ಸತ್ತ ಎಂದುಕೊಂಡವ 4 ವರ್ಷದ ಬಳಿಕ ಬೆಂಗಳೂರಲ್ಲಿ ಪತ್ತೆ, ಚಿತ್ರ ಕೊಟ್ಟಿತು ಸುಳಿವು
ಬೆಂಗಳೂರು, ಜನವರಿ 09: ನಾಲ್ಕು ವರ್ಷದ ಹಿಂದೆಯೇ ಸತ್ತು ಹೋದ ಎಂದುಕೊಂಡಿದ್ದ ವ್ಯಕ್ತಿ ಹಠಾತ್ತನೆ ಬೆಂಗಳೂರಲ್ಲಿ ಪತ್ತೆ ಆಗಿದ್ದಾನೆ. ಅದೂ ಒಂದು ಚಿತ್ರದಿಂದ.
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಚಿಕ್ಕಮೈಸೂರಿನವನಾದ ಸುಧಾಕರ್ ಎಂಬ ಬುದ್ಧಿಮಾಂದ್ಯ ವ್ಯಕ್ತಿ ನಾಲ್ಕು ವರ್ಷದ ಹಿಂದೆ ಮನೆಯಿಂದ ನಾಪತ್ತೆ ಆಗಿದ್ದ. ಪೊಲೀಸ್ ದೂರು ನೀಡಿ ಹುಡುಕಾಡಿದ ಕುಟುಂಬದವರು ಸತ್ತು ಹೋಗಿದ್ದಾನೆಂದುಕೊಂಡು ಸುಮ್ಮನಾಗಿಬಿಟ್ಟಿದ್ದರು. ಆದರೆ ಕಳೆದ ತಿಂಗಳು ಏಕಾ-ಏಕಿ ಆತನ ಚಿತ್ರವೊಂದು ಕುಟುಂಬಕ್ಕೆ ಸಿಕ್ಕಿ ಸುಧಾಕರ್ ಬದುಕಿರುವ ಸುಳಿವು ನೀಡಿದೆ. ಆ ಚಿತ್ರ ದೊರೆತದ್ದು ಸಹ ಆಕಸ್ಮಿಕ.

ಆಟೋ ಡ್ರೈವರ್ ಒಬ್ಬರು ಕಳೆದ ಡಿಸೆಂಬರ್ 30 ರಂದು ತಮಗೆ ಜಯನಗರದಲ್ಲಿ ಸಿಕ್ಕ ಒಬ್ಬ ಭಿಕ್ಷುಕನಿಗೆ (ಬುದ್ಧಿಮಾಂದ್ಯ ಸುಧಾಕರ್) ಸಹಾಯ ಮಾಡಿ, ಆತನ ಚಿತ್ರ ತೆಗೆದು ಇಟ್ಟುಕೊಂಡಿದ್ದರು. ಆ ಚಿತ್ರವನ್ನು ವಾಟ್ಸಾಪ್ ಗ್ರೂಫ್ನಲ್ಲಿ ಹಾಕಿದ್ದರು. ಅದೇ ಗ್ರೂಫ್ನಲ್ಲಿದ್ದ ಸುಧಾಕರ್ ಕುಟುಂಬದ ದೂರದ ಸಂಬಂಧಿ ಅನುಮಾನದ ಮೇಲೆ ಆ ಚಿತ್ರವನ್ನು ಸುಧಾಕರ್ ಕುಟುಂಬಕ್ಕೆ ಕಳುಹಿಸಿದ್ದಾರೆ.
ಚಿತ್ರದಲ್ಲಿದ್ದ ತಮ್ಮನನ್ನು ಗುರುತಿಸಿದ ಸುಧಾಕರ್ ಅಣ್ಣ ರಾಜಶೇಖರ್ ಮತ್ತು ಕುಟುಂಬದವರು, ಆ ಚಿತ್ರ ತೆಗೆದ ಆಟೋ ಡ್ರೈವರ್ ಅನ್ನು ಸಂಪರ್ಕಿಸಿ ಮಾಹಿತಿ ಪಡೆದು, ಜಯನಗರ ಮತ್ತು ಸುತ್ತ-ಮುತ್ತ ಹುಡುಕಾಟ ನಡೆಸಿದ್ದಾರೆ. ಚಿತ್ರವನ್ನು ಪ್ರಿಂಟ್ ಹಾಕಿಸಿಕೊಂಡು ಜನರನ್ನು ಕೇಳಿದ್ದಾರೆ. ಆಗ ಒಬ್ಬ ವ್ಯಕ್ತಿ ಚಿತ್ರದಲ್ಲಿ ಸುಧಾಕರ್ ಹಾಕಿದ್ದ ಸ್ವೆಟರ್ ಮೇಲಿದ್ದ ಅಕ್ಷರಗಳನ್ನು ಗುರುತಿಸಿ 'ಇದು ಭಿಕ್ಷುಕರ ಪುನರ್ವಸತಿ ಕೇಂದ್ರದ ಸ್ವೆಟರ್, ನೀವು ಅಲ್ಲಿ ವಿಚಾರಿಸಿ' ಎಂದು ಸಲಹೆ ನೀಡಿದ್ದಾನೆ.

ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ಹುಡುಕಾಟ
ಗೊರಗುಂಟೆಪಾಳ್ಯದ ಬಳಿ ಇರುವ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ತೆರಳಿದ ಕುಟುಂಬ ಅಲ್ಲಿ ಮಾಹಿತಿ ಕಲೆಹಾಕಿದಾಗ, 'ಸುಧಾಕರ್ ಇಲ್ಲಿದ್ದುದ್ದು ನಿಜ, ಬಹು ಸಮಯದಲ್ಲಿಂದ ಅವರು ಇಲ್ಲಿಯೇ ಇದ್ದರು, ಆದರೆ ಕೆಲವು ವಾರದ ಹಿಂದಷ್ಟೆ ಅವರು ಭಿಕ್ಷುಕರ ಕೇಂದ್ರದಿಂದ ತಪ್ಪಿಸಿಕೊಂಡಿದ್ದಾರೆ ನಾವೂ ಸಹ ಅವರಿಗಾಗಿ ಹುಡುಕಾಡುತ್ತಿದ್ದೇವೆ' ಎಂದಿದ್ದಾರೆ.

ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೊಷಣೆ
ಹತ್ತಿರದಲ್ಲೇ ಇದ್ದರೂ ಸುಧಾಕರ್ ಸಿಗುತ್ತಿಲ್ಲವೆಂಬ ಚಡಪಡಿಕೆಯಲ್ಲಿಯೇ ಕುಟುಂಬದವರು ಜಯನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲು ಯತ್ನಿಸಿದ್ದಾರೆ. ದೂರು ಪಡೆಯಲು ನಿರಾಕರಿಸಿದ ಪೊಲೀಸರು, 'ಆ ವ್ಯಕ್ತಿಯ ಬಗ್ಗೆ ಈಗಾಗಲೇ ದೂರು ದಾಖಲಿಸಿದ್ದೀರಿ (ನಾಲ್ಕು ವರ್ಷದ ಹಿಂದೆ), ಹಾಗಾಗಿ ಅದೇ ದೂರಿನನ್ವಯ ನಾವು ಹುಡುಕಾಟ ನಡೆಸುತ್ತೇವೆ, ನೀವು ಆ ವ್ಯಕ್ತಿಯ ಚಿತ್ರಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಹುಡುಕಿಕೊಡಲು ಜನರ ನೆರವು ಕೋರಿ' ಎಂದು ಸಲಹೆ ಕೋರಿದ್ದಾರೆ. ಅದರಂತೆ ಜಯನಗರ ಸೇರಿದಂತೆ ಹಲವು ಕಡೆಗಳಲ್ಲಿ ಸುಧಾಕರ್ ಚಿತ್ರ ಸಮೇತ ಪೋಸ್ಟರ್ಗಳನ್ನು ಅಂಟಿಸಿ, ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ.

