ರಮೇಶ್ ಕುಮಾರ್ಗೆ ಮತ್ತೆ ಭೂ ಕಂಟಕ ತಂದ ಹಿರೇಮಠ್

ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವುದಕ್ಕೆ ಕೋಲಾರ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಬರೆದಿರುವ ಪತ್ರದಲ್ಲೇ ದಾಖಲೆಗಳಿವೆ. ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಸರ್ವೇ ನಂ.1 ಮತ್ತು 2ರಲ್ಲಿ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳು ಈ ಪತ್ರ ಬರೆದಿದ್ದಾರೆ. (ರಮೇಶ್ ಕುಮಾರ್ ವಿರುದ್ಧ ದಾಖಲೆಗಳಿವೆ)
ಕಂದಾಯ ಇಲಾಖೆಗೆ ಬರೆದಿರುವ ಪತ್ರದಲ್ಲಿಯೇ ಈ ಪ್ರದೇಶ ಒತ್ತುವರಿಯಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ, ರಮೇಶ್ ಕುಮಾರ್ ಭೂ ಒತ್ತುವರಿ ಮಾಡಿಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಒತ್ತುವರಿ ನಡೆಸಿಲ್ಲ ಎನ್ನುವುದಕ್ಕೆ ರಮೇಶ್ ಕುಮಾರ್ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. (ಹಿರೇಮಠ್ ವಿರುದ್ಧ ಹಕ್ಕುಚ್ಯುತಿ ಮಂಡನೆ)
ಜೀವರಾಜ್ ವಿರುದ್ಧ ಕ್ರಮ ಕೈಗೊಳ್ಳಿ : ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಹಾಗೂ ಅವರ ಸಂಬಂಧಿಕರು ಅಕ್ರಮವಾಗಿ ಬೀಟೆ ಮರ ಕಡಿದು ಸಾಗಾಟ ಮಾಡಿರುವ ಕುರಿತು ದೂರು ನೀಡಿದ್ದರೂ ಸರ್ಕಾರ ಕ್ರಮ ಜರುಗಿಸಿಲ್ಲ ಎಂದು ಹೇಳಿದ ಎಸ್.ಆರ್.ಹಿರೇಮಠ್, ಸರ್ಕಾರ ಈ ಪಕ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. (ಕಾಂಗ್ರೆಸ್ ಶಾಸಕರಿಗೆ ಹಿರೇಮಠ್ ಮೇಲೆ ಕೋಪ)
ಆರ್. ಅಶೋಕ್ ಕೈವಾಡ : ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬಿಬಿಎಂಪಿ ಮಾಜಿ ಮೇಯರ್ ಡಿ.ವೆಂಕಟೇಶ್ ಮೂರ್ತಿ ಅವರಿಗೆ ತಮ್ಮ ಪ್ರಭಾವ ಬಳಸಿ ಜಮೀನು ಮುಂಜೂರು ಮಾಡಿಸಿ ಕೊಟ್ಟಿದ್ದಾರೆ ಎಂದು ಹಿರೇಮಠ್ ಆರೋಪಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ ಸೋಮನಹಳ್ಳಿ ಗ್ರಾಮದ ಸರ್ವೇ ನಂ. 242ರಲ್ಲಿ ಡಿ.ವೆಂಕಟೇಶಮೂರ್ತಿ ಹಾಗೂ ಅವರ ಪತ್ನಿ ಕೆ. ಪ್ರಭಾ ಅವರಿಗೆ ಗೋಮಾಳದ ತಲಾ 4 ಎಕರೆ ಜಮೀನು ಮಂಜೂರಾಗಿದೆ, ಇದರ ಹಿಂದೆ ಅಶೋಕ್ ಕೈವಾಡವಿದೆ ಎಂದು ಅವರು ದೂರಿದರು.
ಎಸ್.ಎಂ.ಕೃಷ್ಣ ಅಳಿಯನಿಗೆ ಸಂಕಷ್ಟ : ಕರ್ನಾಟಕದಲ್ಲಿರುವ ಕಾಫಿ ಡೇ, ಮೆಕ್ಡೊನಾಲ್ಡ್ ಔಟ್ಲೆಟ್ಗಳ ಅವ್ಯವಹಾರ ಕುರಿತ ದಾಖಲೆಗಳು ತಮ್ಮ ಬಳಿ ಇದ್ದು, ಶೀಘ್ರವೇ ಬಿಡುಗಡೆ ಮಾಡುವುದಾಗಿ ಎಸ್.ಆರ್.ಹಿರೇಮಠ್ ಹೇಳಿದ್ದಾರೆ. ಕಾಫಿ ಡೇಗೆ ಸಂಬಂಧಿಸಿದ ಅವ್ಯವಹಾರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರ ಪಾತ್ರವಿರುವುದು ಕಂಡುಬಂದಿದ್ದು, ದಾಖಲೆ ಬಿಡುಗಡೆ ಮಾಡಲಾಗುವುದು ಎಂದರು.












Click it and Unblock the Notifications