ಮಾನವೀಯತೆ ಮೆರೆದ ಪೇದೆ ಅರ್ಚನಾಗೆ ಟ್ವಿಟ್ಟರ್ನಲ್ಲಿ ಪ್ರಶಂಸೆಯ ಮಹಾಪೂರ
ಬೆಂಗಳೂರು, ಜೂನ್ 6: ಅನಾಥ ಶಿಶುವಿಗೆ ಎದೆಹಾಲುಣಿಸಿ ಮಾನವೀಯತೆ ಮೆರೆದ ಪೇದೆ ಅರ್ಚನಾ ಅವರ ಹೃದಯವಂತಿಕೆಗೆ ಸಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಕಳೆದ ಶನಿವಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿನ ದೊಡ್ಡತೂಗೂರಿನ ಬಳಿ ಅನಾಥ ಶಿಸುವೊಂದು ಪತ್ತೆಯಾಗಿತ್ತು.
ಅದನ್ನು ನೋಡಿದ್ದ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.ತಕ್ಷಣವೇ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಧಾವಿಸಿದ್ದ ಕಾನ್ಸ್ಟೆಬಲ್ ಅರ್ಚನಾ ಮಗುವನ್ನು ಕೈಗೆತ್ತಿಕೊಂಡಿದ್ದರು. ನಂತರ ಮಗು ಅಳಲಾರಂಭಿಸಿತ್ತು. ಮಗುವಿನ ಜತೆಗೆ ವಾಹನದೊಳಗೆ ತೆರಳಿ ಮಗುವಿಗೆ ಎದೆಹಾಲು ಉಣಿಸಿ ಅದಕ್ಕೆ ಮರುಜೀವ ನೀಡಿದ್ದಾರೆ.
ಮಾತೃಹೃದಯಿ ಮಹಿಳಾ ಪೇದೆ ಅಭಿನಂದಿಸಲು ಮುಂದಾದ ಕುಮಾರಸ್ವಾಮಿ
ಅರ್ಚನಾ ಎಲೆಕ್ಟ್ರಾನಿಕ್ ಸಿಟಿಯ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಂತರ ವಾಹನದಲ್ಲೇ ಶಿಶುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಮಗುವನ್ನು ವಿಲ್ಸನ್ ಗಾರ್ಡನ್ನಲ್ಲಿರುವ ಶಿಶುಗೃಹಕ್ಕೆ ನೀಡಲಾಗಿದೆ. ಆ ಮುಗುವಿಗೆ ಕುಮಾರಸ್ವಾಮಿ ಎಂದು ಹೆಸರಿಡಲಾಗಿದೆ. ಅರ್ಚನಾ ಕಾರ್ಯಕ್ಕೆ ಮೆಚ್ಚಿ ಅವರಿಗೆ ಅಭಿನಂದನೆ ಸಲ್ಲಿಸಲು ಮುಖ್ಯಮಂತ್ರಿ ಕುಮಾಸ್ವಾಮಿಯವರು ಆಗಮಿಸುವುದಾಗಿ ತಿಳಿದುಬಂದಿದೆ.
|
ಅರ್ಚನಾ ಅವರಿಗೆ ಕೆಲಸದಲ್ಲಿ ಬಡ್ತಿ ದೊರೆತರೆ ಅದು ನಿಜವಾದ ಕೃತಜ್ಞತೆ
ಪೇದೆ ಅರ್ಚನಾ ಅವರು ಅನಾಥ ಶಿಶುವಿಗೆ ಎದೆಹಾಲುಣಿಸಿ ಅದಕ್ಕೆ ಮರುಜೀವ ನೀಡಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯವಾದ್ದು ಅವರಿಗೆ ಕೆಲಸದಲ್ಲಿ ಬಡ್ತಿ ನೀಡಿದರೆ ಅದು ನಿಜವಾದ ಕೃತಜ್ಞತೆಯಾಗುತ್ತದೆ ಎಂದು ವಿಶಾಲ್ ಕೆಂಪಯ್ಯ ಟ್ವೀಟ್ ಮಾಡಿದ್ದಾರೆ.
|
ತಾಯಿಗೆ ಒಂದು ಸಲ್ಯೂಟ್
ಅರ್ಚನಾ ಅವರ ಕಾರ್ಯ ಶ್ಲಾಘನೀಯವಾದ್ದು, ಅವರಿಗೆ ನಾವು ಕೃತಜ್ಞತೆ ಸಲ್ಲಿಸಲೇ ಬೇಕು, ಅವರು ಮೊದಲು ತಾಯಿ ನಂತರ ಒಬ್ಬಳು ಪೊಲೀಸ್ ಎನ್ನುವುದನ್ನು ಸಾಭೀತುಪಡಿಸಿದ್ದಾರೆ ಅವರಿಗೊಂಡು ಸಲ್ಯೂಟ್ ಎಂದು ಸುಕುಮಾರ್ ತ್ಯಾಗರಾಜನ್ ಟ್ವೀಟ್ ಮಾಡಿದ್ದಾರೆ.
|
ಹೆಣ್ಣು ಒಬ್ಬ ದೇವತೆ ಎಂದು ನಿರೂಪಿಸುತ್ತಿರುವ ತಾಯಂದಿರಿಗೆ ಧನ್ಯವಾದ
ಹೆಣ್ಣು ಒಬ್ಬ ದೇವತೆ ಎಂದು ನಿರೂಪಿಸುತ್ತಿರುವ ತಮ್ಮಂತ ಎಲ್ಲಾ ತಾಯಂದಿಯರಿಗೂ ನನ್ನ ಹೃದಯ ಪೂರ್ವಕ ನಮನಗಳು ಎಂದು ಸಂಪತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
|
ಸಮಾಜಕ್ಕೆ ಇದೇ ರೀತಿಯ ನಿಸ್ವಾರ್ಥ ಸೇವೆ ಬೇಕು
ಸಮಾಜಕ್ಕೆ ಪೊಲೀಸರಿಂದ ಇಂತಹ ನಿಸ್ವಾರ್ಥ ಸೇವೆ ದೊರೆತಾಗ ಅವರ ಮೇಲಿನ ಗೌರವ ದುಪ್ಪಟ್ಟಾಗುತ್ತದೆ. ಅರ್ಚನಾ ಅವರು ಮಾಡಿರುವ ಕೆಲಸ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಗೋಪಿನಾಥ್ ಸಿಕೆ ಟ್ವೀಟ್ ಮಾಡಿದ್ದಾರೆ.