ಬೆಂಗಳೂರಲ್ಲಿ ಭಾರಿ ಮಳೆ, ಗಾಳಿ : ಧರೆಗುರುಳಿದ ಮರಗಳು
ಬೆಂಗಳೂರು, ಮೇ 26 : ಬೆಂಗಳೂರು ನಗರದಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾಗಿದೆ. ವಿಜಯನಗರ ಸುತ್ತಮತ್ತಲ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ವಿದ್ಯುತ್, ಕೇಬಲ್ ಸಂಪರ್ಕ ಕಡಿತಗೊಂಡಿದೆ.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಗುಡುಗು, ಸಿಡಿಲು ಭಾರಿ ಗಾಳಿಯ ಜೊತೆ ಮಳೆ ಆರಂಭವಾಯಿತು. ಸುಮಾರು ಒಂದು ಗಂಟೆ ಮಳೆ ಸುರಿದ್ದು, ಗಾಳಿಯ ಆರ್ಭಟಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ. ರಾತ್ರಿ 11 ಗಂಟೆಯ ತನಕ ನಗರದ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿತ್ತಲೇ ಇತ್ತು.
ಕರ್ನಾಟಕಕ್ಕೆ ಮುಂಗಾರು ಪ್ರವೇಶ ಯಾವಾಗ? ಮಾಹಿತಿ
ಇಂದಿರಾನಗರ 80 ಅಡಿ ರಸ್ತೆ, ಬಸವನಗುಡಿ, ಕಾಡುಗೋಡಿ, ಕಲ್ಯಾಣ ನಗರ, ಜಯನಗರ, ಗಾಂಧಿ ಬಜಾರ್, ಜಯಮಹಲ್, ಬಾಷಂ ಸರ್ಕಲ್, ಡಾ.ರಾಜ್ ಕುಮಾರ್ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿ ಮರಗಳು ಧರೆಗುರುಳಿವೆ.
ಮಳೆ ಅನಾಹುತಗಳ ನಿರ್ವಹಣೆಗೆ ಜಿಲ್ಲೆಯಲ್ಲಿ 2 ತಂಡ ರಚನೆ
ಬೆಂಗಳೂರು ನಗರದಲ್ಲಿ ಇನ್ನೂ ಮೂರು ದಿನಗಳ ಕಾಲ ಪೂರ್ವ ಮುಂಗಾರು ಮಳೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ಮುನ್ಸೂಚನೆ ನೀಡಿದೆ.
ಪೂರ್ವ ಮುಂಗಾರು ಮಳೆ ಕೊರತೆಯ ವಿವರ, ರೈತರಿಗೆ ಸಲಹೆ
27 ಮಿ.ಮೀ.ಮಳೆ ಮಳೆ
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ ರಾತ್ರಿ 9 ರಿಂದ 11.30ರ ತನಕ 27 ಮೀ.ಮಿ ಮಳೆಯಾಗಿದೆ. ಎಚ್ಎಎಲ್ ಏರ್ ಪೋರ್ಟ್ ಪ್ರದೇಶದಲ್ಲಿ 14 ಮಿ.ಮೀ ಮಳೆ ಸುರಿದಿದೆ.
ಹಲವಾರು ಮರಗಳು ಧರೆಗೆ
ವಿಜಯನಗರದಲ್ಲಿ ಹಲವಾರು ಬೃಹತ್ ಮರಗಳು ಉರುಳಿ ಬಿದ್ದಿವೆ. ಸುಮಾರು 15ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಬಿಬಿಎಂಪಿ ಅರಣ್ಯಾಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಬಿಎಂಪಿಗೆ ದೂರುಗಳ ಸುರಿಮಳೆ
ಬಿಬಿಎಂಪಿ ಸಹಾಯವಾಣಿಗೆ ದೂರುಗಳ ಸುರಿಮಳೆ ಬಂದಿದೆ. ಮರ, ವಿದ್ಯುತ್ ಸಂಪರ್ಕ ಕಡಿತ ಸೇರಿದಂತೆ ಹಲವಾರು ದೂರುಗಳು ಬಂದಿವೆ. ವಿಜಯನಗರ ಮತ್ತು ಆರ್ಪಿಸಿ ಲೇಔಟ್ ಸುತ್ತಮುತ್ತಲ ಪ್ರದೇಶಗಳಿಂದ ಹೆಚ್ಚು ದೂರುಗಳು ಬಂದಿವೆ.
ಕಾರುಗಳಿಗೆ ಹಾನಿ
ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರು, ಆಟೋಗಳ ಮೇಲೆ ಮರಗಳು ಬಿದ್ದು ಜಖಂಗೊಂಡಿವೆ. ಕೆಲವು ಕಡೆ ವಿದ್ಯುತ್ ಕಂಬಗಳು ಧರೆಗುರುಗಳಿದ್ದು, ಬೆಸ್ಕಾಂ ಸಿಬ್ಬಂದಿ ಅವುಗಳನ್ನು ಸರಿಪಡಿಸಲು ಪ್ರಯತ್ನ ನಡೆಸಿದ್ದಾರೆ.