ಹೆಲ್ಮೆಟ್ ಇದ್ದರೂ ಧರಿಸದೆ ಪ್ರಾಣ ಕಳೆದುಕೊಂಡ!
ಬೆಂಗಳೂರು, ಮೇ 08: ವಾಹನಗಳನ್ನು ಚಲಾಯಿಸುವಾಗ ಎಷ್ಟು ಎಚ್ಚೆರಿಕೆಯಿಂದಿದ್ದರೂ ಸಾಲುವುದಿಲ್ಲ. ಒಂದು ಸೆಕೆಂಡ್ ನಮ್ಮ ಮನಸ್ಸು ಹಿಡಿತ ತಪ್ಪಿದರೂ ಸಾಕು ಈ ಲೋಕವನ್ನೇ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಹೆಲ್ಮೆಟ್ ಹಾಕಿಕೊಂಡು ಬೈಕ್ ಚಲಾಯಿಸಿ ಎಂದು ಟ್ರಾಫಿಕ್ ಪೊಲೀಸರು ಅದೆಷ್ಟೋ ಅಭಿಯಾನ ನಡೆಸುತ್ತಿದ್ದಾರೆ. ಶುಲ್ಕವಿಧಿಸಿ ಎಚ್ಚರಿಸುತ್ತಿದ್ದಾರೆ. ಆದರೆ ಆ ವಿಷಯ ಯಾರ ತಲೆಯೊಳಗೂ ಹೋದಂತೆ ಕಾಣುತ್ತಿಲ್ಲ.
ಹೆಲ್ಮೆಟ್ ಇದ್ದರೂ ಕೈನಲ್ಲಿ ಹಿಡಿದುಕೊಂಡು ಬೈಕ್ ಚಲಾಯಿಸುವುದು, ನಂತರ ಪೊಲೀಸರು ಕಂಡಾಗ ಹೆಲ್ಮೆಟ್ ಹಾಕಿಕೊಂಡು ಸ್ವಲ್ಪ ದೂರ ಹೋಗಿ ಮತ್ತೆ ಹೆಲ್ಮೆಟ್ ತೆಗೆದು ಕೈಯ್ಯಲ್ಲಿಟ್ಟುಕೊಂಡು ಬೈಕ್ ಓಡಿಸುವವರೇ ಹೆಚ್ಚು.
ಅದರಿಂದ ಏನು ಅನಾಹುತವಾಗುತ್ತದೆ ಎಂದು ತಿಳಿಯಬೇಕಾದರೆ ಈ ಸ್ಟೋರಿ ಓದಲೇ ಬೇಕು. ಹೆಲ್ಮೆಟ್ ಇದ್ದರೂ ಹಾಕಿಕೊಳ್ಳದೆ ಕೈಯಲ್ಲಿ ಹಿಡಿದುಕೊಂಡು ಹೋಗಿದ್ದಕ್ಕೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 33 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಪ್ರಾಣ ತೆತ್ತಿರುವ ಘಟನೆ ನಗರದಲ್ಲಿ ನಡೆದಿದೆ.

ಮಡಿಕೇರಿ ಮೂಲದ ಹೆಬ್ಬಾಳ ನಿವಾಸಿಯಾಗಿದ್ದ ನಿತಿನ್ ಗಣಪತಿ ಮೃತಪಟ್ಟಿರುವ ಯುವಕ. ಸೋಮವಾರ ಬೆಳಗ್ಗಿನ ಜಾವ 4 ಗಂಟೆಗೆ ಬಾಣಸವಾಡಿ 100 ಅಡಿ ರಸ್ತೆಯಲ್ಲಿ ಮಾಣಿಕ್ಯ ಜ್ಯುವೆಲ್ಲರ್ಸ್ ವೇಳೆ ಕೆಟಿಎಂ ಬೈಕ್ನಲ್ಲಿ ಮನೆಗೆ ತೆರಳುವ ವೇಳೆ ಕಂಟ್ರೋಲ್ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಹಿನ್ನೆಲೆ ನಿತಿನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಆಸ್ಪತ್ರೆಗೆ ಸೇರುವ ಮುನ್ನವೇ ನಿತಿನ್ ಗಣಪತಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.
ಆತನ ಬಳಿ ಹೆಲ್ಮೆಟ್ ಇದ್ದರೂ ಧರಿಸಿರಲಿಲ್ಲ. ಕೈಯಲ್ಲಿ ಹೆಲ್ಮೆಟ್ ಇಟ್ಟುಕೊಂಡಿದ್ದ ಎಂದು ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ. ಅಲ್ಲದೆ, ಆತನಿಗೆ ಮದುವೆಯಾಗಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಆತನ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.












Click it and Unblock the Notifications