ಝೀರೋ ಟ್ರಾಫಿಕ್ ಸೌಲಭ್ಯ ಬೇಡ ಎಂದ ನೂತನ ಗೃಹ ಸಚಿವ
ಬೆಂಗಳೂರು, ಜನವರಿ 4: ನೂತನ ಗೃಹ ಸಚಿವ ಎಂಬಿ ಪಾಟೀಲ್ ಅವರು ಝೀರೋ ಟ್ರಾಫಿಕ್ ಸೌಲಭ್ಯವನ್ನು ನಿರಾಕರಿಸಿದ್ದಾರೆ, ಈ ಕುರಿತು ಪೊಲೀಸ್ ಇಲಾಖೆ ಪತ್ರ ಬರೆದಿದ್ದಾರೆ.
ರಸ್ತೆ ಸಂಚಾರದಲ್ಲಿ ನನಗೆ ಝೀರೊ ಟ್ರಾಫಿಕ್ ಸೌಲಭ್ಯ ಬೇಡ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ತುರ್ತು ಸಂದರ್ಭ ಹೊರತುಪಡಿಸಿ, ಹೆಚ್ಚಿನ ನಿಯಮಗಳನ್ನು ಹಾಕದಂತೆ ಹಾಗೂ ಸುರಕ್ಷತೆಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸದಂತೆ ಸೂಚಿಸಲಾಗಿದೆ.
ಜನಪ್ರತಿನಿಧಿಗಳು ಜನರ ಮಧ್ಯೆ ಇದ್ದು ಸ್ಪಂದಿಸುವುದು ಸೂಕ್ತ ಎಂದು ಗೃಹ ಖಾತೆ ಸಚಿವ ಎಂಬಿ ಪಾಟೀಲ್ ಎಡಿಜಿಪಿಗೆ ಪತ್ರ ಬರೆದಿದ್ದಾರೆ.

ಅದಕ್ಕೆ ಸ್ಪಂದಿಸಿರುವ ಪೊಲೀಸ್ ಇಲಾಖೆಯು ಗೃಹ ಸಚಿವ ಎಂಬಿ ಪಾಟೀಲ್ ಅವರಿಗೆ ಬೆಂಗಳೂರಿನಿಂದ ಕರ್ನಾಟಕದ ಇತರೆ ಸ್ಥಳಗಳಲ್ಲಿ ತಮ್ಮ ಪ್ರವಾಸ ಹಾಗೂ ವಾಸ್ತವ್ಯದ ವೇಳೆಯಲ್ಲಿ ನಿಯಮಾನುಸಾರ ನಿರ್ದಿಷ್ಟವಾದ ಸುರಕ್ಷತಾ ಅಂಶಗಳಿಗೆ ಮೀರದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಅಪೇಕ್ಷಿಸಿದ್ದಾರೆ.
ಸಚಿವರು ತಮ್ಮ ರಸ್ತೆ ಪ್ರಯಾಣದಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿ ಶೂನ್ಯ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಬಾರದು ಹಾಗೂ ಅನಾವಶ್ಯಕವಾಗಿ ತಮ್ಮ ವಾಸ್ತವ್ಯದ ಸ್ಥಳದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಬಾರದು ಎಂದು ಬಯಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ಆದ್ದರಿಂದ ಎಲ್ಲಾ ಘಟಕಾಧಿಕಾರಿಗಳು ಗೃಹ ಸಚಿವ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ನಿಗದಿಪಡಿಸಲಾಸ ಸುರಕ್ಷತಾ ಅಂಶಗಳಿಗೆ ಮೀರದಂತೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಸಾರ್ವಜನಿಕ ರಸ್ತೆ ನಿರ್ಬಂಧಿಸಿ ಸಾರ್ವಜನಿಕ ರಸ್ತೆ ಬಳಕೆದಾರರಿಗೆ ಯಾವುದೇ ಅನನುಕೂಲವಾಗದಂತೆ ಶೂನ್ಯ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಬಾರದೆಂದು ಎಡಿಜಿಪಿ ಎಲ್ಲಾ ಪೊಲೀಸ್ ಆಯುಕ್ತರು, ಎಲ್ಲಾ ವಲಯದ ಪೊಲೀಸ್ ಮಹಾ ನಿರೀಕ್ಷಕರು , ಎಲ್ಲಾ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಗೃಹಸಚಿವರಾಗಿದ್ದ ಜಿ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ಸೌಲಭ್ಯ ಪಡೆದಿದ್ದಕ್ಕೆ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿದ್ದರು.












Click it and Unblock the Notifications