ಸರ್ಕಾರಿ ಕಾರು ವಾಪಸ್: ಸಿಟಿ ರವಿ ಪ್ರತಿಕ್ರಿಯೆ ಏನು?
ಬೆಂಗಳೂರು, ಆಗಸ್ಟ್ 27: ಸರ್ಕಾರಿ ಕಾರು ಹಿಂದಿರುಗಿಸಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ನಾನು ಪ್ರತಿದಿನ ಸರ್ಕಾರಿ ಕಾರನ್ನು ವಾಪಸ್ ಕಳಿಸುತ್ತೇನೆ. ಎಂದಿನಂತೆ ಇಂದೂ ಕಳಿಸಿದ್ದೇನೆ ಎಂದು ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಸಿಟಿ ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಂತೆ ಹಾಗಾಗಿ ಸರ್ಕಾರಿ ಕಾರನ್ನು ವಾಪಸ್ ಕಳುಹಿಸಿದ್ದಾರೆಎ, ಎನ್ನುವ ಸುದ್ದಿ ಸೋಮವಾರ ಸಂಜೆಯಿಂದ ಹರಿದಾಡುತ್ತಿತ್ತು, ಅದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಪ್ರತಿದಿನವೂ ಕಾರನ್ನು ವಾಪಸ್ ಕಳುಹಿಸುತ್ತೇನೆ ಅದರಲ್ಲಿ ಹೊಸತೇನು ಇಲ್ಲ ಎಂದರು.
ಸಿ. ಟಿ. ರವಿ ರಾಜೀನಾಮೆ?; ಸರ್ಕಾರಿ ಕಾರು ವಾಪಸ್!
ತಾವು ನಿರೀಕ್ಷಿಸಿದ ಖಾತೆ ಸಿಗದ ಕಾರಣ ಬೇಸರಗೊಂಡು ಸರ್ಕಾರಿ ಕಾರನ್ನು ವಾಪಸ್ ಕಳಿಸಿದ್ದಾರೆ ಎಂಬುದೊಂದು ಸುದ್ದಿ ನಿನ್ನೆ ಹರಡಿತ್ತು. ಈ ವಿಚಾರಗಳ ಬಗ್ಗೆ ಸೋಮವಾರ ರಾತ್ರಿ ಟ್ವೀಟ್ ಮಾಡಿರುವ ಸಿ.ಟಿ.ರವಿ , ಕೊನೆಗೆ ಮಾಧ್ಯಮದವರ ಬಳಿಯೂ ಮಾತನಾಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ: ಅಡ್ಡಗೋಡೆ ಮೇಲೆ ದೀಪ ಇಟ್ಟ ಸಿ.ಟಿ ರವಿ
ನಾನು ಪಕ್ಷಕ್ಕೆಂದೂ ವಂಚನೆ ಮಾಡೋದಿಲ್ಲ, ಸಿದ್ಧಾಂತ ನಿಷ್ಠ ಸ್ವಾಭಿಮಾನಿ ಎಂದು ಹೇಳಿರುವ ಸಿ.ಟಿ.ರವಿ ಅವರು, ನಮ್ಮ ಮನೆಯಲ್ಲಿ ಯಾರೂ ಪಂಚಾಯಿತಿ ಸದಸ್ಯ ಕೂಡ ಇರಲಿಲ್ಲ. ನನ್ನ ಪಕ್ಷ ನನ್ನನ್ನು ಎಂಎಲ್ಎ ಮಾಡಿದೆ. 31 ವರ್ಷಗಳ ಹಿಂದೆ ಬೂತ್ ಕಮಿಟಿ ಅಧ್ಯಕ್ಷನಾಗಿದ್ದೆ. ನನಗೆ ಪಕ್ಷ ಹಲವು ಜವಾಬ್ದಾರಿಗಳನ್ನು ನೀಡಿದೆ. ನಾನು ಅಸಮಾಧಾನಿತನೂ ಅಲ್ಲ, ಬಂಡಾಯಗಾರನೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನನಗೆ ತಾಯಿ ಇದ್ದಂತೆ ಎಂದ ಸಿಟಿ ರವಿ
ಬಿಜೆಪಿ ಪಕ್ಷವು ನನಗೆ ತಾಯಿ ಇದ್ದಂತೆ, ತಾಯಿಗೆ ನೋವಾಗುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ, ಯಾರೂ ಆ ಕೆಲಸ ಮಾಡಬಾರದು, ಕಾರ್ಯಕರ್ತರು ರಾಜೀನಾಮೆ ನೀಡಲು ಮುಂದಾಗಿರುವ ವಿಷಯ ನನಗೆ ತಿಳಿದಿಲ್ಲ, ಅಧಿಕಾರ ಒಂದು ಉತ್ಪನ್ನವಷ್ಟೇ ಪಕ್ಷ ಉತ್ಪಾದನಾ ಘಟಕ ಎಂದು ಹೇಳಿದರು.
