನು ಈ ಹಿಂದೆ ಬಂಧಿಸಲಾಗಿತ್ತು.

ಬೆಂಗಳೂರು ಪಿಎಫ್ಐ ಜಿಲ್ಲಾಧ್ಯಕ್ಷ ಅಸೀಮ್ ಶರೀಫ್ ಸೇರಿ ಐವರನ್ನು ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಇರ್ಫಾನ್ ಪಾಷಾ, ವಸೀಮ್ ಅಹ್ಮೆದ್, ಮೊಹಮ್ಮದ್ ಸಾದಿಕ್, ಮಜೀಬುಲ್ಲಾ ಇತರ ಬಂಧಿತರಾಗಿದ್ದಾರೆ.
ವಿಚಾರಣೆ ವೇಳೆ ರುದ್ರೇಶ್ ಮಾತ್ರವಲ್ಲ ಇನ್ನೂ ಹಲವು ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದರು. ಜತೆಗೆ ಇಂಡಿಯನ್ ಮುಜಾಹಿದ್ದೀನ್ ಜತೆಗೆ ಇವರಿಗೆ ಸಂಪರ್ಕ ಇದೆ ಎಂಬುದು ತಿಳಿದು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಎನ್ಐಎ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದೆ.
ರುದ್ರೇಶ್ ಹತ್ಯೆ ಭಯೋತ್ಪಾದನಾ ಕೃತ್ಯ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ. ಮತ್ತು ಈ ಕೃತ್ಯದ ಮೂಲಕ ಹಿಂದೂ ನಾಯಕರಿಗೆ ಎಚ್ಚರಿಕೆಯ ಸಂದೇಶ ನೀಡುವ ಉದ್ದೇಶವನ್ನು ಈ ಆರೋಪಿಗಳು ಹೊಂದಿದ್ದರು ಎಂಬುದಾಗಿ ಎನ್ಐಎ ಹೇಳಿದೆ.
ರುದ್ರೇಶ್ ಕೊಲೆ ಮಾಡುವಾಗ ಆರೋಪಿಗಳು ಆತನನ್ನು ಕಾಫಿರ ಎಂದು ಸಂಬೋಧಿಸಿದ್ದಾಗಿ ಎನ್ಐಎ ಇದೇ ಸಂದರ್ಭದಲ್ಲಿ ಹೇಳಿದ.












Click it and Unblock the Notifications