ಪತಿಯ ಕತ್ತು ಸೀಳಿ ಕೊಂದಿದ್ದ ಡಿಲ್ಲಿ ರಾಣಿಗಿಲ್ಲ ಬೇಲ್!
ಬೆಂಗಳೂರು, ಜುಲೈ 05; ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ತಾಳಿ ಕಟ್ಟಿದ ಗಂಡನನ್ನೇ ಕತ್ತು ಸೀಳಿ ಕೊಲೆಗೈದ ಡಿಲ್ಲಿ ರಾಣಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಷ್ಟೇ ಅಲ್ಲ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಮಂಜೂರು ಮಾಡಲಾಗದು ಎಂದು ಹೇಳಿದೆ.
ಪತಿಯ ಕೊಲೆ ಪ್ರಕರಣದ ಆರೋಪಿಯಾದ ಡಿಲ್ಲಿ ರಾಣಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ. ಡಿಲ್ಲಿ ರಾಣಿ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂಬ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.

ಹೈಕೋರ್ಟ್ ಏಕೆ ಜಾಮೀನು ನೀಡಲಿಲ್ಲ?; ಡಿಲ್ಲಿ ರಾಣಿ ಸಹ ಘಟನೆಯಲ್ಲಿ ಗಾಯಗೊಂಡಿರುವ ಕಾರಣ ಆಕೆ ಅಮಾಯಕಳಾಗಿದ್ದಾರೆ ಎಂಬ ವಾದ ಒಪ್ಪಲಾಗದು. ಅರ್ಜಿದಾರ ಹಾಗೂ ಆಕೆಯ ಅಪ್ರಾಪ್ತ ಮಕ್ಕಳಿಬ್ಬರು ನೆಲೆಸಿದ್ದ ಮನೆಯಲ್ಲಿ ಪತಿ ಶಂಕರರೆಡ್ಡಿ ಕೊಲೆಯಾಗಿದ್ದಾರೆ. ಪ್ರಕರಣದ ಎರಡನೇ ಆರೋಪಿನೊಂದಿಗೆ (ಪ್ರಿಯಕರ) ಡಿಲ್ಲಿ ರಾಣಿ ಅಕ್ರಮ ಸಂಬಂಧ ಹೊಂದಿರುವುದನ್ನು ಘಟನೆಯ ಮೂವರು ಸಾಕ್ಷಿಗಳ ಹೇಳಿಕೆ ಸ್ಪಷ್ಟಪಡಿಸುತ್ತದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತಿ ಶಂಕರ ರೆಡ್ಡಿಯನ್ನು ಕೊಲೆ ಮಾಡಲಾಗಿದೆ. ಇದೇ ವೇಳೆ ಡಿಲ್ಲಿ ರಾಣಿ ತನ್ನ ಕೈಗಳಿಗೆ ಗಾಯ ಮಾಡಿಕೊಂಡು , ತನಗೆ ಸೇರಿದ ಮಾಂಗಲ್ಯ ಸರ ಹಾಗೂ ಕಿವಿಯೋಲೆ ಬಚ್ಚಿಟ್ಟಿದಾರೆ. ಆ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಮಾಂಗಲ್ಯ ಸರ ಮತ್ತು ಕಿವಿಯೋಲೆ, ಡಿಲ್ಲಿ ರಾಣಿಯ ರಕ್ತದ ಕಲೆಗಳಿದ್ದ ನೈಟಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ ರಾತ್ರಿ ಶಂಕರರೆಡ್ಡಿ ಮತ್ತು ಅರ್ಜಿದಾರೆ ಮಧ್ಯೆ ಜಗಳವಾಗಿದೆ. ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಬಿದಿದ್ದರು ಎಂಬುದಾಗಿ ಡಿಲ್ಲಿ ರಾಣಿಯ ಅಪ್ರಾಪ್ತ ಪುತ್ರ ಸಹ ಸಾಕ್ಷ್ಯ ನುಡಿದಿದ್ದಾನೆ. ಹಾಗಾಗಿ, ಈ ಹಂತದಲ್ಲಿ ಮೇಲ್ನೋಟಕ್ಕೆ ಡಿಲ್ಲಿ ರಾಣಿ ವಿರುದ್ಧ ಸಾಕ್ಷ್ಯಗಳಿವೆ. ಹಾಗಾಗಿ ಜಾಮೀನು ನೀಡಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಡಿಲ್ಲಿ ರಾಣಿ ಮತ್ತು ಆರ್.ಶಂಕರರೆಡ್ಡಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಮತ್ತೊರ್ವ ವ್ಯಕ್ತಿಯೊಂದಿಗೆ ಡಿಲ್ಲಿ ರಾಣಿ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು. ಶಂಕರರೆಡ್ಡಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು. ಡಿಲ್ಲಿ ರಾಣಿ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದರು. ಮಕ್ಕಳಿಗೆ ಶಿಕ್ಷಣ ಕೊಡಿಸಲು ಬೆಂಗಳೂರಿಗೆ ಕುಟುಂಬವನ್ನು ಶಂಕರರೆಡ್ಡಿ ಬೆಂಗಳೂರಿಗೆ ಕರೆತಂದಿದ್ದರು.
