ಮೋಸಕ್ಕೆ ಬೇಸತ್ತು ಜೆಡಿಎಸ್ ಗೂಡು ಬಿಡುವರೇ ಗುಬ್ಬಿ ವಾಸಣ್ಣ !
ಬೆಂಗಳೂರು, ಡಿಸೆಂಬರ್ 21: ಜೆಡಿಎಸ್ ಗೂಡು ಬಿಡಲು ಗುಬ್ಬಿ ವಾಸಣ್ಣ ಸಜ್ಜಾದರೇ ? ಸ್ವ- ಪಕ್ಷದಿಂದ ಆಗಿರುವ ಮೋಸಕ್ಕೆ ಬೇಸತ್ತು ಮಾತೃ ಪಕ್ಷದತ್ತ ಹೊರಡಲು ಪೂರ್ವ ತಯಾರಿ ನಡೆಸಿದರೇ ? ಈ ವಿಚಾರ ಗುಬ್ಬಿ ಕ್ಷೇತ್ರದಲ್ಲಿ ಮಾತ್ರವಲ್ಲ ಇಡೀ ರಾಜ್ಯ ರಾಜಕಾರಣಲ್ಲಿ ಭಾರೀ ಚರ್ಚೆ ಹುಟ್ಟ ಹಾಕಿದೆ.
ರಾಜ್ಯ ರಾಜಕಾರಣದಲ್ಲಿ ಒಂದಡೆ ಬದಲಾವಣೆ ಪರ್ವ ಶುರುವಾಗಿದೆ. ಉಪ ಚುನಾವಣೆಯಲ್ಲಿ ತಂತ್ರಗಳು ವಿಫಲವಾದ ಬಳಿಕ ಕಾಂಗ್ರೆಸ್ ಮಂದಿನ ಮೂರು ವರ್ಷದಲ್ಲಿ ಎದುರಾಗಲಿರುವ ಚುನಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷ ಗಟ್ಟಿ ಮಾಡಿಕೊಳ್ಳಲು ಕಾರ್ಯಕರ್ತರ ಗೆಲುವಿಗೆ ಹೆಚ್ಚು ಮಹತ್ವ ನೀಡಿದೆ. ಇತ್ತ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ. ಬಿಜೆಪಿ ಪಕ್ಷದೊಳಗೆ ಜೆಡಿಎಸ್ ವಿಲೀನವಾಗುತ್ತದೆ. ಹೀಗಾಗಿಯೇ ದೋಸ್ತಿ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಗರಂ ಆಗಿ ಹೇಳಿಕೆ ನೀಡುತ್ತಿದ್ದಾರೆ ಎಂಬ ವಾದಗಳು ಹುಟ್ಟಿಕೊಂಡಿವೆ. ರಾಜಕೀಯ ಪಕ್ಷಗಳು ಭವಿಷ್ಯದ ತಂತ್ರಗಾರಿಕೆ ಎಣೆಯುತ್ತಿವೆ. ಅದೇ ರೀತಿ ಕೆಲವು ರಾಜಕಾರಣಿಗಳು ಕೂಡ ತಮ್ಮ ಭವಿಷ್ಯ ಭದ್ರ ಪಡಿಸಿಕೊಳ್ಳಲು ಅನ್ಯ ಪಕ್ಷಗಳಲ್ಲಿನ ಅವಕಾಶ ನೋಡುತ್ತಿದ್ದಾರೆ.
