ಅಕ್ರಮ ಗಣಿಗಾರಿಕೆ; ಮೀಸಗಾನಹಳ್ಳಿ ಮನೆ ಗೋಡೆಗಳು ಬಿರುಕು
ಬೆಂಗಳೂರು, ಮಾರ್ಚ್ 30; ಬಡವರು, ಕೂಲಿ ಕಾರ್ಮಿಕರು ವಾಸ ಮಾಡುತ್ತಿರುವ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಸರ್ಕಾರ ಬಂಡೆಗಳನ್ನು ನೀಡುತ್ತಿದೆ. ಇದರಿಂದ ಕಷ್ಟಪಟ್ಟು ಕಟ್ಟಿಕೊಂಡಿರುವ ಮನೆಗಳ ಗೋಡೆಗಳಲ್ಲಿ ಬಿರುಕು ಉಂಟಾಗುತ್ತಿದೆ. ಅಕ್ರಮ ಕಲ್ಲುಗಣಿಗಾರಿಕೆಯಿಂದ ಮೀಸಗಾನಹಳ್ಳಿಯ ಜನರಿಗೆ ಅನಾನುಕೂಲವಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಭೋವಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ ಆರೋಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಜಿಲ್ಲಾ ಉಪ ನಿರ್ದೇಶಕರ ಕಛೇರಿಗೆ ಮೀಸಗಾನಹಳ್ಳಿ ಗ್ರಾಮಸ್ಥರು ಭೇಟಿ ನೀಡಿ ದೂರು ನೀಡಿದ್ದಾರೆ. ಗಣಿಗಾರಿಕೆಯಿಂದ ತುಂಬಾ ತೊಂದರೆಯಾಗುತ್ತಿದೆ. ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲು, ದಿಮ್ಮಿಗಳನ್ನು ಸಾಗಿಸುವ ಭಾರಿ ಗಾತ್ರದ ಲಾರಿಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿನ ರಸ್ತೆಗಳು ಹಾಳಾಗಿದೆ. ಬಂಡೆಗಳನ್ನು ಒಡೆಯಲು ಬಳಸುವ ಸ್ಪೋಟಕದಿಂದ ಉಂಟಾಗುವ ಸ್ಪೋಟದ ಶಬ್ದಕ್ಕೆ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ. ಮನೆಗಳು ಬಿರುಕು ಬಿಟ್ಟಿದೆ, ಜನ, ಜಾನುವಾರುಗಳು ಹಾಗೂ ರೈತರ ಬೆಳೆಗಳಿಗೆ ಕಲ್ಲು, ಮಣ್ಣಿನ ದೂಳು ತುಂಬಿಕೊಂಡು ಬೆಳೆಗಳು ಹಾನಿಯಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮೀಸಗಾನಹಳ್ಳಿ ಬಂಡೆಯಲ್ಲಿ ಗೋಪಾಲಯ್ಯ ಎಂಬುವವರು ನಿಧನ ಹೊಂದಿದ ನಂತರವೂ ಅವರ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಬಂಡೆ ಒಡೆಯದಂತೆ ಸರ್ಕಾರದ ಆದೇಶವಿದ್ದರು ಕಾಯ್ದೆ, ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಅಕ್ರಮಗಳು ನಡೆಯುತ್ತಿವೆ.
ಗ್ರಾಮದಲ್ಲಿ ವಾಸವಿರುವ ಬಂಡೆ ಸ್ಫೋಟದ ಸದ್ದಿನಿಂದಾಗಿ ಜೀವವನ್ನೇ ಮುಷ್ಟಿಯಲ್ಲಿ ಹಿಡಿದು ಬದುಕುವಂತಾಗಿದೆ. ಮೀಸಗಾನಹಳ್ಳಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಭೋವಿ ಸಮುದಾಯದ ಸುಮಾರು70 ಕುಟುಂಬಗಳು ವಾಸವಿದ್ದು ಎಲ್ಲರೂ ಸಾಂಪ್ರದಾಯಿಕ ಕಲ್ಲುಕುಟಿಕರಾಗಿದ್ದು, ನಮಗೆ ಕಲ್ಲುಗಳ ಕೆಲಸವನ್ನು ಕೊಡದೆ ವಂಚಿಸಿ ಹಣವಂತರಿಗೆ ಮಾತ್ರ ಎಕರೆ ಗಟ್ಟಲೆ ಗಣಿಗಾರಿಕೆ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಸಾಂಪ್ರದಾಯಿಕ ಕಲ್ಲುಕುಟಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದುಡ್ಡು ಕಸಿದುಕೊಳ್ಳುವ ಕಚೇರಿಯಾಗಿದೆ. ಕಲ್ಲು ಗಣಿಗಾರಿಕೆಯಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಕಲ್ಲುಕುಟಿಕರಾದ ಭೋವಿ ಜನಾಂಗದವರಾದ ನಮಗೆ ಸರ್ಕಾರದಿಂದ ಬಂಡೆ ಮಂಜೂರು ಮಾಡಿಕೊಡುವ ಆದೇಶ ಧಿಕ್ಕರಿಸಿ ನಮ್ಮನ್ನು ಅಧಿಕಾರಿಗಳು ವಿನಾಕಾರಣ ಕಛೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಲಂಚದಾಸೆಯಿಂದ ಹಣವಂತ ಉದ್ಯಮಿಗಳಿಗೆ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಬಂಡೆ ಲೀಸ್ ಮಾಡುತ್ತಿದ್ದಾರೆ. ಅಧಿಕಾರಿಗಳ ಇಂತಹ ತಾರತಮ್ಯವನ್ನು ತಾಲ್ಲೂಕು ಭೋವಿ ಜನಾಂಗ ಖಂಡಿಸುವುದರ ಜೊತೆಗೆ ನಮಗಾದ ಅನ್ಯಾಯದ ವಿರುದ್ದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುತ್ತೇವೆ ಎಂದು ತಾಲ್ಲೂಕು ಸಾಂಪ್ರದಾಯಿಕ ಕಲ್ಲುಕುಟಿಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದರು.












Click it and Unblock the Notifications