ಸಾವರ್ಕರ್ ಅವರ 'ಹಿಂದುತ್ವ' ಕನ್ನಡನುವಾದ ಕೃತಿ ಬಿಡುಗಡೆ
ಬೆಂಗಳೂರು, ಜೂನ್ 17 : ಹಿಂದೂತ್ವವನ್ನು ಬೆಂಬಲಿಸುವವರಿಂದ ಹಿಂದೂತ್ವ ವಿರೋಧಿಗಳ ಮೇಲೆ ದಾಳಿಗಳಾಗುತ್ತಿವೆ ಎಂಬ ವಾದ ಹುಟ್ಟಿಕೊಂಡಿರುವ ಹೊತ್ತಿನಲ್ಲೇ ಕನ್ನಡ ವಿಚಾರವಾದಿಗಳಿಂದ, ಬುದ್ಧಿಜೀವಿಗಳಿಂದ ಹಿಂದೂತ್ವವು ತೀವ್ರ ದಾಳಿಗೊಳಗಾಗುತ್ತಿದೆ.
ಇಂಥ ಸಂದರ್ಭದಲ್ಲಿ ಹಿಂದೂತ್ವದ ಪ್ರತಿಪಾದಕ, ಸಂಪ್ರದಾಯವನ್ನು ತೀವ್ರವಾಗಿ ವಿರೋಧಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ (ವೀರ ಸಾವರ್ಕರ್) ಅವರ ಅನುವಾದಿತ ಕೃತಿ 'ಹಿಂದುತ್ವ' ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ಲೇಖಕ ಜಿ. ಬಿ. ಹರೀಶ್ ಈ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದು, ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಹಿತಿ ಎಂ.ಎನ್. ವ್ಯಾಸರಾವ್, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಅಂಕಣಕಾರ ರೋಹಿತ್ ಚಕ್ರತೀರ್ಥ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.
ನೂರಾರು ಕನ್ನಡ ಪುಸ್ತಕ ಪ್ರೇಮಿಗಳು, ಸಾಹಿತ್ಯೋತ್ಸಾಹಿಗಳು ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸೇರಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿದ್ದರು. ಹಲವರು ಹೆಗಡೆ ಮತ್ತು ಚಕ್ರತೀರ್ಥ ಅವರ ಮಾತುಗಳನ್ನು ಕೇಳಲೆಂದೇ ಬಂದಿದ್ದರು.

ಸಮರ್ಥ ಅನುವಾದ
ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಮಾತನಾಡಿದ ರೋಹಿತ್ ಚಕ್ರತೀರ್ಥ, "ವಿಚಿತ್ರ, ಸಂಕೀರ್ಣ ವ್ಯಕ್ತಿತ್ವದ ವ್ಯಕ್ತಿ ಸಾವರ್ಕರ್. ಸಾವರ್ಕರ್ ಅವರು ಬಹಳ ಸ್ಪಷ್ಟವಾಗಿ ತಮ್ಮ ವಿಷಯಗಳನ್ನು ದಾಖಲಿಸುತ್ತಾರೆ. ಅದನ್ನು ಕನ್ನಡಕ್ಕೆ ಇಳಿಸುವುದು ತುಂಬಾ ಕಷ್ಟ. ಆದರೆ ಇದನ್ನು ಜಿಬಿ ಹರೀಶ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ಸಾವರ್ಕರ್ ಅವರ ಮೇಲೆ ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ನಿರಂತರ ದಾಳಿಗಳು ನಡೆದಿದ್ದವು. ಇದರ ಮಧ್ಯೆಯೂ ಅವರು ಇಂಥಹ ಕೃತಿ ರಚಿಸಿದ್ದಾರೆ. ಇದರಿಂದ ಅವರೊಬ್ಬರ ಸಾಮಾನ್ಯ ವ್ಯಕ್ತಿಯಲ್ಲ ಎಂದು ತಿಳಿಯುತ್ತದೆ. 1911ರಿಂದ 22ರವರೆಗೆ ಅವರು ಅಂಡಮಾನಿನ ಜೈಲಿನಲ್ಲಿದ್ದು. 1923ರಿಂದ 1924ನೇ ಇಸವಿಯಲ್ಲಿ ಮಹಾರಾಷ್ಟ್ರದ ರತ್ನಾಗಿರಿ ಜೈಲಿನಲ್ಲಿರುವ ಅವರು ಈ ಕೃತಿ ಬರೆದಿದ್ದಾರೆ" ಎಂದವರು ಮಾಹಿತಿ ನೀಡಿದರು."ಸಾವರ್ಕರ್ ಅವರು ಮುಂದಿನ 100 ವರ್ಷ ಭಾರತ ಹೇಗಿರುತ್ತದೆ ಎಂಬುದನ್ನು ಅಂದೇ ಬರೆದಿದ್ದಾರೆ. ಹಾಗಾಗಿ ಅವರೊಬ್ಬ ದಾರ್ಶನಿಕ," ಎಂದು ಹೇಳಿದರು.