ಅದರ ಸಾಲಿನಲ್ಲಿ ಸದ್ಯಕ್ಕೆ ಮೊದಲು ನಿಂತಿರುವರು ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್. ಮಾತೃ ಪಕ್ಷವಾದ ಕಾಂಗ್ರೆಸ್ ಗೆ ಮರಳಲು ಅವರು ಪೂರ್ವ ತಯಾರಿ ನಡೆಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ, ಸೇರಿದ ಬಳಿಕ ಪಕ್ಷದ ಟಿಕೆಟ್ ಖಚಿತತೆ, ಪಕ್ಷ ಅಧಿಕಾರಕ್ಕೆ ಬಂದರೆ, ಸಿಗುವ ಸ್ಥಾನಮಾನದ ಬಗ್ಗೆ ಮೊದಲೇ ಖಚಿತ ಪಡಿಸಿಕೊಂಡು ಹೋಗಲು ಮುಂದಾಗಿದ್ದಾರೆ. ಚುನಾವಣೆ ಸಮೀಪಿಸಿದಾಗ ಹೋಗಲು ನಿರ್ಧರಿಸಿದ್ದಾರೆ ಎಂಬ ಸಂಗತಿಯನ್ನು ಅವರ ಆಪ್ತ ಮೂಲಗಳು ಖಚಿತ ಪಡಿಸಿದೆ. ಪಕ್ಷ ತೊರೆಯಲು ಅವರು ಮುಂದಿಟ್ಟಿರುವ ಕಾರಣಗಳು ಮಾತ್ರ ಭಯಂಕರವಾಗಿವೆ.
ಚಂದ್ರ ಚಕೋರಿ ಸಂಬಂಧ :
ಗುಬ್ಬಿ ಶ್ರೀನಿವಾಸ್ ಸ್ಥಳೀಯ ನಾಯಕರಾಗಿ ವರ್ಚಸ್ಸು ಬೆಳೆಸಿಕೊಂಡು ಶಾಸಕರಾಗಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಂದ್ರ ಚಕೋರಿ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಸಿನಿಮಾಗೆ ಬಂಡವಾಳದ ಸಮಸ್ಯೆ ಎದುರಾಗಿತ್ತು. ರಾಜಕೀಯವಾಗಿ ವಾಸಣ್ಣ ಎಂದೇ ಪರಿಚಿತರಾಗಿದ್ದ ಶ್ರೀನಿವಾಸ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿ ಸಿನಿಮಾಗೆ ಹೂಡಿಕೆ ಮಾಡಲು ತಿಳಿಸಿದ್ದರಂತೆ. ಎರಡು ಮಾತು ಆಡದೇ ಚಂದ್ರ ಚಕೋರಿ ಸಿನಿಮಾಗೆ ಗುಬ್ಬಿ ವಾಸಣ್ಣ ಬಂಡವಾಳ ಹಾಕಿದ್ದರು. ಬಂಡವಾಳ ಹೂಡಿಕೆ ಮಾಡಿದಾಗ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ನೀಡುವ ಭರವಸೆ ನೀಡಿದ್ದರಂತೆ. ಇದು ಕುಮಾರಣ್ಣ ಮತ್ತು ವಾಸಣ್ಣ ನಡುವೆ ಬಾಂಧವ್ಯಕ್ಕೆ ನಾಂದಿ ಹಾಡಿತ್ತು.
ಕೈಯಿಂದ ಉಚ್ಛಾಟನೆ:
ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ನಾಯಕರಾಗಿ ಗುರುತಿಸಿಕೊಂಡಿದ್ದ ವಾಸಣ್ಣ ಪ್ರಭಾವಿ ನಾಯಕರಾಗಿ ಹೊರ ಹೊಮ್ಮಿದ್ದರು. ಇನ್ನೇನು ಕಾಂಗ್ರೆಸ್ ಪಕ್ಷದಲ್ಲಿ ಭದ್ರ ಬುನಾದಿ ಸಿಗುವ ಹೊಸ್ತಿನಲ್ಲಿಯೇ ಗುಬ್ಬಿ ಶ್ರೀನಿವಾಸ್ ಮತ್ತು ಅವರ ತಂದೆ ರಾಮೇಗೌಡರನ್ನು ತುಮಕೂರಿನ ಕಾಂಗ್ರೆಸ್ ಮುಖಂಡರಾದ ಜಿ.ಎ. ಬಸವರಾಜು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದರು. ಪಕ್ಷ ವಿರೊಧಿ ಚಟುವಟಿಕೆ ಆರೋಪ ಹೊರಿಸಿದ್ದರು. ಇದೇ ಸಮಯಕ್ಕೆ 2004ರ ವಿಧಾನಸಭೆ ಚುನಾವಣೆ ಎದುರಾಗಿತ್ತು. ಜಿಲ್ಲಾ ನಾಯಕರ ಆಂತರಿಕ ಕಚ್ಚಾಟದಿಂದ ಪಕ್ಷದಿಂದ ಹೊರ ಬಂದಿದ್ದ ಶ್ರೀನಿವಾಸ್ ಶಾಸಕರಾಗಿ ಅದೃಷ್ಟ ಪರೀಕ್ಷೆಗೆ ತಯಾರಿ ನಡೆಸಿದ್ದರು.
ಕೈಕೊಟ್ಟ ಜೆಡಿಎಸ್:
ಕುಮಾರಣ್ಣ ಅವರು ಭರವಸೆ ನೀಡಿದ್ದು, ಉತ್ತಮ ಬಾಂಧವ್ಯವಿದೆ. ಪಕ್ಷದ ವರ್ಚಸ್ಸೂ ಇದೆ. ಹೀಗಾಗಿ ಜೆಡಿಎಸ್ ನಿಂದ ಕಣಕ್ಕೆ ಇಳಿಯಲು ಭಿ ಫಾರಂ ಸಿಗುತ್ತದೆ ಎಂಬ ಭಾವನೆಯಲ್ಲಿಯೇ ಗುಬ್ಬಿ ಶ್ರೀನಿವಾಸ್ ತೇಲಾಡುತ್ತಿದ್ದರು. ಜೆಡಿಎಸ್ ನಲ್ಲಿ ಕುಮಾರಣ್ಣ ಅವರ ಮಾತ ನಡೆಯಬೇಕಲ್ಲವೇ ? ಜೆಡಿಎಸ್ ಪಕ್ದದ ಬಿ ಫಾರಂನ್ನು ಗುಬ್ಬಿ ಮಾಜಿ ಶಾಸಕ ಶಿವನಂಜಪ್ಪ ಅವರಿಗೆ ಕೊಟ್ಟು ಮಾಜಿ ಪ್ರಧಾನಿ ದೇವೇಗೌಡರು ತೀರ್ಮಾನ ತೆಗೆದುಕೊಂಡಿದ್ದರು. ಮೂಲ ಕಾಂಗ್ರೆಸ್ ನಲ್ಲಿ ಎರಡು ಬಾರಿ ಶಾಸಕರಾಗಿದ್ದ ಶಿವನಂಜಪ್ಪ ಕಾಂಗ್ರೆಸ್ ನಿಂದ ಟಿಕೆಟ್ ವಂಚಿತರಾಗಿ ಸ್ವತಂತ್ರ್ಯ ಅಭ್ಯರ್ಥಿಯಾಗಿ 1994 ರಲ್ಲಿ ಜಯ ಗಳಿಸಿದ್ದರು. ಇಂತಹ ಕ್ಯಾಂಡಿಡೇಟ್ ಬಿಟ್ಟು ಎಂಎಲ್ ಎ ಚುನಾವಣೆ ಎದುರಿಸದ ಶ್ರೀನಿವಾಸ್ ಗೆ ಕೊಟ್ಟರೆ ಒಂದು ಸೀಟು ಹೋದಂತೆ ಅಲ್ಲವೇ ಎಂಬುದು ದೊಡ್ಡಗೌಡರ ಲೆಕ್ಕಾಚಾರ. ಬೇರೆ ದಾರಿ ಕಾಣದೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಶ್ರೀನಿವಾಸ್ ಜಯದ ಮಾಲೆಯನ್ನು ಹಾಕಿಕೊಂಡರು. ಆನಂತರ ಓಡಿ ಬಂದಿದ್ದ ಕುಮಾರಸ್ವಾಮಿ ನಡೆದ ಪ್ರಮಾದ ಕ್ಷಮಿಸುವಂತೆ ಹೇಳಿ ಜೆಡಿಎಸ್ ಪಕ್ಷಕ್ಕೆ ಎಳೆದು ತಂದಿದ್ದರು.
