ಈಗಲ್ಟನ್ ರೆಸಾರ್ಟ್ ನಲ್ಲಿರುವ ಗುಜರಾತ್ ಶಾಸಕರಿಗೆ ಪ್ರವಾಸ ಭಾಗ್ಯ?!
ಬೆಂಗಳೂರು, ಆಗಸ್ಟ್ 5: ಅತ್ತ ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ ಮೇಲೆ ಸತತ ನಾಲ್ಕು ದಿನಗಳಿಂದ ಐಟಿ ದಾಳಿ ನಡೆಯುತ್ತಿದ್ದರೆ, ಇತ್ತ ಬೆಂಗಳೂರಿನ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ತಂಗಿರುವ ಗುಜರಾತ್ ಶಾಸಕರು ಮೋಜಿನ ಪ್ರವಾಸಕ್ಕೆ ತೆರಳುತ್ತಿದ್ದಾರಾ..?
ಕೆಲವು ಮೂಲಗಳ ಪ್ರಕಾರ ಇಂದು(ಆಗಸ್ಟ್ 5) ಬೆಳಿಗ್ಗೆ ಈಗಲ್ಟನ್ ರೆಸಾರ್ಟಿಗೆ ಎರಡು ವೋಲ್ವೋ(ಐರಾವತ) ಬಸ್ ಗಳು ತೆರಳಿದ್ದು ಶಾಸಕರನ್ನು ಪ್ರವಾಸಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ. ಗುಜರಾತಿನಲ್ಲಿ ಆಗಸ್ಟ್ 8 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗಾಗಿ ಬಿಜೆಪಿ 'ಆಪರೇಷನ್ ಕಮಲ' ನಡೆಸಬಹುದಾದ ಸಾಧ್ಯತೆಗೆ ಹೆದರಿ ಜುಲೈ 29 ರಂದೇ ಬೆಂಗಳೂರಿನ ಈಗಲ್ಟನ್-ದಿ ಗಾಲ್ಫ್ ರೆಸಾರ್ಟ್ ಗೆ ಗುಜರಾತಿನ 44 ಕಾಂಗ್ರೆಸ್ ಶಾಸಕರು ಬಂದಿದ್ದರು.

ಇವರ ಉಸ್ತುವಾರಿ ವಹಿಸಿದ್ದ ಡಿಕೆಶಿ ಅವರ ಮನೆ ಮೇಲೆ ಮತ್ತು ರೆಸಾರ್ಟ್ ನಲ್ಲಿ ಡಿಕೆಶಿ ತಂಗಿದ್ದ ಕೋಣೆಯ ಮೇಲೆ ಆಗಸ್ಟ್ 2 ರಂದು ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ, ಶಾಸಕರಲ್ಲಿ ನಡುಕ ಆರಂಭವಾಗಿತ್ತು.
ಗುಜರಾತ್ ತುಂಬ ಪ್ರವಾಹ ಮನೆಮಾಡಿದ್ದರೆ ಇತ್ತ ರೆಸಾರ್ಟ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಹಾಯಾಗಿದ್ದ ಶಾಸಕರಿಗೆ ಐಟಿ ದಾಳಿಯ ಸುದ್ದಿ ಕೇಳುತ್ತಲೇ ಈ ಬೆಂಗಳೂರಿನ ಸಹವಾಸವೇ ಸಾಕು ಅನ್ನಿಸಿತ್ತು. ಆದರೆ ಇಂದು ಬೆಳಿಗ್ಗೆ ರೆಸಾರ್ಟ್ ಬಳಿ ಬಂದ ಎರಡು ಐರಾವತ ಬಸ್ ಗಳು ಕಾಂಗ್ರೆಸ್ ಶಾಸಕರಿಗೆ ಪ್ರವಾಸ ಭಾಗ್ಯ ಕಲ್ಪಿಸಲಿವೆ ಎಂಬ ಮಾಹಿತಿ ದೊರಕಿದೆ. ಶಾಸಕರು ಮೊದಲು ವಿಧಾನ ಸೌಧಕ್ಕೆ ತೆರಳಿದ್ದು, ಉಳಿದಂತೆ ಎಲ್ಲೆಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications