ಸಿದ್ದರಾಮಯ್ಯ ಬುರ್ಖಾ ನಿಷೇಧ ಮಾಡಲಿ : ಬಿಜೆಪಿ ಸವಾಲು
ಬೆಂಗಳೂರು, ನ.8 : ಸಿದ್ದರಾಮಯ್ಯ ಜಾರಿಗೆ ತರಲು ಹೊರಟಿರುವ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ ಬಗ್ಗೆ ತಮ್ಮ ವಾಗ್ದಾಳಿ ಮುಂದುವರೆಸಿರುವ ಪ್ರತಿಪಕ್ಷ ಬಿಜೆಪಿ, ಸಿಎಂ ಮುಸ್ಲಿಂ ಹೆಣ್ಣು ಮಕ್ಕಳು ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರುವಂತಹ ಕಾನೂನನ್ನು ಸಿಎಂ ಸಿದ್ದರಾಮಯ್ಯ ಅವರು ಜಾರಿಗೆ ತರಲಿ ಎಂದು ಸವಾಲು ಹಾಕಿದ್ದಾರೆ.
ನ.17ರಂದು ಅರಮನೆ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶ ಯಶಸ್ವಿಯಾಗಲಿ ಎಂದು ಬಿಜೆಪಿ ಶುಕ್ರವಾರ ಹಮ್ಮಿಕೊಂಡಿದ್ದ ಗಣಪತಿ, ನವಗ್ರಹ, ಮೃತ್ಯುಂಜಯ ಹೋಮದಲ್ಲಿ ಭಾಗವಹಿಸಿ ಮಾತನಾಡಿದ ಸಿ.ಟಿ.ರವಿ, ಆರ್.ಅಶೋಕ್ ಮುಂತಾದ ನಾಯಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮುಸ್ಲಿಂ ಮೌಲ್ವಿಗಳು ಹೆಣ್ಣುಮಕ್ಕಳು ಕಡ್ಡಾಯವಾಗಿ ಬುರ್ಖಾ ಹಾಕಬೇಕೆಂದು ಫರ್ಮಾನು ಹೊರಡಿಸುತ್ತಾರೆ. ಇದನ್ನು ತಡೆಗಟ್ಟುವಂತಹ ಕಾನೂನು ತಂದು ಇದಕ್ಕೆ ಒತ್ತಾಯ ಮಾಡುವ ಮೌಲ್ವಿಗಳನ್ನು ಜೈಲಿಗೆ ಹಾಕುವ ಧೈರ್ಯವನ್ನು ಸಿದ್ದರಾಮಯ್ಯ ತೋರಿಸುತ್ತಾರೆಯೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದರು. ಈಗ ಸಿದ್ದರಾಮಯ್ಯ ಸರ್ಕಾರ ತರಲು ಹೊರಟಿರುವ ಕಾಯ್ದೆ ಮತ್ತು ಮಸೂದೆಯನ್ನು ಅವರ ಹೆಂಡತಿ, ಮಕ್ಕಳೇ ಒಪ್ಪುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕಂದಾಚಾರ, ಮೌಢ್ಯ ಎಂಬುದು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಧರ್ಮದಲ್ಲೂ ಮೌಢ್ಯವಿದೆ. ನಿಷೇಧ ಮಾಡುವುದಾದರೆ ಕೇವಲ ಹಿಂದೂ ಧರ್ಮದ ಮೌಢ್ಯಗಳನ್ನು ಮಾತ್ರ ಏಕೆ ಮಾಡುತ್ತೀರಿ? ಎಂದು ಪ್ರಶ್ನಿಸಿದರು. ಮುಸ್ಲಿಂ, ಕ್ರೈಸ್ತ ಮತ್ತು ಜೈನ ಧರ್ಮದಲ್ಲಿರುವ ನಂಬಿಕೆಯನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತರುವ ಮೂಲಕ ರಾಜ್ಯದಲ್ಲಿ ಉರ್ದು ಜಪ ಮಾಡಿಸುತ್ತಿದೆ. ಸರ್ಕಾರಕ್ಕೆ ಯಾವ ಕಾಲದಲ್ಲಿ ಯಾವ ಯೋಜನೆ ತರಬೇಕು, ಹೇಗೆ ತರಬೇಕು ಎಂಬ ಪರಿಕಲ್ಪನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಮೂಢನಂಬಿಕೆ ನಿಷೇಧ ಕಾನೂನು ಜಾರಿಗೆ ತರಲು ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನರೇಂದ್ರ ಮೋದಿ ಸಮಾವೇಶಕ್ಕೆ ಪಾಟ್ನಾದಲ್ಲಿ ಎದುರಾದಂತಹ ಯಾವುದೇ ರೀತಿಯ ಅಹಿತಕರ ಘಟನೆಗಳು ಬೆಂಗಳೂರಿನಲ್ಲಿ ನಡೆಯಬಾರುದು ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಮೋದಿಯವರ ಸಮಾವೇಶ ಚೆನ್ನಾಗಿ ನಡೆಯಬೇಕು, ಭಾರತ ಗೆಲ್ಲಿಸಿ ಎಂಬ ಅಭಿಯಾನಕ್ಕೆ ಜಯ ದೊರಕಬೇಕೆಂದು ಪ್ರಾರ್ಥಿಸಿ ಹೋಮ ಮಾಡಲಾಗಿದೆ ಎಂದು ಹೇಳಿದರು.












Click it and Unblock the Notifications