ಬೆಂಗಳೂರಲ್ಲಿ ಅಶ್ವಾರೋಹಿ ಪೊಲೀಸರ ಗಸ್ತು, ವಿವರಗಳು
ಬೆಂಗಳೂರು, ಜನವರಿ 15: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕೆಲವು ರಸ್ತೆಗಳು ಭಾರೀ ಜನದಟ್ಟಣೆಯಿಂದ ಕೂಡಿವೆ. ಈ ರಸ್ತೆಗಳಲ್ಲಿ ವಾಹನಗಳನ್ನು ಬಳಕೆ ಮಾಡಿಕೊಂಡು ಪೊಲೀಸರು ಗಸ್ತು ಮಾಡುವುದು ಅಸಾಧ್ಯ. ಆದ್ದರಿಂದ ಮೈಸೂರು ಮಾದರಿಯಲ್ಲಿ ಕುದುರೆ ಬಳಕೆ ಮಾಡಿಕೊಂಡು ಗಸ್ತು ತಿರುಗಲಾಗುತ್ತದೆ.
ಬೆಂಗಳೂರು ನಗರದ ಆಯ್ದ ಕೆಲವು ರಸ್ತೆಗಳಲ್ಲಿ ಅಶ್ವಾರೋಹಿ ಪೊಲೀಸರು ಗಸ್ತು ತಿರುಗಲಿದ್ದಾರೆ. ಈಗಾಗಲೇ ಮೈಸೂರು ನಗರದಲ್ಲಿ ಈ ಮಾದರಿ ಜಾರಿಯಲ್ಲಿದೆ. ಇದನ್ನು ಬೆಂಗಳೂರಲ್ಲಿ ಜಾರಿಗೆ ತರಲಾಗುತ್ತದೆ. ನಗರದಲ್ಲಿ ಈಗಾಗಲೇ ಅಶ್ವಾರೋಹಿ ತರಬೇತಿ ಪಡೆದ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.

ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಜನದಟ್ಟಣೆ ನಡುವೆ ಅನುಚಿತ ವರ್ತನೆ ತೋರುವ ಹಾಗೂ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಹದ್ದಿನ ಕಣ್ಣಿಡಲು ಅಶ್ವಾರೋಹಿ ಪೊಲೀಸ್ ಗಸ್ತು ಆಯ್ದ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲಿದೆ" ಎಂದು ಹೇಳಿದ್ದಾರೆ.
ಕರ್ನಾಟಕ ಪೊಲೀಸ್ ಪಡೆಯಲ್ಲಿ ಅಶ್ವಾರೋಹಿ ಪೊಲೀಸರು ಇದ್ದಾರೆ. ವಿಶೇಷ ದಿನಗಳಲ್ಲಿ, ಗಣ್ಯರು ಆಗಮಿಸಿದಾಗ ಮಾತ್ರ ಅವರನ್ನು ಬಳಕೆ ಮಾಡಲಾಗುತ್ತದೆ. ಈಗ ಬೆಂಗಳೂರಿನಲ್ಲಿ ಅಶ್ವಾರೋಹಿ ಪೊಲೀಸರು ಗಸ್ತು ತಿರುಗುವ ಮೂಲಕ ಪ್ರತಿನಿತ್ಯ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲಿದ್ದಾರೆ.
ಆಯ್ದ ಸ್ಥಳಗಳಲ್ಲಿ ಗಸ್ತು; ಬೆಂಗಳೂರು ನಗರದಲ್ಲಿ ಜನದಟ್ಟಣೆ ಒಳಗೊಂಡಿರುವ ಕಬ್ಬನ್ ಉದ್ಯಾನ, ವಿಧಾನಸೌಧ, ಮೆಜೆಸ್ಟಿಕ್, ಎಂಜಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ಗಳಲ್ಲಿ ಪ್ರಾಯೋಗಿಕವಾಗಿ ಅಶ್ವಾರೋಹಿ ಪೊಲೀಸರು ಗಸ್ತು ನಡೆಸಲಿದ್ದಾರೆ.
