ಬೆಂಗಳೂರಲ್ಲಿ ಭಾರೀ ಮಳೆ; ನೀರಿನಲ್ಲಿ ತೇಲಿದ ಕಾರುಗಳು
ಬೆಂಗಳೂರು, ಮೇ17: ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ವರುಣ ಅಬ್ಬರಿಸಿದ್ದಾನೆ. ಸತತ ಎರಡು ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲಾ ನದಿಗಳಾಗಿ ಪರಿವರ್ತನೆಯಾಗಿದೆ.
ಗುಡುಗು, ಸಿಡಿಲುನಿಂದ ಕೂಡಿದ ಮಳೆಯ ಅಬ್ಬರಕ್ಕೆ ಬೆಂಗಳೂರು ನಗರ ಬೆಚ್ಚಿ ಬಿದ್ದಿದೆ. ರಸ್ತೆಗಳು ಜಲಾವೃತವಾದ ಕಾರಣ ವಾಹನ ಸವಾರರು ಪರದಾಡುತ್ತಿದ್ದಾರೆ. ಕಾರುಗಳು ಮಳೆ ನೀರಿನಲ್ಲಿ ಕೆಟ್ಟು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತೀಯ ಹವಾಮಾನ ಇಲಾಖೆ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರಲ್ಲೂ ಮಳೆಯ ಆರ್ಭಟ ಮುಂದುವರೆಯಲಿದೆ.

ನಾಯಂಡಹಳ್ಳಿಯಲ್ಲಿ ಕೆಟ್ಟು ನಿಂತ ಕಾರುಗಳು; ಮಂಗಳವಾರ ರಾತ್ರಿ ಸುರಿದ ಮಳೆಗೆ ನಾಯಂಡಹಳ್ಳಿ ಜಂಕ್ಷನ್ನಲ್ಲಿ ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡಿದೆ. ಭಾರೀ ಮಳೆಗೆ ರಾಜಕಾಲುವೆ ತುಂಬಿ ರಸ್ತೆಯೇ ರಾಜಕಾಲುವೆಯಾಗಿತ್ತು. ರಸ್ತೆಯಲ್ಲಿ ಕಾರುಗಳು ಕೆಟ್ಟು ನಿಂತವು. ಚಾಲಕರು ಕಾರನ್ನು ತಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.
ಯಶವಂತ ಪುರದಲ್ಲೂ ಭಾರೀ ಮಳೆಯಾದ ಪರಿಣಾಮದಿಂದಾಗಿ ಬಸ್ ನಿಲ್ದಾಣ ಬಳಿಯ ಅಂಡರ್ ಪಾಸ್ನಲ್ಲಿ ಭಾರೀ ಪ್ರಮಾಣ ನೀರು ಸಂಗ್ರಹವಾಯಿತು. ಜನರು ಮಳೆಯಿಂದ ರಕ್ಷಣೆ ಪಡೆಯಲು ಫ್ಲೈ ಓವರ್ ಕೆಳಗೆ ನಿಂತರು. ಯಶವಂತಪುರ, ಮತ್ತಿಕೆರೆ ಸುತ್ತ-ಮುತ್ತ ಮಳೆ ಅವಾಂತರವನ್ನೇ ಸೃಷ್ಟಿಸಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸತತ ಮೂರು ಗಂಟೆಗಳ ಕಾಲ ಮಳೆ ಬಂದರೆ ಸಾಕು ನಾಯಂಡಹಳ್ಳಿ, ಶೇಷಾದ್ರಿಪುರ ಅಂಡರ್ ಪಾಸ್, ಶಾಂತಿನಗರ ಬಸ್ ಡಿಪೋ, ಕೋರಮಂಗಲದ ಕೆಲಭಾಗಗಳು, ಈಜಿಪುರ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ.
ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್; ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕಾಗಿದ್ದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮತ್ತೆ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅದರಲ್ಲೂ ಪ್ರಮುಖವಾಗಿ ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿಯೂ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ ರಾಜಧಾನಿ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಮಳೆ ಜೊತೆಗೆ ಗಂಟೆಗೆ 30-40 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ.
ಭಾರೀ ಮಳೆಗೆ ಕಾರಣಗಳು
* ಅರಬ್ಬಿ ಸಮುದ್ರದಲ್ಲಿ ತೇವಾಂಶ ತುಂಬಿದ ಗಾಳಿ ಗಂಟೆಗೆ 50-60 ಕಿ. ಮೀ. ವೇಗದಲ್ಲಿ ಪಶ್ಚಿಮ ದಿಕ್ಕಿಂದ ಬೀಸಲಿದೆ
* ಲಕ್ಷದ್ವೀಪ ಭಾಗದಿಂದ ಕರಾವಳಿ ಭಾಗಕ್ಕೆ ಮೇಲ್ಮೈ ಸುಳಿಗಾಳಿ ಸರಾಸರಿ 3 ಕಿ. ಮೀ. ವೇಗದಲ್ಲಿ ಬೀಸುತ್ತಿದೆ.
* ತಮಿಳುನಾಡು ಕರಾವಳಿ ಭಾಗದಿಂದ ರಾಜ್ಯ ಹೊರನಾಡು ಭಾಗಕ್ಕೆ ಸರಾಸರಿ 2 ಕಿ. ಮೀ. ವೇಗದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿದೆ.
ಪೂರ್ವ ಮುಂಗಾರು ಮಳೆ ಬೆಂಗಳೂರಿನಲ್ಲಂತು ಅಬ್ಬರಿಸುತ್ತಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬೆಂಗಳೂರಿನ ತಗ್ಗು ಪ್ರದೇಶ, ರಾಜಕಾಲುವೆ ಸಮೀಪವಿರುವ ಮನೆಗಳ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಂಗಳೂರಿಗೆ ಆರಂಜ್ ಅಲರ್ಟ್ ಘೋಷಣೆ ಮಾಡಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.












Click it and Unblock the Notifications