ಹೈಕೋರ್ಟ್: ಬಿಬಿಎಂಪಿ ಚುನಾವಣೆಗೆ ಇದ್ದ ಒಂದು ಕಾನೂನು ತೊಡಕು ನಿವಾರಣೆ
ಬೆಂಗಳೂರು,ಸೆ.16. ಬಿಬಿಎಂಪಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಬೆಂಗಳೂರಿನಲ್ಲಿ 243 ವಾರ್ಡ್ ಗಳನ್ನು ಪುನರ್ ವಿಂಗಡಣೆ ಮಾಡಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದರಿಂದಾಗಿ ಪಾಲಿಕೆ ಚುನಾವಣೆಗೆ ಇದ್ದ ಒಂದು ಕಾನೂನು ತೊಡಕು ನಿವಾರಣೆಯಾಂದತಾಗಿದೆ.
ಶಾಸಕರಾದ ಸ್ವೌಮ್ಯ ರೆಡ್ಡಿ, ಜಮೀರ್ ಅಹಮದ್ ಖಾನ್, ಎಂ.ಸತೀಶ್ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಹತ್ತಕ್ಕೂ ಅಧಿಕ ಅರ್ಜಿಗಳನ್ನು ನ್ಯಾ. ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಬಳಿಕ ಅರ್ಜಿಗಳಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ವಜಾಗೊಳಿಸಿದೆ. ಅಲ್ಲದೆ, 'ವಾರ್ಡ್ ಮರುವಿಂಗಡಣೆ ನಿಗದಿಗೆ ಭೌಗೋಳಿಕ ವಿಸ್ತೀರ್ಣ ಮತ್ತು 2011ರ ಜನಗಣತಿ ಆಧಾರದಲ್ಲಿ ನ್ಯಾಯೋಚಿತ ಮಾರ್ಗಗಳನ್ನು ಅನುಸರಿಸಲಾಗಿದೆ. 2011ರ ಜನಗಣತಿ ಆಧಾರದಲ್ಲೇ ಜನಸಂಖ್ಯೆ ಪ್ರಮಾಣವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ' ಎಂಬ ರಾಜ್ಯ ಸರ್ಕಾರದ ನಿಲುವನ್ನು ನ್ಯಾಯಪೀಠ ಎತ್ತಿಹಿಡಿದಿದೆ.
ಜನಸಂಖ್ಯೆಯಲ್ಲಿ ವ್ಯತ್ಯಾಸ:
ಅರ್ಜಿದಾರರ ಪರ ವಕೀಲರು, ವಾರ್ಡ್ ಮರು ವಿಂಗಡಣೆಯಲ್ಲಿ ಎಲ್ಲಾ ವಾರ್ಡ್ಗಳಿಗೆ ಒಂದೇ ಸಮಾನವಾದ ಜನಸಂಖ್ಯ ಪರಿಗಣಿಸಬೇಕು. ಪ್ರತಿ ವಾರ್ಡ್ನಲ್ಲಿ
ಸಮಾನ ಸಂಖ್ಯೆಯ ಮತದಾರರು ಇರಬೇಕು. ಆದರೆ, ಸರ್ಕಾರ ವಿವಿಧ ಅನುಪಾತದಲ್ಲಿ ಜನಸಂಖ್ಯೆ ಪರಿಗಣಿಸಿರುವ ಪರಿಣಾಮ ಪ್ರತಿಯೊಂದು ವಾರ್ಡ್ನಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ವ್ಯತ್ಯಾಸವಿದೆ ಎಂದರು.
