ಸಚಿವರೊಬ್ಬರಿಂದ ಸಿಎಂ ಸಿದ್ದರಾಮಯ್ಯಗೆ 1.9 ಕೋಟಿ ರೂ. ಮೌಲ್ಯದ ಉಡುಗೊರೆ ಸಿಕ್ಕಿದೆ: ಹೆಚ್ಡಿಕೆ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 'ಸಚಿವರೊಬ್ಬರು' ತಮ್ಮ ಬೆಂಬಲಿಗರ ಮೂಲಕ ₹ 1.9 ಕೋಟಿ ಮೌಲ್ಯದ ಕಾಟ್ ಮತ್ತು ಎರಡು ಜೊತೆ ಸೋಫಾ ಸೆಟ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಇದು ಸಿದ್ದರಾಮಯ್ಯನವರು ಮೊದಲ ಅವಧಿಗೆ ಸಿಎಂ ಆಗಿದ್ದಾಗ ಕಟ್ಟಿದ್ದ ಹ್ಯೂಬ್ಲೋಟ್ ವಾಚ್ ವಿವಾದದ ಪರಿಷ್ಕೃತ ಆವೃತ್ತಿಯಂತೆ ಕಾಣುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಇನ್ನು ಈ ಉಡುಗೊರೆ ನೀಡಿದ ವಿಚಾರವನ್ನು ತಮಗೆ ಅನಾಮಿಕರೊಬ್ಬರು ತಿಳಿಸಿದ್ದಾರೆ ಎಂದು ಹೆಚ್ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "ನನ್ನನ್ನು 'ದೊಡ್ಡ ಸುಳ್ಳುಗಾರ' ಎಂದು ಪದೇ ಪದೇ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದೆ ಬಂದು ತನಗೆ ಇಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದರ ಹಿಂದಿನ ಸತ್ಯವನ್ನು ಬಹಿರಂಗಪಡಿಸಬೇಕು." ಎಂದು ಒತ್ತಾಯಿಸಿದರು.
ಸರ್ಕಾರದ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ಸಚಿವರು ಬರ ಪರಿಸ್ಥಿತಿ ನಿಭಾಯಿಸುವ ಬದಲು ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ, ಸಚಿವರ ಬಂಗಲೆಗಳನ್ನು ನವೀಕರಣ ಮಾಡಲಾಗುತ್ತಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸಲು ಹಣವಿದೆ. ರಾಜ್ಯ ಸರ್ಕಾರ ಈಗಾಗಲೇ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಹೆಚ್ಡಿಕೆ ಸರ್ಕಾರದ ವಿರುದ್ಧ ಆರೋಪಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿರುವ ಸಮ್ಮೇಳನ ಸಭಾಂಗಣವನ್ನು ನವೀಕರಿಸಲು ರಾಜ್ಯವು 3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗ್ಯಾರೆಂಟಿ ವಿಫಲವಾಗಿದೆ ಎಂದ ಹೆಚ್ಡಿಕೆ
ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳು ವಿಫಲವಾಗಿದೆ ಎಂದು ಹೆಚ್ಡಿಕೆ ಹೇಳಿದ್ದಾರೆ. ಚುನಾವಣೆಗೆ ಮೊದಲು ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನಾಯಕರು ನೀಡಿದ್ದರು, ಆದರೆ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದರು.
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದರು, ಅದರೆ ನಂತರ ಷರತ್ತು ವಿಧಿಸಿ 30-40 ಯೂನಿಟ್ ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. ಲಕ್ಷಾಂತರ ಮಹಿಳೆಯರಿಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ, ವಿದ್ಯಾನಿಧಿ ಯೋಜನೆ ಇನ್ನೂ ಯಾವಾಗ ಜಾರಿಯಾಗುತ್ತದೆ ಗೊತ್ತಿಲ್ಲ ಎಂದು ಹೇಳಿದರು. ಕರ್ನಾಟಕದ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದೆ, ಆದರೆ ರಾಜ್ಯದಲ್ಲೇ ಇವುಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ ಎಂದರು.












Click it and Unblock the Notifications