ಸದ್ಯ ಬೆಂಗಳೂರು ಪೊಲೀಸರು ಗಸ್ತಿಗಾಗಿ ಹೊಯ್ಸಳ ವಾಹನ, ಚೀತಾ ಬೈಕ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಈಗ ಆಯ್ದ ಪ್ರದೇಶಗಳಲ್ಲಿ ಅಶ್ವಾರೋಹಿ ಪೊಲೀಸರು ಸಹ ಗಸ್ತು ನಡೆಸಲಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ ಬೇರೆ ಪ್ರದೇಶಗಳಿಗೂ ಸಹ ವಿಸ್ತರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಅಶ್ವಾರೋಹಿ ಪೊಲೀಸರ ಗಸ್ತು ನಿರ್ವಹಣೆಗಾಗಿ ಎಸ್ಪಿ ದರ್ಜೆಯ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡಲಾಗುತ್ತದೆ. ಗಸ್ತು ಮಾಡಲು ಮೈಸೂರಿನಿಂದ ತರಬೇತಿ ಪಡೆದ ಒಂದು ತುಕಡಿಯನ್ನು ಕರೆಸಿಕೊಳ್ಳಲಾಗಿದೆ.
ಜನದಟ್ಟಣೆ ಪ್ರದೇಶದಲ್ಲಿ ಅನುಚಿತವಾಗಿ ವರ್ತನೆ ಮಾಡುವವರು, ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಎತ್ತರದಿಂದಲೇ ಹದ್ದಿನ ಕಣ್ಣಿಟ್ಟು ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಮೈಸೂರು ನಗರದಲ್ಲಿ ಒಂದು ಅಶ್ವಾರೋಹಿ ಪೊಲೀಸರ ಗಸ್ತು ಘಟಕ ಕಾರ್ಯ ನಿರ್ವಹಣೆ ಮಾಡುತ್ತಿದೆ, ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಕಾರ್ಯ ಆರಂಭವಾಗಲಿದೆ.
ಬೆಂಗಳೂರು ಪೊಲೀಸರು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಪೊಲೀಸರು ಅಪರಾಧ ಮಾಡುವವರನ್ನು ಮಟ್ಟ ಹಾಕಲು 'ನಡಿಗೆ ಗಸ್ತು' ಜಾರಿಗೆ ತಂದಿದ್ದಾರೆ.
ಬಿ. ದಯಾನಂದ್ ಪೊಲೀಸ್ ಆಯುಕ್ತರಾದ ಬಳಿಕ ಹೊಯ್ಸಳ ಗಸ್ತಿನಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಅವರೇ ಸ್ವತಃ ಗಸ್ತು ವಾಹನದಲ್ಲಿ ತೆರಳಿ ಸಿಬ್ಬಂದಿ ಕಾರ್ಯವೈಖರಿ ಗಮನಿಸುತ್ತಿದ್ದಾರೆ. ಕಂಟ್ರೋಲ್ ರೂಂಗೆ ಭೇಟಿ ನೀಡಿ ಮಾಹಿತಿಯನ್ನು ಸಹ ಪಡೆಯುತ್ತಿದ್ದಾರೆ.
ಈ ಹಿಂದೆ ಬಿ. ದಯಾನಂದ್ ಮೈಸೂರು ನಗರದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಆದ್ದರಿಂದ ಅಶ್ವಾರೋಹಿ ಪೊಲೀಸರು ಹೇಗೆ ಗಸ್ತು ನಡೆಸಲಿದ್ದಾರೆ? ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅಶ್ವಾರೋಹಿ ಗಸ್ತು ಪಡೆಯನ್ನು ಬೆಂಗಳೂರಿಗೆ ಪ್ರಾಯೋಗಿಕವಾಗಿ ಕರೆತರಲು ಅವರು ಮುಂದಾಗಿದ್ದಾರೆ. ಕೆಲವೇ ದಿನಗಳಲ್ಲಿ ನಗರದಲ್ಲಿ ಜನರು ಅಶ್ವಾರೋಹಿ ಪೊಲೀಸರ ಗಸ್ತು ನೋಡಬಹುದು.












Click it and Unblock the Notifications