ಕುಮಾರಸ್ವಾಮಿ ಸೌಜನ್ಯಕ್ಕೂ ಮಾತನಾಡಿಸಲಿಲ್ಲ: ಹೊರಟ್ಟಿ ಬೇಸರ
ಬೆಂಗಳೂರು, ಅಕ್ಟೋಬರ್ 22: ಸಭಾಪತಿ ಸ್ಥಾನ ಕೈತಪ್ಪಿದಾಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಸೌಜನ್ಯಕ್ಕೂ ಕರೆದು ಮಾತನಾಡಿರಲಿಲ್ಲ ಎಂದು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
Recommended Video
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನ ಕೈತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದೆ. ಅದರ ಬಳಿಕ ಅವರು ನನ್ನನ್ನು ಕರೆದು ಸಮಾಧಾನ ಮಾಡಬಹುದಾಗಿತ್ತು. ಆದರೆ ಕುಮಾರಸ್ವಾಮಿ ಸೌಜನ್ಯಕ್ಕೂ ನನ್ನ ಬಳಿ ಮಾತನಾಡಲಿಲ್ಲ. ಇದರ ಬಗ್ಗೆ ನನಗೆ ತೀವ್ರ ನೋವಿದೆ ಎಂದು ಹೇಳಿದರು.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದ ಅವಧಿಯಲ್ಲಿ ವಿಧಾನಪರಿಷತ್ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರಿಗೆ ತೀವ್ರ ನಿರಾಶೆಯಾಗಿತ್ತು. ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿಯಾಗಿ ಆಯ್ಕೆಯಾದಾಗ ತಮ್ಮ ಪಕ್ಷದ ನಾಯಕರ ಬೆಂಬಲ ಸಿಗದಿದ್ದಕ್ಕೆ ಪರಿಷತ್ನಲ್ಲಿಯೇ ಕಣ್ಣೀರು ಸುರಿಸಿ ಹೊರನಡೆದಿದ್ದ ಹೊರಟ್ಟಿ, ಈ ಬಗ್ಗೆ ಹಲವು ಬಾರಿ ಬೇಸರ ಹಂಚಿಕೊಂಡಿದ್ದರು.

ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ನಮಗೆ ಸರಿಯಾಗಿ ಸ್ಪಂದಿಸಿರಲಿಲ್ಲ ಎಂದು ಹೊರಟ್ಟಿ ಈ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ಅವರ ನಡವಳಿಕೆ ಕುರಿತು ಅವರು ಬೇಸರ ಹಂಚಿಕೊಂಡಿದ್ದರು. ಇದಕ್ಕೆ ಕುಮಾರಸ್ವಾಮಿ, ತಮಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಹೊರಟ್ಟಿ ವಿರುದ್ಧ ಕಿಡಿಕಾರಿದ್ದರು.
ಈ ಬಗ್ಗೆ ಮಾತನಾಡಿದ ಹೊರಟ್ಟಿ, ಕುಮಾರಸ್ವಾಮಿ ಅವರು ಎರಡೆರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಸರ್ಟಿಫಿಕೇಟ್ ನೀಡುವಷ್ಟು ನಾವು ದೊಡ್ಡವರಲ್ಲ ಎಂದು ಹೇಳಿದರು.











Click it and Unblock the Notifications