Hindi Diwas 2022 : ಜನರ ತೆರಿಗೆ ಹಣ ಹಿಂದಿ ದಿವಸ ಆಚರಣೆಗೆ ಬಳಸಬೇಡಿ- ಎಚ್ಡಿ ಕುಮಾರಸ್ವಾಮಿ
ಬೆಂಗಳೂರು, ಸೆ.12: ಸೆಪ್ಟೆಂಬರ್ 14ರಂದು ನಡೆಯುವ ಹಿಂದಿ ದಿವಸ ಆಚರಣೆಗೆ ರಾಜ್ಯ ಸರ್ಕಾರ ರಾಜ್ಯದ ಜನರ ತೆರಿಗೆ ಹಣ ಬಳಸಬಾರದು, ಇದರಿಂದ ನಾಡಿನ ಜನತೆಗೆ ಅನ್ಯಾಯ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಸೋಮವಾರ ಸೆಪ್ಟೆಂಬರ್ 14ರ ಹಿಂದಿ ದಿವಸ ಆಚರಣೆಯ ಕುರಿತು ಪತ್ರ ಬರೆದಿರುವ ಅವರು, "ಭಾರತವು ಸಾವಿರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡ, 560 ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟವಾಗಿದೆ" ಎಂದಿದ್ದಾರೆ.
ರಾಜ್ಯ ಸರ್ಕಾರದ ಅತಿದೊಡ್ಡ ಭೂ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡುತ್ತೇನೆ: ಎಚ್ಡಿಕೆ
"ಇಂತಹ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಪರಮ ಅನ್ಯಾಯವಾಗಿದೆ" ಎಂದು ಕಿಡಿ ಕಾರಿದ್ದಾರೆ.
"ಸೆಪ್ಟೆಂಬರ್ 14 ರಂದು ಭಾರತ ಒಕ್ಕೂಟ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವಾದ "ಹಿಂದಿ ದಿವಸ" ವನ್ನು ಕರ್ನಾಟಕದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ" ಎಂದಿದ್ದಾರೆ.
"ಕರ್ನಾಟಕ ಸರ್ಕಾರದ ವತಿಯಿಂದ, ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕು ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಬಾರದೆಂದು ಆಗ್ರಹಿಸುತ್ತೇನೆ" ಎಂದು ಪತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಬರೆದಿದ್ದಾರೆ.
ಹಿಂದಿ ದಿವಸ ಆಚರಣೆಗೆ ಪ್ರತಿ ಬಾರಿ ಹಿಂದಿಯೇತರ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗುತ್ತಲೇ ಇದೆ. ಆದರೂ ಕೇಂದ್ರ ಸರ್ಕಾರ ಸೆಪ್ಟೆಂಬರ್ 14 ರಂದು ಹಿಂದಿ ದಿವಸ ಆಚರಣೆ ನಡೆಸುತ್ತದೆ.
ಕಳೆದ ಬಾರಿಯೂ ಹಿಂದಿ ದಿವಸ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು, ರಾಷ್ಟ್ರೀಕೃತ, ಗ್ರಾಮೀಣ ಮತ್ತು ಖಾಸಗಿ ಬ್ಯಾಂಕ್ಗಳ ಮುಂದೆ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನೆಗಳು ದಾಖಲಾಗಿದ್ದವು.
ಕರ್ನಾಟಕದ ಎಲ್ಲ ಬಗೆಯ ಬ್ಯಾಂಕುಗಳು, ಕನ್ನಡದಲ್ಲೇ ವ್ಯವಹರಿಸಬೇಕು. ಬ್ಯಾಂಕಿನಲ್ಲಿ ಬಳಕೆಯಾಗುವ ಚಲನ್, ಚೆಕ್ ಪುಸ್ತಕ, ಪಾಸ್ಬುಕ್ಗಳಲ್ಲಿ ಕನ್ನಡ ಬಳಕೆಯಾಗಬೇಕು. ಎಟಿಎಂಗಳಲ್ಲಿ ಕನ್ನಡದ ಆಯ್ಕೆ ಇರಬೇಕು. ಗ್ರಾಹಕರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ಕನ್ನಡೇತರ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿತು ಕನ್ನಡದಲ್ಲಿ ವ್ಯವಹರಿಸಬೇಕು, ಇಲ್ಲದಿದ್ದರೆ ಅವರನ್ನು ತವರು ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು.
ಈ ಆಗ್ರಹ ಇನ್ನೂ ಕೂಡ ಕೇಳಿ ಬರುತ್ತಲೇ ಇದೆ. ಇದೇ ಸಂದರ್ಭದಲ್ಲಿ ಮತ್ತೆ ಹಿಂದಿ ದಿವಸ ಆಚರಣೆ ಬರುತ್ತಿದೆ.