ಲಾಕ್ ಡೌನ್; ಪೊಲೀಸರು ಹಿಡಿದ ವಾಹನಗಳಿಗೆ ದಂಡ ಮೊತ್ತ ನಿಗದಿ
ಬೆಂಗಳೂರು, ಏಪ್ರಿಲ್ 30 : ಲಾಕ್ ಡೌನ್ ಅವಧಿಯಲ್ಲಿ ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದ ವಾಹನಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಕರ್ನಾಟಕ ಹೈಕೋರ್ಟ್ ವಾಹನಗಳನ್ನು ವಾಪಸ್ ನೀಡುವಾಗ ದಂಡ ಮೊತ್ತವನ್ನು ಸಂಗ್ರಹ ಮಾಡುವಂತೆ ಸೂಚನೆ ನೀಡಿದೆ.
Recommended Video
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದರು. "ಮೇ 1ರಿಂದ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಮಾಲೀಕರಿಗೆ ವಾಹನಗಳನ್ನು ವಾಪಸ್ ನೀಡುವುದಾಗಿ" ಹೇಳಿದ್ದರು. ಮಾಲೀಕರಿಗೆ ದಂಡ ವಿಧಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಕಾರಿಗೆ 1 ಸಾವಿರ ರೂ., ಬೈಕ್ ಮತ್ತು ಆಟೋಗೆ 500 ರೂ. ದಂಡವನ್ನು ಪಾವತಿ ಮಾಡಬೇಕು. ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕ ಮಾಲೀಕರಿಗೆ ವಾಹನವನ್ನು ನೀಡಬೇಕು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡಲು ಒಪ್ಪಿಗೆ ನೀಡಿದ್ದರು. ಮೇ 1ರ ಶುಕ್ರವಾರದಿಂದ ವಾಹನ ವಾಪಸ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ.
ವಾಹನಗಳನ್ನು ಪಡೆಯಲು ಬರುವಾಗಲೂ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಪೊಲೀಸರು ಹೇಳಿದ್ದಾರೆ. ಮೊದಲು ಹಿಡಿದ ವಾಹನಗಳನ್ನು ಮೊದಲು ನೀಡಲಾಗುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಲಾಕ್ ಡೌನ್ ಜಾರಿಗೊಂಡ ಬಳಿಕ ಪಾಸುಗಳಿಲ್ಲದೇ ಅನಗತ್ಯವಾಗಿ ಸಂಚಾರ ನಡೆಸುತ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬೆಂಗಳೂರು ನಗರದಲ್ಲಿ ಇದುವರೆಗೂ ಸುಮಾರು 47 ಸಾವಿರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಾರ್ಚ್ 30ರಂದು ವಶಕ್ಕೆ ಪಡೆದ ವಾಹನವನ್ನು ಮೊದಲು ಬಿಡುಗಡೆ ಮಾಡಲಾಗುತ್ತದೆ. ಹಂತ-ಹಂತವಾಗಿ ವಾಹನಗಳನ್ನು ನೀಡಲಾಗುತ್ತದೆ. ಈ ವಾರ ವಶಕ್ಕೆ ಪಡೆದ ವಾಹನಗಳನ್ನು ತಕ್ಷಣ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೇ 1ರ ಶುಕ್ರವಾರದಿಂದ ವಾಹನಗಳನ್ನು ಸೀಜ್ ಮಾಡುವುದಿಲ್ಲ ಎಂದು ಜನರು ಅಂದುಕೊಳ್ಳುವ ಹಾಗಿಲ್ಲ. ಲಾಕ್ ಡೌನ್ ಮುಗಿಯುವ ತನಕ ವಾಹನಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ಮುಂದುವರೆಯಲಿದೆ.












Click it and Unblock the Notifications