'ಒನ್ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ ಸುಧಾಕರ್ ಸಹೋದರ
'ಒನ್ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ ಸುಧಾಕರ್ ಅವರ ಅಣ್ಣ ರಾಜಶೇಖರ್, 'ಕಳೆದ 10 ದಿನದಿಂದ ನಾವು ಮತ್ತು ನಮ್ಮ ಕುಟುಂಬದವರು ಬೆಂಗಳೂರಿನಲ್ಲಿ ಊಟ ನಿದ್ದೆಗಳಿಲ್ಲದೆ ತಮ್ಮನಿಗಾಗಿ ಹುಡುಕಾಟ ನಡೆಸಿದ್ದೇವೆ ಆದರೆ ಸಿಗುತ್ತಲೇ ಇಲ್ಲ, ಯಾವುದೇ ಮೊಬೈಲ್ ಕರೆ ಬಂದರೂ ತಮ್ಮನ ಸುಳಿವು ನೀಡಲು ಕರೆ ಮಾಡಿರಬಹುದಾ ಎಂಬ ಆಸೆಯಿಂದಲೇ ಫೋನ್ ರಿಸೀವ್ ಮಾಡುತ್ತಿದ್ದೇನೆ' ಎಂದು ನಿರಾಸೆ ತುಂಬಿದ ದ್ವನಿಯಲ್ಲಿ ಹೇಳಿದರು.

ಬುದ್ಧಿಮಾಂದ್ಯ ತಮ್ಮನಿಗಾಗಿ ಏಕೆ ಹುಡುಕುತ್ತಿದ್ದೀರಿ?
ಅಪ್ಪ-ಅಮ್ಮನನ್ನೇ ವೃದ್ಧಾಶ್ರಮಗಳಿಗೆ ಸೇರಿಸುವ ಈ ಕಾಲದಲ್ಲಿ ಬುದ್ಧಿಮಾಂದ್ಯ ತಮ್ಮನಿಗಾಗಿ ಇಷ್ಟೇಕೆ ಹುಡುಕುತ್ತಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನನ್ನ ತಮ್ಮ ಅನಾಥ ಹೆಣವಾಗುವುದು ನನಗೆ ಇಷ್ಟವಿಲ್ಲ, ಅವನು ಸಿಕ್ಕರೆ ಸಾಕು, ನಮ್ಮೊಂದಿಗೆ ಇದ್ದರೆ ಸಾಕು, ನಮಗೆ ಸಿಕ್ಕ ಮರುದಿನವೇ ಅವನನ್ನು ನಿಮ್ಹಾನ್ಸ್ಗೆ ಸೇರಿಸುತ್ತೇವೆ, ಅಲ್ಲಿ ಅವನು ಸರಿ ಹೋಗುವ ಭರವಸೆಯನ್ನು ಪರಿಚಯದ ವೈದ್ಯರು ನೀಡಿದ್ದಾರೆ' ಎಂದು ತಮ್ಮನ ಬಗ್ಗೆ ಕಾಳಜಿಯ ಮಾತುಗಳನ್ನಾಡುತ್ತಾರೆ.

ಆಸೆಯನ್ನೇ ಬಿಟ್ಟಿದ್ದ ಕುಟುಂಬಕ್ಕೆ ಭರವಸೆ ತುಂಬಿದ ಚಿತ್ರ
ಸುಧಾಕರ್ ಮೊದಲಿಗೆ ಚೆನ್ನಾಗಿಯೇ ಇದ್ದನಂತೆ ಆದರೆ ಏಕೋ-ಏನೋ ಇದ್ದಕ್ಕಿಂದ್ದಂತೆ ಎಲ್ಲರೊಡನೆ ಮಾತನಾಡುವುದೇ ಬಿಟ್ಟನಂತೆ. ಎಲ್ಲರನ್ನೂ ಗುರುತಿಸುವ ಶಕ್ತಿ ಇತ್ತಂತೆ ಆದರೆ ಒಮ್ಮೆ ಆತನ ಮತ್ತೊಬ್ಬ ಅಣ್ಣ ಹಠಾತ್ತನೇ ತೀರಿಕೊಂಡಾಗ ತೀವ್ರ ಆಘಾತಗೊಂಡಿದ್ದ ಸುಧಾಕರ್ ಮನೆ ಬಿಟ್ಟು ಬಂದುಬಿಟ್ಟಿದ್ದಾನೆ. ಆಗ ಸಾಕಷ್ಟು ಹುಡುಕಾಟ ನಡೆಸಿದ ಕುಟುಂಬ ಸದಸ್ಯರು ಕೆಲವರ ಮಾತು ಕೇಳಿ ಸತ್ತಿದ್ದಾನೆಂದುಕೊಂಡು ಸುಮ್ಮನಾಗಿಬಿಟ್ಟಿದ್ದಾರೆ. ಈಗ ಮತ್ತೆ ಸುಧಾಕರ್ ಕಾಣಿಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications