ಕನ್ನಡ ಪತ್ರಿಕೆಗಳು ಕಂಡಂತೆ ಗುಜರಾತ್-ಹಿಮಾಚಲ ಫಲಿತಾಂಶ
Recommended Video
ಬೆಂಗಳೂರು, ಡಿಸೆಂಬರ್ 19: ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣೆಯ ಫಲಿತಾಂಶವನ್ನು ನಿನ್ನೆಯೆಲ್ಲಾ ಟಿವಿಯ ಮುಂದೆ ಕೂತು ನೋಡಿದ್ದರೂ, ಬೆಳ್ಳಂಬೆಳಗ್ಗೆ ನ್ಯೂಸ್ ಪೇಪರ್ ಗಾಗಿ ಕಾಯುತ್ತಿದ್ದವರು ಹಲವರು. ಏಕೆಂದರೆ ಯಾವುದೇ ಸುದ್ದಿಯ ಕುರಿತು ಸಮಗ್ರ ಮಾಹಿತಿ ಬೇಕೆಂದರೆ ನ್ಯೂಸ್ ಪೇಪರ್ ಬೇಕೇ ಬೇಕು!
ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?
ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಗೆಲುವನ್ನು ಹಲವು ಪತ್ರಿಕೆಗಳು ಅವುಗಳ ದೃಷ್ಟಿಕೋನಕ್ಕೆ ತಕ್ಕಂತೆ ಚಿತ್ರಿಸಿವೆ. ಕೆಲವು ಪತ್ರಿಕೆಗಳು ಬಿಜೆಪಿ ಗೆಲುವನ್ನು ಶ್ಲಾಘಿಸಿದ್ದರೆ, ಮತ್ತೆ ಕೆಲವರು ಇದು ಬಿಜೆಪಿಗೆ ಕಷ್ಟದ ಗೆಲುವು ಎಂದು ಬಣ್ಣಿಸಿವೆ.
ಗುಜರಾತ್ ಚುನಾವಣೆ ಫಲಿತಾಂಶ: ಪಾಠ ಒಂದು, ಎರಡು, ಮೂರು, ನಾಲ್ಕು...
ಕಾಂಗ್ರೆಸ್ ಸೋತರೂ ಗೆದ್ದಿದೆ, ಬಿಜೆಪಿ ಪ್ರಯಾಸದಲ್ಲೇ ಗೆಲುವು ಕಂಡಿದೆ ಎಂದೂ ವಿಶ್ಲೇಷಿಸಿವೆ. ಇಂದಿನ 'ಹೆಡ್ ಲೈನ್ ಆಫ್ ದಿ ಡೆ' ಯಾವ ಪತ್ರಿಕೆಗೆ ಎಂದು ಕೇಳಿದರೆ, ಬಹುಶಃ 'ವಿಶ್ವವಾಣಿ' ಎಂದರೆ ತಪ್ಪಾಗಲಾರದು. 'ಗೆದ್ದು ಬಾಗಿದ ಬಿಜೆಪಿ, ಸೋತು ಬಾಗಿದ ಕಾಂಗ್ರೆಸ್!' ಎಂಬ ಸೊಗಸಾದ ಶೀರ್ಷಿಕೆ ನೀಡಿ, ಕಾಂಗ್ರೆಸ್ ನ ಹೋರಾಟವನ್ನೂ ಶ್ಲಾಘಿಸಿ, ಬಿಜೆಪಿಯ ಪ್ರಯಾಸದ ಗೆಲುವಿನ ಕುರಿತು ಎಚ್ಚರಿಕೆಯನ್ನೂ ನೀಡಿದೆ.
ಇದರೊಂದಿಗೆ ಕನ್ನಡದ ಇತರೆ ಪತ್ರಿಕೆಗಳು ಈ ಗೆಲುವನ್ನು ಹೇಗೆ ಬಣ್ಣಿಸಿವೆ ಎಂಬುದು ಇಲ್ಲಿದೆ...
ಗೆದ್ದು ಬಾಗಿದ ಬಿಜೆಪಿ, ಸೋತು ಬಾಗಿದ ಕಾಂಗ್ರೆಸ್!
ಸದಾ ಒಂದಿಲ್ಲೊಂದು ಪಂಚಿಂಗ್ ಹೆಡ್ ಲೈನ್ ನೀಡುವಲ್ಲಿ ಹೆಸರುವಾಸಿಯಾಗಿರುವ ವಿಶ್ವವಾಣಿ ಪತ್ರಿಕೆ 'ಗೆದ್ದು ಬಾಗಿದ ಬಿಜೆಪಿ, ಸೋತು ಬೀಗಿದ ಕಾಂಗ್ರೆಸ್' ಎಂಬ ಶೀರ್ಷಿಕೆ ನೀಡಿ ಗಮನ ಸೆಳೆದಿದೆ. ಗೆದ್ದರೂ ಬಿಜೆಪಿಗೆ ಬಾಗಬೇಕಾದ ಪರಿಸ್ಥಿತಿ, ಕಾಂಗ್ರೆಸ್ ಗೆ ಸೋತರೂ ಬೀಗುವ ಪರಿಸ್ಥಿತಿ ಎಂಬುದನ್ನು ಅರ್ಥವತ್ತಾಗಿ ಸೂಚಿಸಿದ ವಿಶ್ವವಾಣಿ. ಈ ತಲೆಬರಹದಲ್ಲೇ ಬಿಜೆಪಿಗೂ ಪಾಠವಿರುವುದು ಸುಳ್ಳಲ್ಲ!
