"ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯಲು ಪ್ರಭಾವ ಬಳಸುವ ಸ್ಥಿತಿ ಬಂತು"
ಬೆಂಗಳೂರು, ಏಪ್ರಿಲ್ 28: "ಕೊರೊನಾ ಸೋಂಕು ತಗುಲಿದ ನನ್ನ ಸಂಬಂಧಿಯೊಬ್ಬರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಪಡೆದುಕೊಳ್ಳಲು ರಾಜಕೀಯ ಪ್ರಭಾವ ಬಳಸಿಕೊಳ್ಳಬೇಕಾಯಿತು" ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು, ಇದಕ್ಕೆ ರಾಜ್ಯದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧ ಮಾಡಿಟ್ಟುಕೊಂಡಿಲ್ಲ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದರು.
"ನನ್ನ ಸಂಬಂಧಿಯೊಬ್ಬರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಲ್ಲಿ ಸರಿಯಾದ ಸೇವೆ ಸಿಗದೇ ಡಿಸ್ಚಾರ್ಜ್ ಆದರು. ಒಂದು ವಾರ್ಡ್ನಲ್ಲಿ ಮೂರು ಜನ ಇದ್ದರು. ಆಸ್ಪತ್ರೆ ಸಿಬ್ಬಂದಿಯೂ ನಿಗಾ ವಹಿಸುತ್ತಿರಲಿಲ್ಲ. ಕೊನೆಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಹಾಸಿಗೆ ಪಡೆಯಲು ರಾಜಕೀಯ ಪ್ರಭಾವ ಬಳಸುವ ಸ್ಥಿತಿ ಬಂತು" ಎಂದು ಹೇಳಿದ್ದಾರೆ.

ಕೊರೊನಾ ಎರಡನೇ ಅಲೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ಸೋತಿದೆ. ಈ ಮುನ್ನವೇ ಕೊರೊನಾ ತೀವ್ರತೆಯ ಕುರಿತು ಎಚ್ಚರಿಕೆ ನೀಡಿದ್ದರೂ ಅದನ್ನು ಅಲಕ್ಷಿಸಿ ಇಂದು ಜನರಿಗೆ ಇಂಥ ಸಂಕಷ್ಟ ತಂದೊಡ್ಡಿದೆ ಎಂದು ಈ ಹಿಂದೆಯೂ ಸಿದ್ದರಾಮಯ್ಯ ದೂರಿದ್ದರು.
ನವೆಂಬರ್ ತಿಂಗಳಲ್ಲಿಯೇ ಕೋವಿಡ್ 2ನೇ ಅಲೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳ ಹೊತ್ತಿಗೆ ತನ್ನ ಭೀಕರತೆ ಪ್ರದರ್ಶಿಸಲಿದೆ ಎಂದು ತಜ್ಞರು ಹೇಳಿದ್ದರು. ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ಬದಲಾಗಿ ಹಲವು ಸಚಿವರು ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿಯೇ 'ನಾವು ಕೋವಿಡ್ ವಿರುದ್ಧ ಜಯ ಸಾಧಿಸುವ ಹಂತಕ್ಕೆ ಬಂದಿದ್ದೇವೆ. ಕೊರೊನಾವನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದು ಜಯಘೋಷ ಮಾಡಲಾರಂಭಿಸಿದರು ಎಂದು ಕಿಡಿಕಾರಿದ್ದರು.
ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಜೋರಾಗಿದ್ದು, ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಹಾಗೂ ವೈದ್ಯಕೀಯ ಆಮ್ಲಜನಕದ ಬಿಕ್ಕಟ್ಟೂ ಸೃಷ್ಟಿಯಾಗಿದೆ. ಮಂಗಳವಾರ ಕರ್ನಾಟಕದಲ್ಲಿ 31,830 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಒಂದರಲ್ಲಿಯೇ 17,550 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications