ಮೈತ್ರಿ ಸರ್ಕಾರ ಉಳಿಸಲು ಕೊನೆಯ ವರೆಗೆ ಹೋರಾಡುತ್ತೇನೆ: ದೇವೇಗೌಡ
ಬೆಂಗಳೂರು, ಜನವರಿ 28: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕೊನೆಯವರೆಗೆ ಪ್ರಯತ್ನಿಸುತ್ತೇನೆ, ಆದರೆ ಅಂತಿಮ ಫಲಿತಾಂಶ ಏನಾಗುತ್ತದೆಯೋ ಗೊತ್ತಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಮೈತ್ರಿ ಸರ್ಕಾರದ ಬಗ್ಗೆ ಮಾರ್ಮಿಕವಾಗಿ ನುಡಿದಿದ್ದಾರೆ.
ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ವೈಎಸ್ವಿ ದತ್ತ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗಾಗಿ ನಾನು ಸರ್ಕಾರ ಉಳಿಸಿಕೊಳ್ಳುತ್ತೇನೆ ಎನ್ನುತ್ತಿಲ್ಲ ಎಂದು ಹೇಳಿದರು.
ಸರ್ಕಾರದ ಬಗ್ಗೆ ನಾನು ಹೆಚ್ಚು ಆಸಕ್ತಿವಹಿಸುತ್ತಿಲ್ಲ, ಪಕ್ಷ ಸಂಘಟನೆ ಬಗ್ಗೆ ನನ್ನ ಗಮನ ಇದೆ. ಜೆಡಿಎಸ್ ಪಕ್ಷವು ನಮ್ಮ ನಂತರವೂ ಉಳಿದು ಬೆಳೆಯಬೇಕಾಗಿದೆ. ಸಂಘಟನೆ ಸಮಯದಲ್ಲಿ ಸಣ್ಣ ಪುಟ್ಟ ತಪ್ಪುಗಳು ಆಗುತ್ತವೆ ಆದರೆ ನಾವು ಹೋಗುವ ದಾರಿ ಇರಲಿ ಎಂದು ಅವರು ಕಾರ್ಯಕರ್ತರಿಗೆ ಮುಖಂಡರಿಗೆ ಎಚ್ಚರಿಕೆ ಮಾತು ಹೇಳಿದರು.

ಮುಂದಿನ ಮೂರು ತಿಂಗಳ ಕಾಲ ಜೆಡಿಎಸ್ಗೆ ಅಗ್ನಿಪರೀಕ್ಷೆ ಕಾಲವಾಗಿದ್ದು ಈ ಸಮಯದಲ್ಲಿ ದತ್ತ ಅವರು ತಮ್ಮ ಸ್ವಕ್ಷೇತ್ರ ಕಡೂರಿಗೂ ಹೋಗಬಾರದು ಎಂದ ಅವರು ಮುಂದೆ ಕಡೂರಿನ ಜನರೇ ಬಂದು ಅವರನ್ನು ಕ್ಷೇತ್ರಕ್ಕೆ ಎಳೆದುಕೊಂಡು ಹೋಗುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ದತ್ತ ಅವರ ಪಕ್ಷದ ಬಗ್ಗೆ ನಿಷ್ಠೆಯನ್ನು ಹೊಗಳಿದ ದೇವೇಗೌಡ, ಪಕ್ಷ ಅತ್ಯಂತ ಕಷ್ಟದಲ್ಲಿದಾಗ, ಬಹುತೇಕರು ಪಕ್ಷಕ್ಕೆ ಬೆನ್ನು ತೋರಿಸಿದಾಗ ಸಹ ವೈ.ಎಸ್.ದತ್ತ ನನ್ನ ಬೆಂಬಲಕ್ಕೆ ನಿಂತಿದ್ದರು. ಹಾಗಾಗಿಯೇ ಅವರಿಗೆ ಈ ದೊಡ್ಡ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದರು.
ವೈ.ಎಸ್.ದತ್ತ ಅವರಿಗೆ ಜೆಡಿಎಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಜವಾಬ್ದಾರಿಯನ್ನು ನೀಡಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ಇದ್ದರು.












Click it and Unblock the Notifications