ಗ್ರೀನ್ ಕಾರಿಡಾರ್ ಮೂಲಕ ಜೀವಂತ ಹೃದಯ ರವಾನೆ, ಶಸ್ತ್ರಚಿಕಿತ್ಸೆ ಯಶಸ್ವಿ
ಬೆಂಗಳೂರು, ಜುಲೈ 19: ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡ, 13 ವರ್ಷದ ಬಾಲಕನ ಹೃದಯವನ್ನು ಅಸ್ಸಾಂ ಮೂಲದ 11 ವರ್ಷದ ಹುಡುಗಿಗೆ ಹೃದಯ ಕಸಿ ಮತ್ತು ಯಕೃತ್ತಿನ ವಿಫಲತೆಯಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಗೆ ಅಂಗಾಂಗ ಕಸಿ ಮಾಡುವಲ್ಲಿ ನಾರಾಯಣ ಹೆಲ್ತ್ ಸಿಟಿ ವೈದ್ಯರು ಯಶಸ್ವಿಯಾಗಿದ್ದಾರೆ.
ದಾನಿಯು ಜುಲೈ 13ದು ಕುಣಿಗಲ್ ರಸ್ತೆಯಲ್ಲಿ ಅಪಘಾತಕ್ಕೊಳಗಾಗಿದ್ದ, ಬಾಲಕನನ್ನು ಬೆಂಗಳೂರಿನ ಯಶವಂತಪುರ ದಲ್ಲಿರುವ ಸ್ಪಶ್ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಸೋಮವಾರ ರಾತ್ರಿ ಆಸ್ಪತ್ರೆಯ ವೈದ್ಯರು ಬಾಲಕನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದರು.
ಅಂಗಾಂಗ ದಾನಕ್ಕೆ ಬಾಲಕನ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಅಸ್ಸಾಂ ಮೂಲದ 11 ವರ್ಷದ ಹುಡುಗಿ, (ಹೃದಯ ಪಡೆದವರು), ಹೃದಯಾಘಾತ ರೋಗಿಯಾಗಿದ್ದು, ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಯ ಸ್ಥಿತಿ ಸುಧಾರಿಸದ ಕಾರಣ, ಆಕೆಗೆ ಹೃದಯ ಕಸಿಗೆ ಒಳಗಾಗಲು ಸಲಹೆ ನೀಡಲಾಯಿತು.

ಇದೇ ಆಸ್ಪತ್ರೆಯಲ್ಲಿ ಮತ್ತೋರ್ವ ರೋಗಿ 9 ವರ್ಷದ ಬಾಲಕಿಯ ಯಕೃತ್ತು ವಿಫಲಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಈಕೆಗೂ ಸಹ ಯಕೃತ್ತಿನ ಕಸಿಗೆ ಒಳಗಾಗಲು ವೈದ್ಯರು ಸಲಹೆ ನೀಡಿದ್ದರು. ದಾನಿಯಿಂದ ಅಂಗಾಂಗಗಳನ್ನು ಪಡೆದು, ಇವರಿಬ್ಬರಿಗೂ ಕಸಿ ಮಾಡಿ ಹೊಸಬದುಕನ್ನು ನೀಡಲಾಯಿತು.
ಹಸಿರು ಪಥ ಸಂಚಾರ : ಬುಧವಾರದಂದು ಹಸಿರು ಪಥ ಸಂಚಾರ (ಗ್ರೀನ್ ಕಾರಿಡಾರ್) ಸಹಾಯದಿಂದ ದಾನಿಯ ಹೃದಯ ಮತ್ತು ಯಕೃತ್ತನ್ನು ಬೊಮ್ಮಸಂದ್ರ ಕೈಗಾರಿಕ ಪ್ರದೇಶದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಲಾಯಿತು.
ಸ್ಪರ್ಶ್ ಆಸ್ಪತ್ರೆಯಿಂದ 64 ಕಿ.ಮೀ. ದೂರದಲ್ಲಿರುವ ನಾರಾಯಣ ಹೆಲ್ತ್ ಸಿಟಿಗೆ ಕೇವಲ 44 ನಿಮಿಷದಲ್ಲಿ ದಾನಿಯ ಅಂಗಾಂಗಗಳನ್ನು ರವಾನಿಸಲಾಯಿತು.

ಇದೇ ಸಂಧರ್ಬದಲ್ಲಿ ಆಸ್ಪತ್ರೆಯ ಸಿಒಒ ಜೋಸೆಫ್ ಪಸಂಘಾ ರವರು ಮಾತನಾಡಿ, ಮಗನನ್ನು ಕಳೆದುಕೊಂಡಿದ್ದ ಪಾಲಕರು ಶೋಕತಪ್ತರಾಗಿದ್ದರು ಸಹ ಮಗನ ಅಂಗಾಂಗಗಳನ್ನು ದಾನಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಅಂಗಾಂಗ ದಾನಕ್ಕೆ ಮುಂದೆ ಬಂದ ಈ ಕುಟುಂಬದ ಪ್ರತಿಯೊಬ್ಬರಿಗೆ ಕೃತಜ್ಞತೆಯನ್ನು ಹಾಗು ಮಗನ ಸಾವಿಗೆ ಸಂತಾಪವನ್ನು ಸೂಚಿಸಿದರು.
ಮತ್ತು ನಗರ ಸಂಚಾರ ಪೋಲಿಸ್ ಇಲಾಖೆಯು ನೀಡಿದ ಬೆಂಬಲವನ್ನು ಪ್ರಶಂಸಿಸುತ್ತಾ, ಪ್ರತೀಬಾರಿ ಜೀವಂತ ಅಂಗಾಂಗಗಳನ್ನು ಸಾಗಿಸುವಾಗ, ಬೆಂಗಳೂರು ನಗರ ಸಂಚಾರ ಪೋಲಿಸ್ ಹಸಿರು ಪಥ ಸಂಚಾರ (ಗ್ರೀನ್ ಕಾರಿಡಾರ್) ಸೃಷ್ಟಿಸಿ ಸಹಾಯ ಮಾಡಿದ ಸಂಪೂರ್ಣ ಪೋಲಿಸ್ ತಂಡಕ್ಕೆ ಆಸ್ಪತ್ರೆಯ ಪರವಾಗಿ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ ಎಂದರು.
ನಾರಾಯಣ ಹೆಲ್ತ್ ಸಿಟಿಯ ಪರಿಣಿತ ಶಸ್ತ್ರ ಚಿಕಿತ್ಸಕರ ತಂಡವು ಇಂದು ಹೃದಯ ಮತ್ತು ಯಕೃತ್ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.












Click it and Unblock the Notifications