ಡಿಕೆ ಶಿವಕುಮಾರ್ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರ?
ಡಿ.ಕೆ. ಶಿವಕುಮಾರ್ ಸಹೋದರಿ, ನಾದಿನಿ ಮನೆಯಲ್ಲಿ ಕೋಟಿಗಟ್ಟಲೆ ಹಣ, ಲಕ್ಷಾಂತರ ಮೌಲ್ಯದ ಚಿನ್ನ ಪತ್ತೆ. ಎಲ್ಲವನ್ನೂ ಜಪ್ತಿ ಮಾಡಿ ಮುಂದಿನ ತನಿಖೆ ಕೈಗೊಂಡಿರುವ ಐಟಿ ಅಧಿಕಾರಿಗಳು.
ಬೆಂಗಳೂರು, ಆಗಸ್ಟ್ 3: ಡಿಕೆಶಿ ಅವರ ವಿರುದ್ಧದ ಆದಾಯ ತೆರಿಗೆ ಇಲಾಖೆಯ ದಾಳಿ ಪ್ರಕರಣದಲ್ಲಿ ಸಿಕ್ಕ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಯು ಕೇಂದ್ರೀಯ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲಿದೆ ಎಂದು ಹೇಳಲಾಗಿದೆ. ಹಾಗಾದರೆ, ಈ ಪ್ರಕರಣದ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಗೊಳ್ಳಲಿದೆ.
ಒಂದು ವೇಳೆ, ಜಾರಿ ನಿರ್ದೇಶನಾಲಯವು ತನಿಖೆ ಕೈಗೊಂಡು ಅವರ ವಿಚಾರಣೆಗೆ ಮುಂದಾದರೆ, ಡಿಕೆ ಶಿವಕುಮಾರ್ ಅವರು ಬಂಧನಕ್ಕೊಳಗಾಗುವ ಸಾಧ್ಯತೆಗೂ ಇರಲಿವೆ ಎನ್ನಲಾಗಿದೆ.

ಏತನ್ಮಧ್ಯೆ, ಬುಧವಾರ ಬೆಳಗ್ಗೆ ವಿಚಾರಣೆ ವೇಳೆ ತಮ್ಮಲ್ಲಿದ್ದ ದಾಖಲೆಗಳನ್ನು ಹರಿದುಹಾಕಿದ ಹಿನ್ನೆಲೆಯಲ್ಲಿ ಶಿವಕುಮಾರ್ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಬಹುದಾಗಿದೆ ಎಂದು ಆದಾಯ ಇಲಾಖೆ ಮೂಲಗಳು ತಿಳಿಸಿವೆ. ಆ ಹರಿದ ದಾಖಲೆಗಳನ್ನು ಒಟ್ಟುಗೂಡಿಸಿ, ಅವುಗಳಲ್ಲಿದ್ದ ಶಿವಕುಮಾರ್ ಅವರ ಆಪ್ತರ ಹೆಸರುಗಳನ್ನು ಒಟ್ಟುಗೂಡಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಬುಧವಾರ ಬೆಳಗ್ಗೆಯಿಂದಲೇ ಡಿಕೆಶಿ ಆಪ್ತರ ಮನೆಗಳನ್ನು ಜಾಲಾಡಲು ಆರಂಭಿಸಿದ್ದ ಐಟಿ ಅಧಿಕಾರಿಗಳು, ಬುಧವಾರ ರಾತ್ರಿ ವೇಳೆಗೆ ಬಸವೇಶ್ವರ ನಗರದಲ್ಲಿದ್ದ ಡಿಕೆಶಿ ಸಹೋದರಿಯೊಬ್ಬರ ಮನೆಗೆ ಹಾಗೂ ಶಂಕರ ಮಠದ ಬಳಿ ಇರುವ ಡಿಕೆಶಿ ನಾದಿನಿ ಮನೆಯ ಮೇಲೂ ದಾಳಿ ನಡೆಸಿದರು.
ಆ ಸಂದರ್ಭದಲ್ಲಿ ಈ ಮನೆಗಳಲ್ಲಿ ಕೋಟಿಗಟ್ಟಲೆ ಹಣ ಹಾಗೂ ಲಕ್ಷಾಂತರ ಮೌಲ್ಯದ ಚಿನ್ನದ ಒಡವೆ ಹಾಗೂ ಬೆಲೆ ಬಾಳುವ ವಸ್ತುಗಳು ಸಿಕ್ಕಿವೆ ಎಂದು ಕೆಲ ವಾಹಿನಿಗಳು ವರದಿ ಮಾಡಿವೆ.
ಇನ್ನು, ಕನಕಪುರದಲ್ಲಿರುವ ಡಿಕೆಶಿ ಅವರ ಮನೆಯಲ್ಲಿ ನಡೆಯುತ್ತಿದ್ದ ತನಿಖೆಯು ಮಧ್ಯರಾತ್ರಿ 3:15ರ ಸುಮಾರಿಗೆ ಮುಕ್ತಾಯವಾಗಿದ್ದು, ಅಲ್ಲಿಂದ ಹಲವಾರು ದಾಖಲೆಗಳನ್ನು ಅಧಿಕಾರಿಗಳು ಮೂರು ಸೂಟ್ ಕೇಸ್ ಗಳಲ್ಲಿ ತುಂಬಿಕೊಂಡು ಹೊರಟು ಹೋಗಿದ್ದಾರೆ.












Click it and Unblock the Notifications