'ರಾಜಕಾರಣಿಗಳನ್ನು ಈಡಿಯಟ್ಸ್ ಅಂತ ಹೇಳೇ ಇಲ್ಲ'
ಬೆಂಗಳೂರು, ನ. 18 : "ವೈಜ್ಞಾನಿಕ ಸಂಶೋಧನಾ ವಲಯಕ್ಕೆ ಸಾಕಷ್ಟು ಹಣದ ನೆರವು ಸಿಗುತ್ತಿಲ್ಲ. ಅದು ಈಡಿಯಾಟಿಕ್ (ಮೂರ್ಖತನದ್ದು). ಅಷ್ಟೇ ನಾನು ಹೇಳಿದ್ದು. ಅದೂ ಸಿಟ್ಟಿನಿಂದಲ್ಲ. ನಾನು ಸಿಟ್ಟು ಮಾಡಿಕೊಳ್ಳುವ ಮನುಷ್ಯನೇ ಅಲ್ಲ. ನನಗೆ ಬೇಕಾಗಿದ್ದೇ ಬೇರೆ. ಅದು ಅವರಿಗೆ ಅರ್ಥವಾಗುವುದಿಲ್ಲ. ಬೇರೆ ಏನನ್ನೂ ನಾನು ಹೇಳಿಲ್ಲ..."
ಹೀಗೆಂದು ಸಚಿನ್ ತೆಂಡೂಲ್ಕರ್ ಜೊತೆ 'ಭಾರತ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿರುವ ಖ್ಯಾತ ವಿಜ್ಞಾನ ಪ್ರೊ. ಸಿಎನ್ಆರ್ ರಾವ್ ಅವರು ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ. "ನಾನು ರಾಜಕಾರಣಿಗಳನ್ನು ಈಡಿಯಟ್ಸ್ ಅಂತ ಹೇಳೇ ಇಲ್ಲ" ಎಂದು ಹೇಳಿ ಭಾನುವಾರ ಸನ್ಮಾನ ಸಮಾರಂಭದಲ್ಲಿ ಹುಟ್ಟಿಕೊಂಡಿದ್ದ ವಿವಾದವನ್ನು ತಣ್ಣಗೆ ಮಾಡಲು 79 ವರ್ಷದ ಹೆಮ್ಮೆಯ ಕರ್ನಾಟಕದ ಪುತ್ರ ಯತ್ನಿಸಿದರು.
ರಾಜ್ಯ ಸರಕಾರದಿಂದ ಭಾನುವಾರ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡುತ್ತಿದ್ದಾಗ, ಅವರು ರಾಜಕಾರಣಿಗಳನ್ನು 'ಈಡಿಯಟ್ಸ್' ಎಂದು ಹೇಳಿದ್ದಾರೆಂದು ವರದಿಯಾಗಿತ್ತು. ಈ ವರದಿಯಿಂದ ವಿಚಲಿತಗೊಂಡಿದ್ದ ಅವರು ಸೋಮವಾರ ಪತ್ರಕರ್ತರೆದಿರು, ತಾವು ಯಾವುದಕ್ಕೆ ಈಡಿಯಾಟಿಕ್ ಎಂದು ಹೇಳಿದ್ದಾಗಿ ಸ್ಪಷ್ಟಪಡಿಸಿದರು. ನಾವು ಮೂರ್ಖರಂತೆ ಕೆಲಸ ಮಾಡುತ್ತೇವೆ ಎಂದರೆ ಎಲ್ಲರೂ ಮೂರ್ಖರೆಂದು ಅಲ್ಲ ಎಂದು ಹೇಳಿದರು.