ಅಕ್ರಮ ಸಂಬಂಧ ಮುಂದುವರಿಸಲು ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಡಿಲ್ಲಿ ರಾಣಿ ಮತ್ತು ಪ್ರಿಯಕರ ಶಂಕರರೆಡ್ಡಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. 2022ರ ಫೆ.24ರಂದು ಮಕ್ಕಳೊಂದಿಗೆ ಡಿಲ್ಲಿ ರಾಣಿ ಬೆಂಗಳೂರಿಗೆ ಬಂದು, ಪತಿಯೊಂದಿಗೆ ಯಶವಂತಪುರದ ಮೋಹನ ಕುಮಾರ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಸಂಚಿನ ಪ್ರಕಾರ ಡಿಲ್ಲಿರಾಣಿ, ಫೆ.24ರಂದು ರಾತ್ರಿ 11.30 ಗಂಟೆ ಸಮಯದಲ್ಲಿ ಮನೆಯಲ್ಲಿ ನಿದ್ರಿಸುತ್ತಿದ್ದ ಶಂಕರರೆಡ್ಡಿಯ ಕತ್ತನ್ನು ಚಾಕುವಿನಿಂದ ಕುಯ್ದು ಕೊಲೆ ಮಾಡಿದ್ದಳು.
ಅದೇ ಚಾಕುವಿನಿಂದ ಕೈಗಳ ಮೇಲೆ ಗಾಯ ಮಾಡಿಕೊಂಡಿದ್ದಳು. ಜತೆಗೆ, ಮಾಂಗಲ್ಯ ಸರ, ಕಿವಿಯೋಲೆಯನ್ನು ಬಚ್ಚಿಟ್ಟಿದ್ದಳು. ಆ ಮೂಲಕ ದರೋಡೆ ಮತ್ತು ಕೊಲೆ ಎಂಬುದಾಗಿ ಬಿಂಬಿಸಲು ಪ್ರಯತ್ನಿಸಿದ್ದಳು. ಮೊದಲಿಗೆ ಅಪರಿಚಿತರ ಮೇಲೆ ಪ್ರಕರಣ ದಾಖಲಿಸಿದ್ದ ಯಶವಂತಪುರ ಠಾಣಾ ಪೊಲೀಸರು, ತನಿಖೆ ವೇಳೆ ಡಿಲ್ಲಿ ರಾಣಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಈ ವೇಳೆ ಡಿಲ್ಲಿ ರಾಣಿ ತಪ್ಪೊಪ್ಪಿಕೊಂಡಿದ್ದಳು. ಪ್ರಕರಣದಲ್ಲಿ 2022ರ ಸೆ.24ರಿಂದ ನ್ಯಾಯಾಂಗ ಬಂಧನದಲ್ಲಿರುವ ಡಿಲ್ಲಿ ರಾಣಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರಿನ 63ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಆಕೆ ಹೈಕೋರ್ಟ್ಗೆ ಮೊರೆ ಹೋಗಿದ್ದಳು.












Click it and Unblock the Notifications