ಬಿಬಿಎಂಪಿ : ಜೆಡಿಎಸ್-ಕಾಂಗ್ರೆಸ್ ದೋಸ್ತಿಯಲ್ಲಿ ಕಹಿ?
ಬೆಂಗಳೂರು, ಆಗಸ್ಟ್ 29 : 'ಬಿಬಿಎಂಪಿಯಲ್ಲಿ ಮುಂದಿನ ಅವಧಿಗೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮುಂದುವರೆಸುವ ಅಗತ್ಯವೇನಿದೆ?' ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಪ್ರಶ್ನಿಸಿದ್ದಾರೆ. ಬಿಬಿಎಂಪಿ ಆಡಳಿತ ವೈಖರಿ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಎಚ್.ಡಿ.ದೇವೇಗೌಡ, 'ಮುಂದಿನ ಅವಧಿಗೆ ಬೆಂಬಲ ನೀಡಬೇಕೆ? ಎಂಬ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ' ಎಂದು ಹೇಳಿದರು.

'ಮಳೆ ನೀರು ಮನೆಗೆ ನುಗ್ಗುತ್ತಿದೆ. ಬಿಬಿಎಂಪಿ ಆಡಳಿತವನ್ನು ಜನರು ಟೀಕೆ ಮಾಡುತ್ತಿದ್ದಾರೆ. ನೀವು ಏಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರಿ ಎಂದು ನಮ್ಮನ್ನು ಕೇಳುತ್ತಿದ್ದಾರೆ. ಉತ್ತರ ಕೊಡುವುದು ಕಷ್ಟವಾಗಿದೆ' ಎಂದು ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.
'ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿಲ್ಲ. ಪಾರದರ್ಶಕ ಆಡಳಿತ ಕೊಡುತ್ತೇವೆ ಎಂದಿದ್ದರು. ಭ್ರಷ್ಟಾಚಾರದ ಬಗ್ಗೆ ಅಧಿಕಾರಿಯೊಬ್ಬರು ಕೊಟ್ಟಿರುವ ವರದಿ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ?' ಎಂದು ಗೌಡರು ಪ್ರಶ್ನಿಸಿದರು.
ಅಂದಹಾಗೆ 2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಜೆಡಿಎಸ್ ಬೆಂಬಲ ಪಡೆದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಕಾಂಗ್ರೆಸ್-ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದಾಗಿ ಬಿಜೆಪಿಗೆ ಮೇಯರ್ ಪಟ್ಟ ತಪ್ಪಿತ್ತು. ಸದ್ಯದ ಮೇಯರ್ ಜಿ.ಪದ್ಮಾವತಿ (ಕಾಂಗ್ರೆಸ್), ಉಪ ಮೇಯರ್ ಎಂ.ಆನಂದ (ಜೆಡಿಎಸ್).












Click it and Unblock the Notifications