ಶಿವಾನಂದ ಸ್ಟೀಲ್ ಬ್ರಿಡ್ಜ್ ಗೆ ಹೈಕೋರ್ಟ್ ಹಸಿರು ನಿಶಾನೆ
ಬೆಂಗಳೂರು, ಜನವರಿ 09: ಶಿವಾನಂದ ವೃತ್ತದ ಬಳಿನಿರ್ಮಾಣವಾಗುತ್ತಿರುವ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಹೈಕೋರ್ಟ್ ಹಸಿತು ನಿಶಾನೆ ತೋರಿದೆ.
ಉದ್ದೇಶಿತ ಮೇಲ್ಸೇತುವೆ ಕಾಮಗಾರಿಗೆ ತಡೆಯಾಜ್ಞೆ ನೀಡಬೇಕೆಂಬ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ.ಪಿ. ಮಹೇಶ್ ಸೇರಿದಂತೆ 20 ಮಂದಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠದಲ್ಲಿ ವಜಾಗೊಳಿಸಿ ಕಾಮಗಾರಿ ಮುಂದುವರೆಸಲು ಅಸ್ತು ಎಂದಿದೆ.
ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಖಚಿತ!
ಭಾರತೀಯ ರಸ್ತೆ ಕಾಂಗ್ರೆಸ್ ನಿಯಮಗಳು ಸಾಧ್ಯವಾದಷ್ಟು ಹತ್ತಿರವಾದಂತೆ ಶಿವಾನಂದ ವೃತ್ತ ಮೇಲ್ಸೇತುವೆ ಯೋಜನೆಯನ್ನು ಪರಿಷ್ಕೃತ ಮಾಡಲಾಗಿದೆ. ಯೋಜನೆ ತಾಂತ್ರಿಕ ಅಂಶಗಳನ್ನು ಐಆರ್ ಸಿ ನಿಯಮ ಪೂರೈಸುವ ನಿಟ್ಟಿನಲ್ಲಿ ಬಿಬಿಎಂಪಿ ಗಂಭೀರ ಪ್ರಯತ್ನ ನಡೆಸಿದೆ. ಅಂದರೆ ಮೇಲ್ಸೇತುವೆ ಎತ್ತರವನ್ನು 4.5 ಮೀಟರ್ ಗೆ ಎತ್ತರಿಸಿದೆ.
ಹಾಗೆಯೇ ಇಳಿಜಾರನ್ನು 3.5 ಹಾಗೂ 5.6 ಕ್ಕೆ ಇಳಿಸಲಾಗಿದೆ. ಇನ್ನು ಪರಿಷ್ಕೃತ ಯೋಜನೆಯ ಅನುಗುಣವಾಗಿಯೇ ಕಾಮಗಾರಿ ನಡೆಸಲಾಗುವುದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. ಕಾಮಗಾರಿಯಲ್ಲಿ ಮಧ್ಯೆ ಪ್ರವೇಶಿಸಲಾಗುವುದು ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಯೋಜನೆಯ ಪ್ರತಿ ದಿನದ ವಿಳಂಬವು ಪ್ರಯಾಣಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ , ಯೋಜನೆ ವೆಚ್ಚವೂ ಹೆಚ್ಚಾಗಿ ಸರ್ಕಾರದ ಹೊರೆಯಾಗಲಿದೆ. ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿರುದ್ಧ ಯಾವುದೇ ಆದೇಶ ಹೊರಡಿಸುವುದರಿಂದ ಸಾರ್ವಜನಿಕರ ಹಿತಾಸಕ್ತಿ ಕಡೆಗಣಿಸಿದಂತಾಗುತ್ತದೆ.
ಹೀಗಾಗಿ ಕಾಮಗಾರಿ ಪರವಾಗಿ ಒಲವು ವ್ಯಕ್ತಪಡಿಸಬೇಕಿದ್ದು, ಅರ್ಜಿ ಪುರಸ್ಕರಿಸಬೇಕಾದ ಅಗತ್ಯ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಮಧ್ಯಂತರ ಅರ್ಜಿ ವಜಾಗೊಳಿಸಿ ಕಾಮಗಾರಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.