ವಾರ್ಡ್ ಮರು ವಿಂಗಡಣೆಗಾಗಿ ರಚಿಸಲಾಗಿದ್ದ ಸಮಿತಿ ವರದಿ ನೀಡುವ ವೇಳೆ ಅದರ ಅವಧಿಯೇ ಮುಕ್ತಾಯಗೊಂಡಿತ್ತು. ಇದರಿಂದ ಸಮಿತಿಯ ವರದಿಯನ್ನು ಪರಿಗಣಿಸುವಂತೆಯೇ ಇಲ್ಲ. ಇನ್ನೂ ಆಡಳಿತ ಪಕ್ಷದ ಶಾಸಕರಿರುವ ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ಅನುಕೂಲವಾಗುವಂತೆ ವಾರ್ಡ್ಗಳ ಪುನರ್ ರಚಿಸಲಾಗಿದೆ. ವಿರೋಧ ಪಕ್ಷದ ಶಾಸಕರ ಕ್ಷೇತ್ರದಲ್ಲಿ ಹೆಚ್ಚಿನ ಜನಸಂಖ್ಯೆ ಪರಿಗಣಿಸಲಾಗಿದೆ ಮತ್ತು ವಾರ್ಡ್ಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, 2011ರ ಜನಗಣತಿ ಆಧರಿಸಿ ಪ್ರತಿ ವಾರ್ಡ್ಗೆ ಜನಸಂಖ್ಯೆ ನಿಗದಿಪಡಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಭೌಗೋಳಿಕ ವಿಸ್ತೀರ್ಣ, ಕ್ಷೇತ್ರದ ಜನಸಂಖ್ಯೆ ಬೆಳವಣಿಗೆ ಆಧರಿಸಿ ವಾರ್ಡ್ ರಚಿಸಲಾಗಿದೆ. ಕೆಲವು ಕಡೆ ಭೌಗೋಳಿಕ ವಿಸ್ತೀರ್ಣ ಹೆಚ್ಚಿದ್ದು, ಜನಸಂಖ್ಯೆ ಕಡಿಮೆ ಇದೆ. ಇನ್ನೂ ಕೆಲವಡೆ ಭೌಗೋಳಿಕ ವಿಸ್ತೀರ್ಣ ದೊಡ್ಡದಾಗಿದ್ದು, ಜನಸಂಖ್ಯೆ ಕಡಿಮೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವಾರ್ಡ್ ವಿಂಗಡಣೆಯಲ್ಲಿ ಶೇ.10ರಷ್ಟು ಜನಸಂಖ್ಯೆ ಏರಿಳಿತದ ಅನುಪಾತ ಅನುಸರಿಸಲಾಗಿದೆ. ಅದರಂತೆ, 34 ಸಾವಿರದಿಂದ 39 ಸಾವಿರ ಜನಸಂಖ್ಯೆಯ ಆಧಾರದಲ್ಲಿ ವಾರ್ಡ್ಗಳನ್ನು ವಿಂಗಡಣೆ ಮಾಡಲಾಗಿದ್ದು, ಅರ್ಜಿಗಳನ್ನು
ವಜಾಗೊಳಿಸಬೇಕು ಎಂದು ಕೋರಿದರು.
ಸಂಕೀರ್ಣ ಕೆಲಸ:
ಅರ್ಜಿದಾರರು, ಸರ್ಕಾರ ಮತ್ತು ಚುನಾವಣಾ ಆಯೋಗದ ಪರ ವಕೀಲರ ವಾದ ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ನ್ಯಾಯಪೀಠ, ವಾರ್ಡ್ ಪುನರ್ ವಿಂಗಡಣೆ ಸಂಕೀರ್ಣ ಕೆಲಸ. ಬಹು ವಿಸ್ತಾರವಾದ ಪ್ರದೇಶಗಳನ್ನು ಹಲವು ವಿಷಯ ಮುಂದಿಟ್ಟುಕೊಂಡು ವಿಂಗಡಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ನಿರ್ದಿಷ್ಟ ಮಾರ್ಗಸೂಚಿ ಅನುಸರಿಸಲಾಗಿರುತ್ತದೆ ಎಂದು ನುಡಿಯಿತು.
ವಾರ್ಡ್ ಮೀಸಲು ಸೆ.21ಕ್ಕೆ ವಿಚಾರಣೆ:
ಈ ಮಧ್ಯೆ, 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಿದ್ಧಪಡಿಸಲಾಗಿರುವ 243 ವಾರ್ಡ್ಗಳ ಮೀಸಲು ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ರಾಜಕೀಯ ಮೀಸಲು ಕಲ್ಪಿಸಲಾಗಿಲ್ಲ ಎಂದ ದೂರಲಾಗಿರುವ ರಿಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಬೇಕು' ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿದೆ.
ಈಜಿಪುರದ ಕೆ.ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್, ದೊಡ್ಡ ಬಾಣಸವಾಡಿಯ ವಿ.ಶ್ರೀನಿವಾಸ್ ಮತ್ತು ನಾಗನಾಥಪುರದ ಕೆ.ಚಂದ್ರಶೇಖರ್ ಹಾಗೂ ಇತರರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು ಎಂಬ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿತು.