ಬೆಂಗಳೂರಿಗೆ ಟಕ್ಕರ್ ಬಂದು ಪೆಟ್ಟು ತಿಂದ ಹೈದರಾಬಾದ್!
ಬೆಂಗಳೂರು ದೇಶದ ಐಟಿ ರಾಜಧಾನಿ ಹಾಗೂ ಸಿಲಿಕಾನ್ ಸಿಟಿ. ಆದರೆ, ಈ ಸಿಟಿಗೆ ಇರುವ ಪೈಪೋಟಿ ಅಷ್ಟಿಷ್ಟಲ್ಲ. ಬೆಂಗಳೂರು ಕಳೆದ 35 ವರ್ಷಗಳಿಂದಲೂ ತನ್ನದೇ ವಿಶೇಷತೆಗಳಿಂದ ಮುನ್ನುಗ್ಗುತ್ತಿದೆ. ಇದೀಗ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಬೇರೆ ದೇಶಗಳು ಇಲ್ಲವೇ ಉತ್ತರ ಭಾರತಕ್ಕಿಂತಲೂ ದಕ್ಷಿಣ ಭಾರತದ ರಾಜ್ಯಗಳಿಂದಲೇ ಪೈಪೋಟಿ ಹೆಚ್ಚಳವಾಗಿದೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳು ಬೆಂಗಳೂರಿನ ಮೇಲೆ ಕಣ್ಣಿಟ್ಟಿವೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸರ್ಕಾರವು ಭರ್ಜರಿ ಪೈಪೋಟಿ ಕೊಡುತ್ತಿದ್ದರೆ. ಮತ್ತೊಂದು ಕಡೆ ತೆಲಂಗಾಣ ಸರ್ಕಾರವು ಬೆಂಗಳೂರಿನ ಐಟಿ ಮೇಲೆ ಕಣ್ಣಿಟ್ಟಿದೆ. ಸವಾಲು ಕೊಡಲು ಬಂದ ದೊಡ್ಡ ಅನಾಹುತವನ್ನೇ ತೆಲಂಗಾಣ ಸರ್ಕಾರ ಮಾಡಿದೆ.
ತೆಲಂಗಾಣ ಸರ್ಕಾರವು ಇಲ್ಲಿನ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ( Hyderabad Central University - Hcu) ಎಚ್ಸಿಯುಬಳಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯದಲ್ಲಿ ರಾತ್ರೋರಾತ್ರಿ ಅರಣ್ಯ ನಾಶಕ್ಕೆ ಕೈಹಾಕಿದೆ. ಇದರ ಹಿಂದೆ ಇರುವ ಲೆಕ್ಕಾಚಾರ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಪೈಪೋಟಿ ನೀಡುವುದು ಸಹ ಸೇರಿದೆ. ಬೆಂಗಳೂರಿನಲ್ಲಿ ಅಭಿವೃದ್ಧಿಯ ಮೇಲೆ ಈಗಾಗಲೇ ದಕ್ಷಿಣ ಭಾರತದ ಸಣ್ಣ ರಾಜ್ಯ ಕೇರಳವೂ ಸೇರಿದಂತೆ ಎಲ್ಲಾ ರಾಜ್ಯಗಳೂ ಕಣ್ಣಿಟ್ಟಿವೆ.

ಬೆಂಗಳೂರಿನಲ್ಲಿ ಕಳೆದ ವರ್ಷ ನೀರಿನ ಸಮಸ್ಯೆ ಕಾಣಿಸಿಕೊಂಡಾಗ ತೆಲಂಗಾಣ ಹಾಗೂ ಕೇರಳ ಸರ್ಕಾರಗಳು ಬೆಂಗಳೂರು ಹಾಗೂ ಕರ್ನಾಟಕದ ಉದ್ದಿಮೆಗಳಿಗೆ ಮತ್ತು ಕಂಪನಿಗಳಿಗೆ ಆಯಾ ರಾಜ್ಯಗಳಿಗೆ ಬರುವಂತೆ ಆಹ್ವಾನ ನೀಡಿದ್ದವು. ಇದೀಗ ದೇಶದ ಐಟಿ ರಾಜಧಾನಿಗೆ ಪೈಪೋಟಿ ಕೊಡುವುದಕ್ಕೆ ಕೈಹಾಕಿದ್ದ ತೆಲಂಗಾಣ ಸರ್ಕಾರವು ಕೈ ಸುಟ್ಟಿಕೊಂಡೆ. ಮಾತ್ರವಲ್ಲ ನೂರಾರು ಪ್ರಾಣಿ ಪಕ್ಷಿಗಳು ಹಾಗೂ ಸಸ್ಯಗಳಿಗೆ ಹಾನಿಯನ್ನುಂಟು ಮಾಡಿದೆ.
