ಡಿಸಿಎಂ ಹುದ್ದೆ ಬೇಡ, ನಾನು ಸಿಎಂ ಹುದ್ದೆ ಆಕಾಂಕ್ಷಿ: ಉಮೇಶ್ ಕತ್ತಿ
ಬೆಂಗಳೂರು, ಡಿಸೆಂಬರ್ 12: ಸಂಪುಟ ವಿಸ್ತರಣೆ ಕಸರತ್ತು ಪುನರರಾಂಭವಾಗುತ್ತಿದ್ದಂತೆ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಮತ್ತೆ ಮುನ್ನಡೆಗೆ ಬಂದಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, 'ನನಗೆ ಡಿಸಿಎಂ ಹುದ್ದೆ ಕೊಟ್ಟರೂ ಬೇಡ ನಾನು ಸಿಎಂ ಹುದ್ದೆ ಆಕಾಂಕ್ಷಿ' ಎಂದು ಹೇಳಿದ್ದಾರೆ.
"ನಾನಂತೂ ಸಚಿವ ಸ್ಥಾನ ಕೇಳಿಲ್ಲ, ಖಾತೆ ಬಗ್ಗೆ ಮಾತೇ ಇಲ್ಲ"
ಡಿಸಿಎಂ ಹುದ್ದೆ ಕೊಡುತ್ತಾರೆಂಬ ಮಾತಿಗೆ ಪ್ರತಿಕ್ರಿಯಿಸಿದ ಕತ್ತಿ, 'ಡಿಸಿಎಂ ಹುದ್ದೆ ಬೇಡ ಕೊಡುವುದಾದರೆ ಮಂತ್ರಿ ಸ್ಥಾನ ಕೊಡಲಿ' ಎಂದರು.
ನಾನು ಎಂಟು ಬಾರಿ ಶಾಸಕನಾಗಿದ್ದೇನೆ, ಕಳೆದ ಮೂರ್ನಾಲ್ಕು ತಿಂಗಳಿಂದ ನನಗೆ ಅಧಿಕಾರ ಕೊಟ್ಟಿಲ್ಲ, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ, ಮಂತ್ರಿ ಆಗಲೀ, ಆಗದಿರಲಿ ಶಾಸಕನಾಗಿ ಕೆಲಸ ಮಾಡ್ತೇನೆ ಎಂದರು.
'ಕೊಟ್ಟರೆ ಮಂತ್ರಿ ಸ್ಥಾನ ಕೊಡಲಿ, ನನಗೆ ಡಿಸಿಎಂ ಹುದ್ದೆ ಬೇಡ, ನಾನು ಸಿಎಂ ಹುದ್ದೆ ಆಕಾಂಕ್ಷಿ, ಈಗಲೂ ಅಷ್ಟೆ ಮುಂದೆಯೂ ಅಷ್ಟೆ ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ' ಎಂದು ಕತ್ತಿ ಹೇಳಿದರು.
'ಆದರೆ ಮಂತ್ರಿ ಆಗ್ತೀನಿ, ಇಲ್ಲವೇ ಕೊಟ್ಟರೆ ಸಿಎಂ ಸಹ ಆಗ್ತೀನಿ ಆದರೆ ಡಿಸಿಎಂ ಹುದ್ದೆ ಮಾತ್ರ ಬೇಡ' ಎಂದು ಖಡಾ-ಖಂಡಿತವಾಗಿ ಕತ್ತಿ ಹೇಳಿದರು.
ಬಿಜೆಪಿ ಸರ್ಕಾರ ರಚನೆ ಆದಾಗಿನಿಂದಲೂ ಉಮೇಶ್ ಕತ್ತಿ ಅವರು ಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಮಂತ್ರಿ ಸ್ಥಾನ ಕೈತಪ್ಪಿದ್ದಾಗ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಬಿಜೆಪಿ ಸರ್ಕಾರ ರಚನೆ ಮಾಡಲು ಸಹಾಯ ಮಾಡಿದ ಅನರ್ಹ ಮತ್ತು ಮಾಜಿ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ನಿಶ್ಚಿಯಿಸಿರುವ ಕಾರಣ ಈ ಬಾರಿಯೂ ಉಮೇಶ್ ಕತ್ತಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.