ಮೈತ್ರಿ ಮುರಿದ್ರು ವಾಸಣ್ಣ ಸೋತಿಲ್ಲ:
ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಮುರಿದ ಬಿದ್ದ ನಂತರ ಕುಮಾರಸ್ವಾಮಿ ಅವರು ದ್ರೋಹ ಮಾಡಿದರು ಎಂಬ ಒಂದು ಅಂಶ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಿತ್ತು. ನಿರೀಕ್ಷೆಗೂ ಮೀರಿದ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಅನುಕಂಪದ ಅಲೆ ಬಿಜೆಪಿಗೆ ಬಿದ್ದಿದ್ದವು. ಹೇಳಿ ಕೇಳಿ ಲಿಂಗಾಯುತ ಸಮುದಾಯವೇ ತುಂಬಿರುವ ಗುಬ್ಬಿ ಕ್ಷೇತ್ರದಲ್ಲಿ ಇಂತಹ ಕಷ್ಟ ಕಾಲದಲ್ಲೂ ಜೆಡಿಎಸ್ ಗೆದ್ದು ಬಂದಿತ್ತು. ವಚನ ಭ್ರಷ್ಟ ಅಪವಾದದಿಂದ ಜೆಡಿಎಸ್ ಕ್ಷೇತ್ರಗಳು ಕಳೆದುಕೊಂಡರು ಗುಬ್ಬಿ ಮಾತ್ರ ಜಯ ತಂದು ಕೊಟ್ಟಿತ್ತು. ಈವರೆಗೂ ನಾಲ್ಕು ಬಾರಿ ಶಾಸಕರಾಗಿ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ಒಂದು ದಿನವೂ ಬಿಡದೇ ಕ್ಷೇತ್ರದಲ್ಲೇ ಇರುವ ಶ್ರೀನಿವಾಸ್ ಜನರಿಗೆ ಸುಲಭವಾಗಿ ಸಿಕ್ಕುತ್ತಾರೆ.
Recommended Video
ಸಣ್ಣ ಖಾತೆಯಲ್ಲೂ ಸ್ವತಂತ್ರ್ಯವಿರಲಿಲ್ಲ:
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿದ್ದರು. ಪ್ಲಾಸ್ಟಿಕ್ ಬಳಕೆ ಮುಕ್ತ ಗೊಳಿಸಿ ತೆಂಗು ನಾರಿಗೆ ಮಹತ್ವ ಕೊಡುವ ನಿಟ್ಟಿನಲ್ಲಿ 900 ಕೋಟಿ ಮೊತ್ತದ ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದರು. ಬಜೆಟ್ ನಲ್ಲಿ ಹಣ ಮೀಸಲಿಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಕುಮಾರಣ್ಣ ಒಂದು ಪೈಸೆ ಬಿಡುಗಡೆ ಮಾಡಲಿಲ್ಲ. ಆಡಳಿತ ವಿಚಾರಕ್ಕೆ ಬಂದಾಗ ಶ್ರೀನಿವಾಸ್ ಅವರ ನಿರ್ದೇಶನ, ಸಲಹೆಗಳನ್ನು ಪಾಲಿಸದ ಅಧಿಕಾರಿಯನ್ನು ಬದಲಿಸುವಂತೆ ಮನವಿ ಮಾಡಿದರು. ಆದರೆ, ಸಚಿವ ರೇವಣ್ಣ ಅವರು ಅದಕ್ಕೆ ಆಸ್ಪದ ಕೊಡಲಿಲ್ಲ. ಈ ಸಚಿವ ಸ್ಥಾನವೇ ಬೇಡ ಎಂಬುವಷ್ಟರ ಮಟ್ಟಿಗೆ ಮುನಿಸಿಕೊಂಡಿದ್ದರು. ಕೊನೆಗೆ ದೋಸ್ತಿಯೇ ಮುರಿದು ಬಿತ್ತು. ಹೀಗಾಗಿ ಜೆಡಿಎಸ್ ಪಕ್ಷದಿಂದ ಕಳೆದ ಎರಡು ದಶಕದಿಂದ ಆಗಿರುವ ಮೋಸಕ್ಕೆ ಬೇಸತ್ತು ಶ್ರೀನಿವಾಸ್ ರಾಜಕೀಯವಾಗಿ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಟ್ಟಿದ್ದ ಕೈ ನತ್ತ ಮರಳಲಿದ್ದಾರೆ ಎನ್ನಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಅವರು ಜೆಡಿಎಸ್ ತೊರೆಯಲಿದ್ದಾರೆ ಎಂಬುದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.