ದೇವೇಗೌಡರ ಭೇಟಿ ನಂತರ ಮುಂದಿನ ತೀರ್ಮಾನ ಎಂದ ಶರವಣ
ಬೆಂಗಳೂರು, ಜೂನ್ 6: "ಇವತ್ತಿನ ಕಾರ್ಯಕ್ರಮ ಎಲ್ಲವೂ ಮುಗಿದ ಮೇಲೆ ನಾವೆಲ್ಲ (ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯರು) ದೇವೇಗೌಡರನ್ನು ಭೇಟಿ ಮಾಡಿ, ನಮ್ಮ ಅಹವಾಲನ್ನು ಹೇಳಿಕೊಳ್ಳುತ್ತೇವೆ. ಆ ನಂತರ ಅವರು ಏನು ಹೇಳುತ್ತಾರೋ ಕಾದುನೋಡೋಣ" ಎಂದು ಹೇಳಿದರು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಟಿ.ಎ.ಶರವಣ.
ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಸರಕಾರದ ಸಂಪುಟ ವಿಸ್ತರಣೆ ಬುಧವಾರ ಆದ ನಂತರ, ಶರವಣ ಅವರು ಸೇರಿದಂತೆ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯರಿಗೆ ಯಾರಿಗೂ ಸಚಿವ ಸ್ಥಾನ ಸಿಗದ ಪ್ರಶ್ನೆ ಮಾಡಿದ್ದಕ್ಕೆ ಅವರು ಒನ್ಇಂಡಿಯಾ ಕನ್ನಡಕ್ಕೆ ಉತ್ತರ ನೀಡಿದರು. ಈಗಲೇ ಮುಂದಿನ ತೀರ್ಮಾನದ ಬಗ್ಗೆ ತಿಳಿಸುವುದು ಆತುರದ ನಿರ್ಧಾರ ಆಗುತ್ತದೆ ಎಂದು ಹೇಳಿದರು.
ಇನ್ನೂ ನಿಗಮ- ಮಂಡಳಿಗಳಿಗೆ ಅಧ್ಯಕ್ಷ ಸ್ಥಾನಕ್ಕೆ ನೇಮಕ ಆಗಬೇಕಿದೆ. ಅದುವರೆಗೆ ಕಾದು ನೋಡಬಹುದು. ಜತೆಗೆ ಬುಧವಾರ ಸಂಜೆಯ ನಂತರ ದೇವೇಗೌಡರನ್ನು ನಾವೆಲ್ಲ ಭೇಟಿ ಮಾಡಿ, ನಮ್ಮ ಮನಸಿನಲ್ಲಿರುವ ವಿಚಾರದ ಬಗ್ಗೆ ತಿಳಿಸುತ್ತೇವೆ. ಅವರು ಏನು ಹೇಳುತ್ತಾರೋ ಅದರಂತೆ ಮುಂದೆ ನಡೆದುಕೊಳ್ಳುತ್ತೇವೆ ಎಂದರು.

ಈಚೆಗೆ ನಡೆದ ಜೆಡಿಎಸ್ ನ ಎರಡು ಸಭೆಗೆ ತಮ್ಮನ್ನು ಆಹ್ವಾನಿಸದಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದ ಅವರು, ಸಚಿವ ಸ್ಥಾನ ಸಿಗಲಿಲ್ಲ ಅಂದರೆ ಬೇಸರ ಆಗುತ್ತದೆ ಎಂದು ಕೂಡ ಹೇಳಿದ್ದರು. ಇದೀಗ ಶರವಣ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಮುಂದೆ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕು.











Click it and Unblock the Notifications