ಐಟಿ ಪೈಪೋಟಿ: ದಕ್ಷಿಣ ಭಾರತದಲ್ಲಿ ಮೊದಲಿನಿಂದಲೂ ಕರ್ನಾಟಕ ಹಾಗೂ ಅವಿಭಜಿತ ಆಂಧ್ರಪ್ರದೇಶದ ನಡುವೆ ಐಟಿ ಕ್ಷೇತ್ರದ ವಿಚಾರದಲ್ಲಿ ಭಾರೀ ದೊಡ್ಡ ಪೈಪೋಟಿ ಇದೆ. ಬೆಂಗಳೂರಿನಲ್ಲಿ ದಿವಂಗತ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಐಟಿ ಕ್ಷೇತ್ರಕ್ಕೆ ಹೇಗೆ ಅಡಿಪಾಯ ಹಾಕಿದರೋ ಅದೇ ರೀತಿಯಲ್ಲಿ ಅವಿಭಜಿತ ಆಂಧ್ರಪ್ರದೇಶದ ರಾಜಧಾನಿಯಾಗಿದ್ದ ಹೈದರಾಬಾದ್ನಲ್ಲಿ ಅಂದಿನ ಮುಖ್ಯಮಂತ್ರಿ (ಈಗ ಆಂಧ್ರಪ್ರದೇಶದ ಮುಖ್ಯಮಂತ್ರಿ) ಎನ್. ಚಂದ್ರಬಾಬು ನಾಯ್ಡು ಅವರು ಐಟಿಗೆ ಭದ್ರ ಅಡಿಪಾಯ ಹಾಕಿದ್ದರು. ಹೀಗಾಗಿ, ದಶಕಗಳಿಂದಲೂ ಬೆಂಗಳೂರು ಹಾಗೂ ಹೈದರಾಬಾದ್ನ ನಡುವೆ ಐಟಿ ವಿಷಯದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ, ಮಳೆಯಿಂದ ನೀರು ನಿಲ್ಲುವುದು ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಸೇರಿದಂತೆ ವಿವಿಧ ಮೂಲಸೌಕರ್ಯ ಸಮಸ್ಯೆಗಳು ಎದುರಾದಾಗೆಲ್ಲವೂ ಹೈದರಾಬಾದ್ನ ಬಗ್ಗೆ ಚರ್ಚೆ ಮುನ್ನೆಲೆಗೆ ಬರುತ್ತಿದೆ. ಇನ್ನು ಕಳೆದ ಒಂದು ದಶಕದ ಅವಧಿಯಲ್ಲಿ ಹೈದರಾಬಾದ್ನ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿ ಆಗಿದೆ. ಆದರೆ ಅತಿಯಾಸೆ ಗತಿಗೇಡು ಎನ್ನುವ ಪರಿಸ್ಥಿತಿ ಇದೀಗ ತೆಲಂಗಾಣಕ್ಕೆ ನಿರ್ಮಾಣವಾಗಿದೆ.
ಅರಣ್ಯ ನಾಶ;ಛೀಮಾರಿ: ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಐಟಿ ಪಾರ್ಕ್ ರಚನೆ ಮಾಡುವುದಕ್ಕೆ ಮುಂದಾದ ತೆಲಂಗಾಣ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ದೇಶದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆಲ್ಲವೂ ಬೆಂಗಳೂರಿಗೆ ಹೈದರಾಬಾದ್ ಐಟಿ ಕ್ಷೇತ್ರ ಟಕ್ಕರ್ ಕೊಡುವಂತೆ ಮಾಡಬೇಕು ಎನ್ನುವುದೇ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications