ಮೈತ್ರಿ ಸರ್ಕಾರ ಪತನವಾದಾಗಲೂ ನಾನು ಅವರ ವಿರುದ್ಧ ಮಾತನಾಡಿಲ್ಲ: ಮಾಜಿ ಮಂತ್ರಿ ಎಚ್.ಡಿ. ರೇವಣ್ಣ
ಬೆಂಗಳೂರು, ಮಾ. 15: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಎಸ್ಐಟಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯಿದೆ.
ಇದೇ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪರವಾಗಿ ಮಾತನಾಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರ 'ಸಿಡಿ' ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣ ಬೇರೆ. ನಾನು ವೈಯಕ್ತಿಕವಾಗಿ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರಿಗೆ ದೂರವಾಣಿ ಕರೆ ಮಾಡಿದ್ದೆ. ಸಣ್ಣ ಸಮಾಜದಿಂದ ರಾಜಕಾರಣಕ್ಕೆ ಬಂದಿದ್ದಾರೆ. ಇಂತಹ ಆರೋಪಗಳು ಬಂದಾಗ ಸಮಾಜದಲ್ಲಿ ಎದುರಿಸಿ ನಿಲ್ಲಬೇಕು. ಅದನ್ನೇ ಅವರಿಗೆ ತಿಳಿಸಿದ್ದೆ ಎಂದು ರೇವಣ್ಣ ಉತ್ತರಿಸಿದರು.

ಜೊತೆಗೆ ನಾಯಕ ಸಮುದಾಯದ ಮುಖಂಡ ರಮೇಶ್ ಅವರು, ನಾನು ಅವರ ಬಗ್ಗೆ ಎಂದೂ ಕೆಟ್ಟದಾಗಿ ಮಾತನಾಡಿಲ್ಲ. ಮೈತ್ರಿ ಸರ್ಕಾರ ಬಿದ್ದಾಗಲೂ ನಾನು ಮಾತನಾಡಿಲ್ಲ ಎಂದು ಎಚ್.ಡಿ. ರೇವಣ್ಣ ಅವರು ವಿವರಿಸಿದರು.

'ಸಿಡಿ' ಪ್ರಕರಣದ ಬಳಿಕ ಅಜ್ಞಾತವಾಸಿಗಳಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ನಂತರ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಇಡೀ ದೇವೇಗೌಡರ ಕುಟುಂಬ ನನಗೇ ಸಮಾಧಾನ ಹೇಳಿದೆ ಎಂದು ಹೇಳಿದ್ದರು. ಜೊತೆಗೆ ಕಷ್ಟ ಕಾಲದಲ್ಲಿ ಸಮಾಧಾನ ಹೇಳಿದ್ದಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದರು.












Click it and Unblock the Notifications