Prajwal Revanna Case: ಮೇ 31ರ ಮೊದಲು ಪ್ರಜ್ವಲ್ ರೇವಣ್ಣ ದೇಶಕ್ಕೆ ಬರಲೇಬೇಕು! ಏಕೆ ಗೊತ್ತಾ?
ಬೆಂಗಳೂರು, ಮೇ. 29: ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ವಿಶೇಷ ತನಿಖಾ ತಂಡ ಕಣ್ಣಿಟ್ಟಿದೆ. ಇತ್ತೀಚೆಗೆ ವಿಡಿಯೋ ಬಿಡುಗಡೆ ಮಾಡಿ ತಾವು ಮೇ 31ಕ್ಕೆ ಎಸ್ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಆದರೆ, ಮೇ 31ರ ಮೊದಲು ಪ್ರಜ್ವಲ್ ರೇವಣ್ಣ ದೇಶಕ್ಕೆ ಬರಲೇಬೇಕು.
ದೇಶದಿಂದ ನಾಪತ್ತೆಯಾಗಿ ಒಂದು ತಿಂಗಳ ಬಳಿಕ ಹೊಸ ವಿಡಿಯೋ ಮೂಲಕ ಪ್ರತ್ಯಕ್ಷರಾದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಎಸ್ಐಟಿ ಕಾಯುತ್ತಿದೆ. ಇದರ ಜೊತೆಗೆ ಅವರು ಜರ್ಮನಿಯಲ್ಲಿ ಇದ್ದಾರಾ ಅಥವಾ ದೇಶದಲ್ಲೇ ಇದ್ದುಕೊಂಡು ಎಲ್ಲರಿಗೂ ಆಟವಾಡಿಸುತ್ತಿದ್ದಾರಾ ಎಂಬ ಸಂಶಯ ಕೂಡ ವ್ಯಕ್ತವಾಗುತ್ತಿದೆ.

ಮೇ 31ಕ್ಕೆ ಬರುವುದಾಗಿ ಪ್ರಜ್ವಲ್ ರೇವಣ್ಣ ಹೇಳಿದ್ದು ಏಕೆ?
ಈ ತಿಂಗಳ ಮೇ 31ಕ್ಕೆ ಪ್ರಜ್ವಲ್ ರೇವಣ್ಣ ದೇಶಕ್ಕೆ ಬರಲೇ ಬೇಕಿದೆ. ವಿಡಿಯೋ ಬಿಡುಗಡೆ ಮಾಡಿ ಬರುವುದಾಗಿ ಮಾಹಿತಿ ನೀಡಿ ತಾವು ದೊಡ್ಡ ಕೆಲಸ ಮಾಡಿದ್ದೇನೆ ಎಂದು ಜನರಿಗೆ ಮೂರ್ಖರನ್ನಾಗಿಸುವುದು ಅವರ ಐಡಿಯಾ ಇರಬಹುದು. ಆದರೆ, ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಮೇ 31ರ ಒಳಗೆ ಹಾಸನದ ಸಂಸದರು ದೇಶಕ್ಕೆ ಬರಲೇಬೇಕು. ಅದಕ್ಕೆ ಮುಖ್ಯ ಕಾರಣವಿದೆ.
ಏನೆಂದರೆ, ಮೇ 31ರಂದು ಪ್ರಜ್ವಲ್ ರೇವಣ್ಣ ಅವರ ಕಳೆದ ಬಾರಿಯ ಸಂಸದ ಸ್ಥಾನ ಅವಲಂಬಿಸಿ ನೀಡಲಾದ ರಾಜತಾಂತ್ರಿಕ ಪಾಸ್ಪೋರ್ಟ್ನ ಅವಧಿ ಕೊನೆಯಾಗಲಿದೆ. ಹಾಗಾಗಿ ಆ ಪಾಸ್ಪೋರ್ಟ್ ಇಟ್ಟುಕೊಂಡು ಅವರು ಓಡಾಡಲು ಸಾಧ್ಯವಿಲ್ಲ. ಹೀಗಾಗಿ ಅವರು ವಾಪಸ್ ಬರಲೇಬೇಕು.
ಈ ಸಲ ಹಾಸನದಿಂದ ಮತ್ತೆ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಜ್ವಲ್ ರೇವಣ್ಣ, ಮತ್ತೆ ಚುನಾಯಿತರಾದರೆ ಅವರು ಹೊಸದಾಗಿ ರಾಜತಾಂತ್ರಿಕ ಪಾಸ್ಪೋರ್ಟ್ ಮಾಡಿಸಿಕೊಳ್ಳಬೇಕಿದೆ. ಹೀಗಾಗಿ ಹಳೆಯ ಪಾಸ್ಪೋರ್ಟ್ನಲ್ಲಿ ಓಡಾಡಲು ಸಾಧ್ಯವಿಲ್ಲ. ಹೀಗಾಗಿಯೇ ಪ್ರಜ್ವಲ್ ಕೂಡ ಮೇ 31ರಂದು ಬರುತ್ತೇನೆ ಎಂದಿದ್ದಾರೆ ಎನ್ನಲಾಗುತ್ತಿದೆ.

ಪ್ರಜ್ವಲ್ ಬರುವವರೆಗೂ ಕಾಯಲ್ಲ ಎಸ್ಐಟಿ!
ಇನ್ನು, ಇತ್ತೀಚಿನ ಮಾಹಿತಿ ಪ್ರಕಾರ ಪ್ರಜ್ವಲ್ ರೇವಣ್ಣ ತಾವಾಗಿಯೇ ದೇಶಕ್ಕೆ ಬರುವವರೆಗೂ ಕಾಯಲು ಎಸ್ಐಟಿ ತಯಾರಿಲ್ಲ ಎನ್ನಲಾಗಿದೆ. ಪ್ರಜ್ವಲ್ ಹೊರಬಿಟ್ಟಿದ್ದ ವಿಡಿಯೋವನ್ನು ವಿಶೇಷ ತನಿಖಾ ತಂಡ ವಿಶೇಷವಾಗಿ ಪರಿಶೀಲನೆ ನಡೆಸುತ್ತಿದೆ. ಎಲ್ಲಿಂದ ವಿಡಿಯೋ ಮಾಡಲಾಗಿದೆ? ವಿಡಿಯೋದ ಮೂಲ ಯಾವುದು, ಯಾವ ಐಪಿ ಅಡ್ರೆಸ್ನಿಂದ ಆಪ್ಲೋಡ್ ಆಗಿದೆ..? ಎಂಬ ಮಾಹಿತಿಗಳ ಜೊತೆಗೆ ಮದರ್ ಡಿವೈಸ್ ಮಾಹಿತಿ ಪತ್ತೆಗೆ ಪ್ರಯತ್ನಿಸುತ್ತಿದೆ. ಹೀಗಾಗಿ ಹಾಸನ ಸಂಸದ ಬೆಂಗಳೂರಿಗೆ ಬರುವ ಮುನ್ನವೆ ಬಂಧಿಸಲು ಯತ್ನಿಸುತ್ತಿದೆ.
ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ
ಇತ್ತ, ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್ ನಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಏರ್ಲೈನ್ಸ್ನಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿದ್ದು, ಮೇ 31ರ ಮಧ್ಯರಾತ್ರಿ ಜರ್ಮನಿಯ ಮ್ಯೂನಿಚ್ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಜೂನ್ 1ಕ್ಕೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.












Click it and Unblock the Notifications