ಹೆಮ್ಮೆಯಿಂದ ಹಿಂದು ಎಂದು ಹೇಳುವಂತಾಗಲಿ
"ಇವರು ಸುಮ್ಮನೆ ಕೃತಿ ಬರೆದಿಲ್ಲ. ಪ್ರತಿಯೊಂದಕ್ಕೂ ಉಲ್ಲೇಖಗಳನ್ನು ನೀಡಿದ್ದಾರೆ. ಇದರ 16ನೇ ಅಧ್ಯಯನದಲ್ಲಿರುವ ಕೋಟ್ ಗಳನ್ನು ನೋಡಿದರೆ, ಇಂದಿನ ರೊಮಿಲಾ ಥಾಪರ್ ಅವರಂಥ ತಥಾಕತಿಕ ಬುದ್ದಿಜೀವಿಗಳಿಗಿಂತ ಹೆಚ್ಚು ಕೋಟ್ ಮಾಡಿದ್ದಾರೆ" ಎಂದರು.
ಕೃತಿಯಲ್ಲಿ ಸಾವರ್ಕರ್, ಸರ್ವೈವಲ್ ಆಫ್ ದಿ ಫಿಟೆಸ್ಟ್ ಎನ್ನುತ್ತಾರೆ. ಬ್ರಿಟೀಷರು ನಮಗಿಂತ ಹೆಚ್ಚು ಫಿಟೆಸ್ಟ್ ಆಗಿದ್ದಾರೆ; ಬಲಶಾಲಿಗಳಾಗಿದ್ದಾರೆ. ನಾವು ಕುರಿಗಳ ಹಾಗೆ ಅವರ ಹಿಂದೆ ಹೋಗ್ತೇವೆ. ಎಂಬುದನ್ನು ಸಾರ್ವಕರ್ ಹೇಳುತ್ತಾರೆ. "ಹಿಂಸೆ ಪ್ರಕೃತಿಯ ಸಹಜ ಧರ್ಮ. ಹಿಂಸೆಯನ್ನು ನಾವು ನಿಯಂತ್ರಣದಲ್ಲಿರಿಸಿಕೊಳ್ಳಬೇಕು" ಎಂಬುದನ್ನೂ ಸಾವರ್ಕರ್ ಪ್ರತಿಪಾದಿಸುತ್ತಾರೆ ಎಂದು ಅವರು ವಿವರಿಸಿದರು.
ಹಿಂದೂ ಯಾವತ್ತು ಹೋಗ್ತಾನೋ ಅವತ್ತು ಈ ದೇಶದ ಅಸ್ಮಿತೆ ಹೋಗ್ತದೆ. ಹೊರಗಿನಿಂದ ಬಂದ ಸಂಸ್ಕೃತಿ ಇಲ್ಲಿಯ ಸಂಸ್ಕೃತಿ ಜೊತೆ ಬೆರೆಯಲು ಸಾಧ್ಯವಿಲ್ಲ. ಸಾವರ್ಕರ್ ಕೃತಿ ಮೂಲಕ ಹಿಂದುತ್ವವನ್ನು ನಮ್ಮೊಳಗೆ ಇಳಿಸಿಕೊಳ್ಳೋಣ. ಹೆಮ್ಮೆಯಿಂದ ಹಿಂದು ಎಂದು ಹೇಳಿಸಿಕೊಳ್ಳುವಂತಾಗಲಿ ಎಂದು ಅಭಿಪ್ರಾಯಪಟ್ಟರು.

ಬುದ್ಧಿಜೀವಿ, ಜಾತ್ಯತೀತರ ವಿರುದ್ಧ ವಾಗ್ದಾಳಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಬುದ್ಧಿಜೀವಿಗಳು, ಜಾತ್ಯತೀತರು ಮತ್ತು ಪ್ರಗತಿಪರರ ವಿರುದ್ಧ ಮತ್ತೊಮ್ಮೆ ಹರಿಹಾಯ್ದರು.
"ಇವತ್ತಿನ ಕಾಪಿ ಪೇಸ್ಟ್ ಪಿಎಚ್ಡಿ ಮಾಡಿದಂತೆ ಸಾವರ್ಕರ್ ಮಾಡಿಲ್ಲ. ವಿಚಾರವಾದಿಗಳಂಥವರಿಗೆ ಎಷ್ಟು ಹೇಳಿದರೂ ಈ ವಿಷಯ ಅರ್ಥವಾಗುವುದಿಲ್ಲ. ಅವರು ಯಾವತ್ತೂ ಕಿವಿ ಮುಚ್ಚಿಕೊಂಡೇ ಇರುತ್ತಾರೆ. ಅವರು ಯಾವತ್ತೋ ಮಾರಾಟಗೊಂಡವರು. ಜಾತ್ಯತೀತ ಬಣ್ಣಹಚ್ಚಿಕೊಂಡಾಗ ಮಾತ್ರ ಅವರನ್ನು ಸ್ವಲ್ಪ ಹೊತ್ತು ನೋಡಬಹುದು. ಬಣ್ಣ ಕಳಚಿದರೆ ಅವರನ್ನು ಯಾರೂ ನೋಡುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, "ಇದು ಬರೆದಿರುವ ಪುಸ್ತಕ ಅಲ್ಲ. ಬದುಕಿರುವ ದಾರಿ" ಎಂದು ಬಣ್ಣಿಸಿದರು.
ಹಿಂದುತ್ವವನ್ನು ನೀವು ಹೇಗಾದರೂ ಕರೆಯಿರಿ. ಆದರೆ ಇದೊಂದು ಅದ್ಭುತ ಜೀವನ ಶೈಲಿ ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕು ಎಂದು ಅವರು ತಿಳಿಸಿದರು.

ವಿಚಾರವಾದಿಗಳ ತರಹದ ವ್ಯಕ್ತಿ ನಾನಲ್ಲ
"ವಿಚಾರವಾದಿಗಳ ತರಹದ ವ್ಯಕ್ತಿ ನಾನಲ್ಲ. ತನಗೆ ಗೊತ್ತಿದ್ದದ್ದೆ ಸರಿ ಎಂದು ಹೇಳುವ ಮೂರ್ಖ ಪರಂಪರೆಯಲ್ಲಿ ನಾನು ಹುಟ್ಟಿಲ್ಲ. ನಾನು ಗೊತ್ತಿದ್ದದನ್ನು ಮಾತ್ರ ಹೇಳಿತ್ತೇನೆ. ಹಿಂದುತ್ವ ಎಂದರೆ ಸಮುದ್ರ ಇದ್ದ ಹಾಗೆ. ಬೊಗಸೆಯಲ್ಲಿ ನೀರು ತೆಗೆದು ಇದೇ ಹಿಂದುತ್ವ ಎಂದರೆ ಅದು ಆಗುವುದಿಲ್ಲ. ಹಿಂದುತ್ವಕ್ಕೆ ಚೌಕಟ್ಟು ಹಾಕಲು ಸಾಧ್ಯವಿಲ್ಲ. ವಿಚಾರವಾದಿಗಳ ಥರ ಇದೇ ಹಿಂದುತ್ವ ಎಂದು ಹೇಳುವ ತಪ್ಪು ನಾನು ಮಾಡುವುದಿಲ್ಲ" ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು.
"'ಆರ್ಯರು ಮಧ್ಯ ಏಷ್ಯಾದಿಂದ ಬಂದವರು. ದ್ರಾವಿಡರನ್ನು ಹೊರಗಟ್ಟಿದರು' ಈ ಥರಹದ ಕಾಗಣ್ಣ ಗುಬ್ಬಣ್ಣನ ಕಥೆಗಳನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಆರ್ಯರ ವಲಸೆ ಸಿದ್ಧಾಂತವೇ ಒಂದು ಭ್ರಮೆ. ಇದು ಹಿಸ್ಟರಿ ಕಾಂಗ್ರೆಸ್ ಒಪ್ಪಿಕೊಂಡಿದೆ. ಆದರೆ ವಿಚಾರವಾದಿಗಳು ಮಾತ್ರ ಒಪ್ಪಿಕೊಂಡಿಲ್ಲ" ಎಂದು ಕುಟುಕಿದರು.
ನಾವು ಇಲ್ಲಿಯವರೇ. ನಾವು ಹೊರಗಿನಿಂದ ಬಂದವರಲ್ಲ. ನಮ್ಮ ಸಂಸ್ಕೃತಿ ಇಲ್ಲಿಯೇ ಹುಟ್ಟಿದ್ದು ಎಂದು ಅವರು ಪ್ರತಿಪಾದಿಸಿದರು.