ಅದೇ ರಾಗಾ ಅದೇ ಮೋಡಿ
'ಅದೇ ರಾಗಾ ಅದೇ ಮೋಡಿ' ಎಂಬ ಶೀರ್ಷಿಕೆಯೊಂದಿಗೆ ವಿಜಯವಾಣಿ ಪತ್ರಿಕೆ ಗಮನ ಸೆಳೆದಿದೆ. ರಾಹುಲ್ ಗಾಂಧಿಯವರಿಗೆ ಎಂದಿನಂತೇ ಸೋಲು ಎಂಬರ್ಥದಲ್ಲಿ ಅದೇ ರಾಗ ಎಂದೂ, ಮೋದಿ ಮೋಡಿ ಮತ್ತೆ ಯಶಸ್ವಿಯಾಗಿದೆ ಎಂಬರ್ಥದಲ್ಲಿ ಅದೇ ಮೋಡಿ ಎಂದೂ ಶೀರ್ಷಿಕೆ ನೀಡಿದೆ. ಜೊತೆಗೆ 56 ಇಂಚಿನ ಸಿಂಹಾಸನದ ಚಿತ್ರವನ್ನೂ ಕಾರ್ಟೂನ್ ಮೂಲಕ ಚಿತ್ರಿಸಿದೆ.
ನಮೋ ಗುಜ'ರಾಜ'
ಗುಜರಾತಲ್ಲಿ 22 ವರ್ಷ ಆಳಿದ ಬಳಿಕವೂ ಬಿಜೆಪಿ ಗೆಲುವು, ದಿಲ್ಲಿಯಲ್ಲಿದ್ದರೂ ಗುಜರಾತಿಗೆ ಮೋದಿಯೇ ರಾಜ ಎಂಬಿತ್ಯಾದಿ ಅಡಿಬರಹದೊಂದಿಗೆ, 'ನಮೋ ಗುಜರಾಜ' ಎಂಬ ಶೀರ್ಷಿಕೆ ನೀಡಿದೆ ಕನ್ನಡ ಪ್ರಭ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಫಲಿತಾಂಶದ ಸುದ್ದಿಗಾಗಿಯೇ ಐದು ವಿಶೇಷ ಪುಟಗಳನ್ನು ಮೀಸಲಿಟ್ಟಿದೆ.
ಮೋದಿ ವಿಜಯ ಯಾತ್ರೆಗಿಲ್ಲ ತಡೆ
ಇನ್ನೇನು ಗುರಿಮುಟ್ಟಲಿದ್ದ ರಾಹುಲ್ ಗಾಂಧಿಯವರನ್ನು ರನ್ ಔಟ್ ಮಾಡುತ್ತಿರುವ ಮೋದಿಯವರ ಕಾರ್ಟೂನ್ ಮೂಲಕ ವಿಜಯ ಕರ್ನಾಟಕ ಗಮನ ಸೆಳೆದಿದೆ. ಗೆಲುವಿನ ಅಂಚಿನಲ್ಲಿದ್ದ ಕಾಂಗ್ರೆಸ್ ರನ್ ಔಟ್ ಎಂಬ ಕ್ಯಾಪ್ಷನ್ ಸಹ ನೀಡಿದೆ. ಮೋದಿ ವಿಜಯ ಯಾತ್ರೆಗಿಲ್ಲ ತಡೆ ಎಂಬ ಶೀರ್ಷಿಕೆಯೊಡನೆ ಅರ್ಥವತ್ತಾದ ಗ್ರಾಫ್ ಗಳ ಮೂಲಕ ವಿಜಯ ಕರ್ನಾಟಕದ ಸುದ್ದಿ ಗಮನಸೆಳೆದಿದೆ.
ಗುಜರಾತ್: ಬಿಜೆಪಿಗೆ ಪ್ರಯಾಸದ ಗೆಲುವು
ಮೋದಿ ತವರಲ್ಲಿ ಶಕ್ತಿ ಹೆಚ್ಚಿಸಿಕೊಂಡ ಕಾಂಗ್ರೆಸ್, ಹಿಮಾಚಲದಲ್ಲಿ ಅರಳಿದ ಕಮಲ, ಮುಖ್ಯಮಂತ್ರಿ ಅಭ್ಯರ್ಥಿ ಧುಮಾಲ್ ಗೆ ಸೋಲು ಎಂಬಿತ್ಯಾದಿ ಅಡಿಬರಹ ನೀಡಿರುವ ಪ್ರಜಾವಾಣಿ, ಗುಜರಾತ್: ಬಿಜೆಪಿಗೆ ಪ್ರಯಾಸದ ಗೆಲುವು ಎಂದು ವಿಶ್ಲೇಷಿಸಿದೆ. ಎಂದಿನಂತೆ ತನ್ನ ಸರಳ ಶೈಲಿಯಲ್ಲಿಯೇ ಶಿರ್ಷಿಕೆ ನೀಡಿರುವುದಲ್ಲದೆ, ವಿನ್ಯಾಸವೂ ಸರಳವಾಗಿದೆ. ಆದರೆ ಪ್ರಜಾವಾಣಿಯ ಮುಖಪುಟದಲ್ಲೆಲ್ಲೂ ಮೋದಿ ಚಿತ್ರವಿಲ್ಲದೆ, ಅಮಿತ್ ಶಾ ಚಿತ್ರ ರಾರಾಜಿಸುತ್ತಿರುವುದು ಗಮನಾರ್ಹ!
ಗುದ್ದಾಡಿ ಗೆದ್ದ ಮೋದಿ
ಗುದ್ದಾಡಿ ಗೆದ್ದ ಮೋದಿ ಎಂಬ ಅರ್ಥವತ್ತಾದ ಶಿರ್ಷಿಕೆಯೊಂದಿಗೆ ಗಮನ ಸೆಳೆದಿದೆ ಉದಯವಾಣಿ ಪತ್ರಿಕೆ. ರಾಹುಲ್ ನಾಯಕತ್ವದಲ್ಲಿ ಗುದ್ದಾಡಿಯೂ ಸೋತ ಕೈ, ಗುಜರಾತ್, ಹಿಮಾಚಲದಲ್ಲಿ ಮತ್ತೆ ಬಿಜೆಪಿ ಆಡಳಿತ ಎಂಬ ಅಡಿ ಬರಹವನ್ನೂ ನೀಡಿದೆ. 'ಕಮಲಾ'ಚಲ ಪ್ರದೇಶ ಎಂದು ಹಿಮಾಚಲಕ್ಕೆ ನಾಮಕರಣ ಮಾಡಿ ಬಿಜೆಪಿ ಗೆಲುವನ್ನು ಬಣ್ಣಿಸಿದೆ.
ಕೈ ಕಟ್ ಬಾಯ್ ಮುಚ್
19 ನೇ ರಾಜ್ಯಕ್ಕೆ ಬಿಜೆಪಿ ಸಾಮ್ರಾಜ್ಯ ವಿಸ್ತರಣೆ, ಮೊದಲ ಪರೀಕ್ಷೆಯಲ್ಲಿ ಅಧ್ಯಕ್ಷ ರಾಹುಲ್ ಫೇಲ್ ಎಂಬ ಅಡಿ ಬರಹದೊಂದಿಗೆ ಕೈಕಟ್ ಬಾಯ್ ಮುಚ್ ಎಂಬ ಶೀರ್ಷಿಕೆ ನೀಡಿದೆ ಹೊಸ ದಿಗಂತ. ಮುಖಪುಟವನ್ನು ಕೇವಲ ಬಿಜೆಪಿ ಗೆಲುವಿಗಾಗಿಯೇ ಮೀಸಲಿಟ್ಟಿರುವ ಹೊಸ ದಿಗಂತ, ಭಾರತ ನಕ್ಷೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಗುರುತಿಸಿ ಪ್ರಕಟಿಸಿದೆ.
ಪ್ರಯಾಸದ ಗೆಲುವು!
ಗುಜರಾತ್: ಬಿಜೆಪಿಗೆ ಪ್ರಯಾಸದ ಗೆಲುವು ಎಂದು ಪ್ರಜಾವಾಣಿ ಮತ್ತು ವಾರ್ತಾ ಭಾರತಿ ಎರಡೂ ಪತ್ರಿಕೆಗಳೂ ಒಂದೇ ರೀತಿಯ ಶೀರ್ಷಿಕೆ ನೀಡಿ, ಬಿಜೆಪಿ ಗೆಲುವನ್ನು ಪ್ರಯಾಸದ ಗೆಲುವು ಎಂದು ಬಣ್ಣಿಸಿವೆ. ಮೋದಿ-ಅಮಿತ್ ಶಾ ಜೋಡಿಯ ಚಿತ್ರ, ಬಿಜೆಪಿ ಕಾರ್ಯಕರ್ತರ ಸಂಭ್ರಮದ ಚಿತ್ರದೊಂದಿಗೆ, ಅಭೂತಪೂರ್ವ ಜಯಗಳಿಸಿದ ಜಿಗ್ನೆಶ್ ಮೇವಾನಿ ಚಿತ್ರವೂ ಮುಖಪುಟದಲ್ಲಿರುವುದು ಗಮನಾರ್ಹ.