ನವಯುಗ ಟೋಲ್ ಗೆ ಪೊಲೀಸ್ ಭದ್ರತೆ ಕಲ್ಪಿಸುವಂತೆ ಹೈಕೋರ್ಟ್ ಸೂಚನೆ
ಬೆಂಗಳೂರು, ಏಪ್ರಿಲ್ 24: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ನವಯುಗ ಟೋಲ್ ಸಂಗ್ರಹ ಕೇಂದ್ರಕ್ಕೆ ಪೊಲೀಸ್ ಭದ್ರತೆ ಕಲ್ಪಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಪೊಲೀಸ್ ಭದ್ರತೆ ಕಲ್ಪಿಸಲು ನಿರ್ದೇಶಿಸುವಣತೆ ಕೋರಿ ಮೆರ್ಸಸ್ ನವಯುಗ ದೇವನಹಳ್ಳಿ ಟೋಲ್ ಪ್ರೈ.ಲಿ. ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಅವರಿದ್ದ ಏಕ ಸದಸ್ಯಪೀಠ, ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-7ರಲ್ಲಿ 534.720 ಕಿ.ಮೀ ಇಂದ 556.840 ಕಿ.ಮೀ ವರೆಗೆ ಸುಗಮವಾಗಿ ಟೋಲ್ ಸಂಗ್ರಹಿಸಲು ಅನುಕೂಲವಾಗುವಂತೆ ಅರ್ಜಿದಾರರಿಗೆ ಸೋಮವಾರದಿಂದಲೇ ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ.
ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ನವಯುಗ ಟೋಲ್ ಸಂಗ್ರಹ ಕೇಂದ್ರದಲ್ಲಿ ಇತ್ತೀಚೆಗೆ ಶುಲ್ಕ ಹೆಚ್ಚಿಸಲಾಗಿದೆ. ಇದರಿಂದ ವಾಹನ ಸವಾರರ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ನಿತ್ಯ ಸಿಬ್ಬಂದಿಯೊಂದಿಗೆ ವಾಹನ ಸವಾರರ ಮಾತಿನ ಚಕಮಕಿ ನಡೆಯುತ್ತಿದೆ.

ಈ ಮಧ್ಯೆ ಏರ್ಪೋರ್ಟ್ ರಸ್ತೆ ಸಂಪರ್ಕಿಸಲು ಪರ್ಯಾಯ ರಸ್ತೆಯೊಂದು ನಿರ್ಮಾಣವಾಗಿರುವುದರಿಂದ ಟೋಲ್ ಪಾವತಿಸಲು ವಾಹನ ಸವಾರರು ಅಸಹಕಾರ ತೋರುತ್ತಿದ್ದರು. ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಸಿಬ್ಬಂದಿ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದರು.












Click it and Unblock the Notifications