ಹಿಂದುತ್ವ ಚುನಾವಣೆಯ ವಿಷಯವಲ್ಲ
ಹಿಂದುತ್ವ ನಮಗೆ ಚುನಾವಣೆಯ ವಿಷಯವಲ್ಲ. ಇದು ನಮ್ಮ ಬದುಕು ಎಂದು ಹೇಳಿದ ಅನಂತ್ ಕುಮಾರ್ ಹೆಗಡೆ, ಅಗಸ್ತ್ಯ ಸಂಹಿತೆಯಿಂದ ನಾನು ವಿದ್ಯುತ್ ಕಂಡು ಹಿಡಿಯಲು ಸಾಧ್ಯವಾಯಿತು ಎಂದು ಸ್ವತಃ ಬೆಂಜಮಿನ್ ಫ್ರ್ಯಾಂಕ್ಲಿನ್ ಹೇಳಿಕೊಂಡಿದ್ದಾರೆ. ಸೊನ್ನೆ ಒಂದು ಇರದಿದ್ದರೆ ಹೊಸ ಅನ್ವೇಷಣೆಗಳೇ ನಡೆಯುತ್ತಿರಲಿಲ್ಲ ಎಂದು ಅಲ್ಬರ್ಟ್ ಐನ್ ಸ್ಟೈನ್ ಹೇಳಿದ್ದಾರೆ. ಆದರೆ ಇದನ್ನು ನಮ್ಮವರೇ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
"ಮುಸ್ಲಿಮರು ನಾವು ಮುಸ್ಲಿಮರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕ್ರಿಶ್ಚಿಯನ್ನರು ತಾವು ಕ್ರಿಶ್ಚಿಯನ್ನರು ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಹಿಂದೂಗಳೆಂದು ಜಾತ್ಯತೀತರು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ಅಪ್ಪನ ಪರಿಚಯವೇ ಇಲ್ಲ. ರಕ್ತದ ಪರಿಚಯ ಇದ್ದರೆ ನಿಮ್ಮನ್ನು ದೇಶದ್ರೋಹಿಗಳ ರೀತಿ ನೋಡುತ್ತಾರೆ. ಹಿಂದೂ ಎಂದರೆ ವಿಚಿತ್ರ ಪ್ರಾಣಿ ಥರ ನೋಡ್ತಾರೆ. ಹನುಮಂತನ ಥರ ನೋಡ್ತಾರೆ" ಎಂದು ಕಿಡಿಕಾರಿದರು.
ಮನುಸ್ಮೃತಿ ಜಗತ್ತಿನ ಮೊತ್ತ ಮೊದಲ ಸಂವಿಧಾನ ಅಂತ ಇವರು ಒಪ್ಪಿಕೊಳ್ಳುವುದಿಲ್ಲ. ಪೂರ್ವಾಗ್ರಹ ಪೀಡಿತರಾಗಿಯೇ ಕೃತಿಯನ್ನು ಬುದ್ಧಿಜೀವಿಗಳು, ಪ್ರಗತಿಪರರು ಓದುತ್ತಾರೆ. ಮಾಧ್ಯಮಗಳು ಏನಾದರೂ ಬರೆದುಕೊಳ್ಳಲಿ. ಬೈಯುವುದನ್ನು ನಾನು ಆರಾಧನೆ ಮಾಡುತ್ತೇನೆ ಎಂದರು ಅನಂತ್ ಕುಮಾರ್ ಹೆಗಡೆ.

ಭಾರತದ ಪ್ರಮುಖ ಕವಿ ಸಾವರ್ಕರ್
ತಮ್ಮ ಕೃತಿ ಬಗ್ಗೆ ಮಾತನಾಡಿದ ಲೇಖಕ ಜಿ. ಬಿ. ಹರೀಶ್, "ಭಾರತದ ಪ್ರಮುಖ ಕವಿ ಸಾವರ್ಕರ್. ಅವರು ಕರ್ನಾಟಕದ ಸರ್ವೋಚ್ಚ ಮಟ್ಟದ ಸಾಹಿತಿಯೂ ಹೌದು. ಬೇಂದ್ರೆ. ಕಾರಂತ, ಕುವೆಂಪು ಅವರಂತೆಯೇ ಸಾವರ್ಕರ್ ಕೂಡ ಸಾಹಿತಿಗಳು ಎಂದರು.
ಗಾಂಧಿವಾದಿಯಾದ ಹರ್ಡೇಕರ್ ಮಂಜಪ್ಪ ಅವರೇ ಇವರು ಹಿಂದುತ್ವ ಕೃತಿಯನ್ನು ಸಂಕ್ಷಿಪ್ತವಾಗಿ ಈ ಹಿಂದೆಯೇ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂದು ಹರೀಶ್ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಎಂ.ಎನ್. ವ್ಯಾಸರಾವ್, "ಸಾವರ್ಕರ್ ದಾರ್ಶನಿಕ ತತ್ವಕ್ಕೆ ಎಲ್ಲರೂ ತಲೆಬಾಗಬೇಕು" ಎಂದು ತಿಳಿಸಿದರು.












Click it and Unblock the Notifications