"ಮೊತ್ತಮೊದಲಿಗೆ ಅವರು (ರಾಜಕಾರಣಿಗಳು) ವಿಜ್ಞಾನದ ಮಹತ್ವವನ್ನು ಅರಿಯಬೇಕು. ಭಾರತ ಬೆಳಗುವಂತೆ ಮಾಡಬೇಕಾದರೆ ವಿಜ್ಞಾನ ಕ್ಷೇತ್ರದಲ್ಲಿ ಹಣ ಹೂಡುವುದು ಅಗತ್ಯ ಎಂದು ತಿಳಿಯಬೇಕು. ನಮಗೇನು ಬೇಕಿದೆ ಎಂಬ ಅರಿವು ನಮಗಿರಬೇಕು. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ವಿಜ್ಞಾನ ಕ್ಷೇತ್ರಕ್ಕೆ ಕೇಳಿದ ಮೊತ್ತದ ಶೇ.20ರಿಂದ 30ರಷ್ಟು ಮಾತ್ರ ಹಣ ಸಂದಾಯವಾಗುತ್ತಿದೆ" ಎಂದು ಪ್ರಧಾನ ಮಂತ್ರಿಯ ವೈಜ್ಞಾನಿಕ ಸಲಹಾ ಸಮಿತಿಯ ಚೇರ್ಮನ್ ಆಗಿರುವ ಅವರು ನುಡಿದರು.
"ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಈಡಿಯಾಟಿಕ್ ಎಂಬ ಪದ ಬಳಸುತ್ತಾರೆ. 'ಪ್ರಧಾನಿ ಈಡಿಯಾಟಿಕ್ ಕೆಲಸ ಮಾಡುತ್ತಿದ್ದಾರೆ' ಎಂದು ಯಾರಾದರೂ ಹೇಳಿದರೆ ಅಲ್ಲಿ ಯಾರ ಮನಸನ್ನೂ ನೋಯಿಸಿದಂತಾಗುವುದಿಲ್ಲ. ಇಂಥ ಪದ ಬಳಸಿದ್ದಕ್ಕೆ ಏಕೆ ಇಷ್ಟೊಂದು ಬೇಸರ ಉಂಟಾಗಿದೆ ಎಂದು ತಿಳಿಯುತ್ತಿಲ್ಲ. ನಾನು ಹಾಸ್ಯದ ಧಾಟಿಯಲ್ಲಿ ಹಾಗೆ ಹೇಳಿದೆನೇ ಹೊರತು ಸಿಟ್ಟಿನಿಂದಲ್ಲ" ಎಂದು ಅವರು ಸ್ಪಷ್ಟೀಕರಣ ನೀಡಿದರು.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೈಪಾಲ್ ರೆಡ್ಡಿ ಅವರು ಪ್ರೊ. ಸಿಎನ್ಆರ್ ರಾವ್ ಅವರ ಮಾತನ್ನು ಅನುಮೋದಿಸಿದ್ದು, "ಅವರು (ರಾವ್) ಹೇಳಿದ್ದು ಸರಿ. ಅವರ ಮಾತನ್ನು ನಿರಾಕರಿಸುವುದಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಎಷ್ಟು ಮಹತ್ವದ್ದೆಂದರೆ, ಸರಕಾರ ಎಷ್ಟು ಹಣ ನಿಗದಿಪಡಿಸಿದರೂ ಅದು ಕಡಿಮೆಯೆ" ಎಂದು ನವದೆಹಲಿಯಲ್ಲಿ ಹೇಳಿದ್ದಾರೆ.
ಜೈಪಾಲ್ ರೆಡ್ಡಿ ಹೇಳಿದ ಮಾತನ್ನೇ ಇಸ್ರೋದ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಅವರು ಪ್ರತಿಧ್ವನಿಸಿದ್ದಾರೆ. ವೈಜ್ಞಾನಿಕ ಸಂಶೋಧನೆಗಾಗಿ ಬಿಡುಗಡೆ ಮಾಡಲಾಗುತ್ತಿರುವ ಹಣ ತುಂಬಾ ಕಡಿಮೆ ಎಂದಿದ್ದಾರೆ. ಆದರೆ, ಇದಕ್ಕಾಗಿ ಸರಕಾರವನ್ನು ಅಥವಾ ರಾಜಕಾರಣಿಗಳನ್ನು ನಾನು ದೂರುವುದಿಲ್ಲ ಎಂದು ನುಡಿದಿದ್ದಾರೆ.












Click it and Unblock the Notifications