ತೇಜಸ್ವಿ ಸೂರ್ಯ, ಸೂಲಿಬೆಲೆ ಯುಗಪರುಷರೇ?: ಕುಮಾರಸ್ವಾಮಿ ಲೇವಡಿ
Recommended Video
ಬೆಂಗಳೂರು, ಜನವರಿ 18: ಪೌರತ್ವ ತಿದ್ದುಪಡಿ ಕಾಯ್ದೆ ಪರ ನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ಹತ್ಯೆಗೆ ಪ್ರಯತ್ನ ನಡೆದಿತ್ತು ಎಂಬುದನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಅವರ ಹತ್ಯೆಗೆ ಸಂಚು ನಡೆದಿದೆ ಎಂಬ ಸುದ್ದಿ ಕೇಳಿದೆ. ಅವರಿಬ್ಬರೇನು ಯುಗ ಪುರುಷರೇ? ಅವರ ಸಾಧನೆಯಾದರೂ ಏನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಗರದ ಮಿಲ್ಲರ್ ರಸ್ತೆಯ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದ ಮಸೀದಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಜಾಯಿಂಟ್ ಆಕ್ಷನ್ ಕಮಿಟಿ ಆಯೋಜಿಸಿದ್ದ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಕುರಿತ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾತಾಡಿದರು.

ಮಹಾನ್ ದೇಶಭಕ್ತರೇನಲ್ಲ
ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಮಹಾನ್ ದೇಶಭಕ್ತರೇನೂ ಅಲ್ಲ. ಇವರೇನು ಹುತಾತ್ಮರಾಗಲು ಹೋಗಿಯೂ ಇಲ್ಲ. ಇವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನುತ್ತಾರೆ. ಬೆಂಗಳೂರಿಗೆ, ಸಮಾಜಕ್ಕೆ ಇವರ ಕೊಡುಗೆಯಾದರೂ ಏನು? ಇವರೇನು ಸಾಧನೆ ಮಾಡಿದ್ದಾರೆ ಎಂದು ಅವರ ಕೊಲೆಗೆ ಯತ್ನಿಸುತ್ತಾರೆ? ಎಂದು ಪ್ರಶ್ನಿಸಿದರು.

ಸಮುದಾಯದ ಮೇಲೆ ತಪ್ಪು ಹೊರಿಸಬಾರದು
ಯಾರೋ ಮಾಡಿದ ಕೃತ್ಯಕ್ಕೆ ಇಡೀ ಒಂದು ಸಮುದಾಯದ ಮೇಲೆ ತಪ್ಪು ಹೊರಿಸಬಾರದು. ಕಿಡಿಗೇಡಿಗಳ ಕೃತ್ಯಕ್ಕೆ ಧರ್ಮದ ಹೆಸರು ಬಳಿಯಬಾರದು. ತನಿಖೆ ಮಾಡಲಿ. ಸತ್ಯ ಇದ್ದರೆ ಯಾವುದೇ ಸಂಘಟನೆ ಮೇಲೆಯಾದರೂ ಕ್ರಮ ತೆಗೆದುಕೊಳ್ಳಲಿ. ಸತ್ಯಾಸತ್ಯತೆ ಅರಿತು ಕ್ರಮ ತೆಗೆದುಕೊಳ್ಳಬೇಕು ಎಂದರು.

ಪೊಲೀಸರ ವರಸೆ ಬದಲು
ಆರೆಸ್ಸೆಸ್ ಕಾರ್ಯಕರ್ತ ವರುಣ್ ಮೇಲಿನ ಹಲ್ಲೆ ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂದು ಪೊಲೀಸರು ಇತ್ತೀಚೆಗೆ ಹೇಳಿದ್ದರು. ಇದೀಗ ಆರೋಪಿಗಳು ಎಸ್ಡಿಪಿಐ ಕಾರ್ಯಕರ್ತರು ಎನ್ನುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಹಿಡಿಯಬೇಕು. ಆದರೆ ಒಂದು ಸಮುದಾಯದ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಸದನ ನಡೆಸಲು ಬಿಡುವುದಿಲ್ಲ
ದೇಶದಲ್ಲಿ ಬಿಜೆಪಿ ಸಾಕಷ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದೆ. ಮಂಗಳೂರು ಗಲಭೆಗೆ ಸರ್ಕಾರ ಮತ್ತು ಪೊಲೀಸರೇ ಕಾರಣ. ಮಂಗಳೂರಿನಲ್ಲಿ ಸಭೆ ನಡೆದಾಗ ಸಭೆ ನಡೆದಾಗ ಯಾಕೆ ಗಲಾಟೆ ಆಗಲಿಲ್ಲ. ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಕುರಿತಾದ ವಿಡಿಯೋ ಬಿಡುಗಡೆ ಮಾಡಿದ್ದೇನೆ. ಸದನದಲ್ಲಿ ಈ ಬಗ್ಗೆ ನಾನು ಹೋರಾಟ ನಡೆಸುತ್ತೇನೆ. ಮೂವರು ಅಧಿಕಾರಿಗಳನ್ನೂ ಅಮಾನತು ಮಾಡಬೇಕು. ಇಲ್ಲವಾದರೆ ಸದನ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.












Click it and Unblock the Notifications