ನಾನೊಬ್ಬ ಹೋರಾಟಗಾರ
ನಾನೊಬ್ಬ ಹೋರಾಟಗಾರ, ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನನ್ನೊಳಗಿನ ಹೋರಾಟಗಾರ ಎದ್ದುನಿಲ್ಲುತ್ತಾನೆ. ಹಾಗಂತ ನಾನು ಪಕ್ಷ ನಿಷ್ಠೆಯನ್ನು ಯಾವತ್ತೂ ಬಿಟ್ಟಿಲ್ಲ. ಅಧಿಕಾರ ಮತ್ತು ಹುದ್ದೆಯ ಭ್ರಮೆಯಿಂದ ಪಕ್ಷದ ನಿಷ್ಠೆ ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೇ ದಿನ ಎಂದು ಟ್ವೀಟ್ ಕೂಡ ಮಾಡಿದ್ದಾರೆ.
ನಾನು ಸಚಿವ ಸ್ಥಾನ ಆಕಾಂಕ್ಷಿಯಾಗಿರಲಿಲ್ಲ
ನಾನು ಎಂದೂ ಸಚಿವ ಸ್ಥಾನಕ್ಕೆ ಅಪೇಕ್ಷೆ ಪಟ್ಟವನಲ್ಲ ಇಂಥದ್ದೇ ಖಾತೆ ನನಗೆ ನೀಡಿ ಎಂದೂ ಕೇಳಿರಲಿಲ್ಲ,ಕೆಲವು ಸಂಗತಿಗಳನ್ನು ಕಾಲವೇ ನಿರ್ಣಯ ಮಾಡುತ್ತದೆ. ಆ ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ನನಗೆ ನನ್ನ ಪಕ್ಷದ ಇತಿಮಿತಿ ಗೊತ್ತು. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಇದು ಸೂಕ್ತ ಕಾಲವಲ್ಲ ಎಂದರು.
ಮನುಷ್ಯನ ಆಸೆಗೆ ಮಿತಿ ಎನ್ನುವುದೇ ಇಲ್ಲ
ಮನುಷ್ಯನ ಆಸೆಗೆ ಮಿತಿ ಎನ್ನುವುದೇ ಇಲ್ಲ, ನಾನು ಸಿದ್ಧಾಂತ ನಿಷ್ಠ ಸ್ವಾಭಿಮಾನಿ. ನನಗೆ ಏನೋ ಟೆನ್ಷನ್ ಇದೆ ಎಂದು ಭಾವಿಸಿ ಕೆಲವು ಸ್ನೇಹಿತರು ನನ್ನ ಬಳಿ ಬಂದರು. ನಾನು ನಿರಾಳವಾಗಿರುವುದನ್ನು ನೋಡಿ ಅವರೇ ಟೆನ್ಷ್ನ್ ಮಾಡಿಕೊಂಡು ಹೋದರು ಎಂದು ವ್ಯಂಗ್ಯವಾಡಿದರು.ನಾನು ರಾಜೀನಾಮೆ ನೀಡುತ್ತೇನೆ ಎಂದು ಯಾವ ಮಾಧ್ಯಮದ ಬಳಿಯೂ ಹೇಳಿಲ್ಲ. ಹಾಗಂತ ನನ್ನ ಮನಸಿನಲ್ಲಿ ಏನೂ ಭಾವನೆ ಇಲ್ಲ ಎಂದು ಹೇಳಿದರು.